ತುಮಕೂರು
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದ “ತುಮಕೂರು ಒನ್” ಕಚೇರಿ ಪಕ್ಕ -ಹಳೆಯ ಎಡಿಬಿ ಕಟ್ಟಡದ ಹಿಂಭಾಗದಲ್ಲಿ- `ದೀನದಯಾಳ್ ಅಂತ್ಯೋದಯ ಯೋಜನೆ’ಯಡಿ ಮಹಾನಗರ ಪಾಲಿಕೆಯು ಸುಸಜ್ಜಿತವಾಗಿ ನಿರ್ಮಿಸಿರುವ “ವಸತಿ ರಹಿತರ ಆಶ್ರಯ ಕೇಂದ್ರ” ಇದೇ ಮಾರ್ಚ್ 4 ರಿಂದ ಚಾಲನೆಗೊಂಡಿದ್ದು, ಇದೀಗ ಪ್ರತಿನಿತ್ಯ ರಾತ್ರಿ ಸುಮಾರು 7 ರಿಂದ 8 ಜನರು ಇದರ ಸೌಲಭ್ಯವನ್ನು ಪಡೆದುಕೊಳ್ಳಲಾರಂಭಿಸಿದ್ದಾರೆ.
ತುಮಕೂರು ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ, ಅಂಗಡಿ ಮಳಿಗೆಗಳ ಮೆಟ್ಟಿಲುಗಳ ಮೇಲೆ ರಾತ್ರಿ ವೇಳೆ ನಿದ್ರಿಸುವ ಬಡವರು/ನಿರಾಶ್ರಿತರಿತರ ಅನುಕೂಲ ಹಾಗೂ ಸುರಕ್ಷತೆಗಾಗಿಯೇ ಈ “ಉಚಿತ ಆಶ್ರಯ ಕೇಂದ್ರ”ವನ್ನು ಸರ್ಕಾರ ನಿರ್ಮಿಸಿದ್ದು, ಅಂತಹ ನಿರಾಶ್ರಿತರು ರಾತ್ರಿ ವೇಳೆಯಲ್ಲಿ ಇಲ್ಲಿಗೆ ಬಂದು ನಿದ್ರಿಸಿ ಬೆಳಗ್ಗೆ ನಿರ್ಗಮಿಸಬಹುದಾಗಿದೆ.
ರಾತ್ರಿ 10 ರೊಳಗೆ ಬರಬೇಕು
“ಇಲ್ಲಿ ಕಬ್ಬಿಣದ ಮಂಚ, ಹಾಸಿಗೆ, ದಿಂಬು ಮತ್ತು ಹೊದಿಕೆಯ ಸೌಲಬ್ಯವಿದೆ. ಶೌಚಾಲಯ ಮತ್ತು ಸ್ನಾನಗೃಹದ ವ್ಯವಸ್ಥೆ ಇದೆ. ಗೀಸರ್ ಮೂಲಕ ಬಿಸಿ ನೀರಿಗೂ ಸೌಲಭ್ಯ ಕಲ್ಪಿಸಲಾಗಿದೆ. ಸೂಕ್ತ ವಿದ್ಯುತ್ದೀಪಗಳು ಹಾಗೂ ಫ್ಯಾನ್ಗಳು ಇವೆ. ಸೊಳ್ಳೆಗಳಿಂದ ರಕ್ಷಣೆಗೂ ವ್ಯವಸ್ಥೆ ಮಾಡಲಾಗುತ್ತಿದೆ.
ರಾತ್ರಿ 7 ರಿಂದ 10 ಗಂಟೆಯೊಳಗೆ ಇಲ್ಲಿಗೆ ನಿರಾಶ್ರಿತರು ಬಂದು ರಾತ್ರಿಯಿಡಿ ವಿಶ್ರಾಂತಿ ಪಡೆಯಬಹುದು. ಬೆಳಗ್ಗೆ ಎದ್ದು ಶೌಚ, ಸ್ನಾನ ಮುಗಿಸಿ ನಿರ್ಗಮಿಸಬಹುದು. ನೆಲ ಅಂತಸ್ತಿನಲ್ಲಿ ಪುರುಷರಿಗೆ ಮತ್ತು ಮೊದಲನೇ ಅಂತಸ್ತಿನಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಸುಮಾರು 50 ಜನರು ಇದರ ಸೌಲಭ್ಯ ಪಡೆಯಬಹುದಾದ ಪ್ರಮಾಣದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಇವೆಲ್ಲ ಸೌಲಭ್ಯಗಳೂ ಉಚಿತವಾಗಿ ಲಭಿಸುತ್ತವೆ. ಖಾಸಗಿ ಸ್ವಯಂಸೇವಾ ಸಂಸ್ಥೆಯು ಇದರ ನಿರ್ವಹಣೆಗೆ ನಿಯುಕ್ತಿಗೊಂಡಿದೆ” ಎಂದು ಮೂಲಗಳು ತಿಳಿಸಿವೆ.
ನಿರಾಶ್ರಿತರಷ್ಟೇ ಅಲ್ಲದೆ ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ಸೇರಿಸಲು ಅವರ ಜೊತೆಯಲ್ಲಿ ಬರುವ ಬಡವರೂ ಈ ನಿರಾಶ್ರಿತರ ಆಶ್ರಯ ಕೇಂದ್ರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ರಾತ್ರಿ ವೇಳೆ ಬರುವ ಪ್ರಯಾಣಿಕರು ಅನಿವಾರ್ಯವಾದಲ್ಲಿ ಇಲ್ಲಿ ಬಂದು ಆಶ್ರಯ ಪಡೆಯಬಹುದು. ಈ ಕೇಂದ್ರವು ದಿನದ 24 ಗಂಟೆಗಳು ಹಾಗೂ ವಾರದ ಏಳೂ ದಿನಗಳು ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ದಾನಿಗಳ ನೆರವು ಪಡೆದುಕೊಂಡು ಇಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶವಿದೆ” ಎಂದು ಹೇಳಲಾಗಿದೆ.
“ಮಾರ್ಚ್ 4 ರಂದು ಇದು ಉದ್ಘಾಟನೆಗೊಂಡಿದ್ದು, ಅಂದಿನಿಂದ ಕಾರ್ಯನಿರ್ವಹಿಸಲಾರಂಭಿಸಿದೆ. ಪ್ರಸ್ತುತ ಪ್ರತಿನಿತ್ಯ ರಾತ್ರಿ ವೇಳೆಯಲ್ಲಿ ನಿದ್ರಿಸಲು ನಿರಾಶ್ರಿತರು ಬರುತ್ತಿದ್ದಾರೆ. ಈಗ ದಿನವೂ ಏಳೆಂಟು ಜನರು ಬಂದು ಇದರ ಪ್ರಯೋಜನ ಪಡೆಯತೊಡಗಿದ್ದಾರೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ” ಎನ್ನುತ್ತಿವೆ ಮೂಲಗಳು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
