ಹೊಸದುರ್ಗ:
ಪರಿಸರ ದಿನಾಚರಣೆ ಸಾಂಕೇತಿಕವಾಗಿ, ಅದ್ದೂರಿಯಾಗಿ, ಆಚರಿಸುವುದು ಬೇಡ, ಪರಿಸರ ಸಮತೋಲನ ಆಗುವುದಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂದು ಇಲ್ಲಿನ ಜೆಎಂಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.ಪಟ್ಟಣದ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಟ್ಟ, ಮಣ್ಣು, ಮರಳು, ಗಿಡ,ಮರ, ನೈಸರ್ಗಿಕ ಪರಿಸರವನ್ನು ನಾವು ಸಂರಕ್ಷಿಸಬೇಕು. ಗ್ರಾಮೀಣ ಭಾಗದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಇದರ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ ಆದ್ದರಿಂದ ಅವರಿಗೆ ಪರಿಸರದ ಬಗ್ಗೆ ತಿಳುವಳಿಕೆ ನೀಡುವ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಮಳೆ ಬೆಳೆ ಏಕೆ ಈ ಪ್ರಮಾಣದಲ್ಲಿ ಕಡಿಮೆ ಇದೆ. ಪ್ರತಿ ದಿನ ಹಚ್ಚ ಹಸಿರಿನಿಂದ ಕೂಡಿರುವ ಮಲನಾಡು ಮತ್ತು ಮಡಿಕೇರಿಯಲ್ಲಿಯೂ ಸಹ ಬರಗಾಲ ಆವರಿಸಿದೆ.
ಆಧುನಿಕ ಬರದಲ್ಲಿ, ಜಾಗತೀಕ ಪರಿಣಾಮಗಳು ಮನುಷ್ಯನ ಸ್ವಾರ್ಥ, ದುರಾಸೆಯ ಪ್ರತಿಫಲವೇ ಇವತ್ತು ನಾವು ನೀರಿಗಾಗಿ, ಮಳೆಗಾಗಿ ಪರದಾಡುವುದನ್ನು ಅನುಭವಿಸುತ್ತಿದ್ದೇವೆ. ನಿನ್ನ ಜಲ, ನಿನ್ನ ನೆಲ, ನಿನ್ನ ಮರ ಎಂದು ತಿಳಿದುಕೊಂಡು ಅವುಗಳ ಸಂರಕ್ಷಣೆಯನ್ನು ಮಾಡಬೇಕು. ಅದರಲ್ಲಿಯೂ ಮಕ್ಕಳಲ್ಲಿ ಅರಿವು ಮೂಡಿಸುವುದು ಮೊದಲ ಆದ್ಯತೆ ಆಗಬೇಕು ಎಂದರು.
ಬಿಇಓ ಎಲ್ ಜಯಪ್ಪ ಮಾತನಾಡಿ ಪರಿಸರ ಸಂರಕ್ಷಣೆ ಮೂಲ ಭೂತ ಕರ್ತವ್ಯವಾಗಿದೆ. ಪ್ರಮುಖವಾಗಿ ನಾವು ಚೆನ್ನಾಗಿ ಇರಬೇಕಾದರೆ ಪರಿಸರ ಚೆನ್ನಾಗಿರಬೇಕು. ಪರಿಸರದ ಮೇಲೆ ಜವಾಬ್ದಾರಿ, ಕಾಳಜಿ ಯಾರೂ ಕೂಡ ವಹಿಸುತಿಲ್ಲ. ಇದರಿಂದ ಭೂಮಿಯ ಉಷ್ಣಾಂಶ ಜಾಸ್ತಿಯಾಗುತ್ತಿದೆ. ಮಳೆ ಬೆಳೆ ಇಲ್ಲದೆ ನಾವೆಲ್ಲಾ ಹಿಂದುಳಿದಿದ್ದೇವೆ ಎಂದರು.
ಪ್ರಕೃತಿಯಲ್ಲಿ ಪ್ರತಿ ದಿನ ಏರಿಳಿತವಾಗುತ್ತಿದೆಇದರಿಂದ ಜನರು ಅಸ್ತವ್ಯಸ್ಥವಾಗುತ್ತಿದ್ದಾರೆ. ಪರಿಸರ ಸಂರಕ್ಷಣೆಗೆ ಜಿಲ್ಲೆಯ ಜಿಲ್ಲಾಢಳಿತ ಮೇರೆಗೆ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ 1ರಿಂದ 5 ನೇ ತರಗತಿ ಮಕ್ಕಳಿಗೆ 1 ಗಿಡ, 6ರಿಂದ 10ನೇ ತರಗತಿ ಮಕ್ಕಳಿಗೆ 2 ಗಿಡ ಮತ್ತು ಮುಖ್ಯ ಶಿಕ್ಷಕರಿಗೆ ತಲಾ 2ಗಿಡಗಳನ್ನು ಕಡ್ಡಾಯವಾಗಿ ನೆಡಬೇಕೆಂದು ಸಮರೋಪಾದಿಯಲ್ಲಿ ಬೆಳೆಸುವ ಮುಖಾಂತರ ಜಿಲ್ಲಾಢಳಿತ ತಿಳಿಸಿದೆ. ಆದ್ದರಿಂದ ಅರಣ್ಯ ಇಲಾಖೆಯವರ ಸಹಾಯದಿಂದ ಇದೇ ತಿಂಗಳು 11ನೇ ತಾರೀಖಿಗೆ ಪರಿಸರ ದಿನಾಚರಣೆಯನ್ನು ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜಿನಲ್ಲಿ ಆಚರಿಸುವ ಕಾರ್ಯವನ್ನು ಕೈಗೊಂಡಿದ್ದೇವೆ ಎಂದರು.
ಜೆಎಂಎಫ್ ಸಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಪೂರ, ಸಿಪಿಐ ರುದ್ರಪ್ಪ, ಪಿಎಸ್ಐ ಶಿವನಂಜಶೆಟ್ಟಿ, ಅರಣ್ಯ ವಲಯ ಅಧಿಕಾರಿ ಪ್ರದೀಪ್ ಪವಾರ್, ಬಿ.ಜಿ.ವೆಂಕಟೇಶ್, ಎಂ.ಆರ್.ಸಿ.ಮೂರ್ತಿ, ಡಾ.ಶಿವರುದ್ರಪ್ಪ, ಸಮಾಜ ಕಲ್ಯಾಣ ಅಧಿಕಾರಿ ವಿ.ಕೆ.ಬಡಿಗೇರ್, ಪರಿಸರ ಅಭಿಯಂತರ ತಿಮ್ಮರಾಜು, ಮಲ್ಲೇಶಪ್ಪ,ಖಾಜಂಚಿ ಯಲ್ಲಪ್ಪ ಟಿ.ಆರ್, ಹಿರಿಯ ಆರೋಗ್ಯಾ ಸಹಾಯಕ ಸಿದ್ದರಾಮಸ್ವಾಮಿ ಭಾಗವಹಿಸಿದ್ದರು.