ನ್ಯೂನತೆ ಸರಿಪಡಿಸಿ ಗುಣಮಟ್ಟದ ಆಹಾರ ಪೂರೈಸಿ

ದಾವಣಗೆರೆ :

     ಇರುವ ನ್ಯೂನ್ಯತೆ ಸರಿಪಡಿಸಿ, ಎಲ್ಲರಿಗೂ ಗುಣಮಟ್ಟದ ಆಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಸೂಚನೆ ನೀಡಿದರು.

     ಕಳೆದ ಮೂರು ದಿನಗಳಿಂದ ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲ್ಲೂಕುಗಳ ಅಕ್ಷರ ದಾಸೋಹ ಕಾರ್ಯಕ್ರಮ, ಅಂಗನವಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವಿವಿಧ ವರ್ಗಗಳ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

       ಪ್ರತಿ ಪ್ರಜೆಗೂ ಸರಿಯಾದ ಗುಣಮಟ್ಟದ, ಸರಿಯಾದ ಪ್ರಮಾಣದ ಆಹಾರ ಕೈಗೆಟುಕುವ ಬೆಲೆಯಲ್ಲಿ ಸಿಗಬೇಕೆಂಬುದೇ ಆಹಾರ ಭದ್ರತಾ ಕಾಯ್ದೆ ಉದ್ದೇಶ ಹಾಗೂ ಮಕ್ಕಳು, ಗರ್ಭಿಣಿ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲಬಾರದೆಂಬ ಉದ್ದೇಶದಿಂದ ವಿವಿಧ ಇಲಾಖೆಗಳು ಕೈ ಜೋಡಿಸಿ ಕೆಲಸ ಮಾಡುತ್ತಿದ್ದು, ಕೆಲವೊಂದು ನ್ಯೂನತೆಗಳನ್ನು ಹೊರತು ಪಡಿಸಿದರೆ ಜಿಲ್ಲೆಯ ಪ್ರಗತಿ ಉತ್ತಮವಾಗಿದೆ. ಹಾಗಾಗಿ ನ್ಯೂನ್ಯತೆ ಇರುವ ಕೆಲವೊಂದನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದರು.

      ರಾಜ್ಯದ, ರಾಷ್ಟ್ರದ ಯಾವುದೇ ಒಬ್ಬ ಪ್ರಜೆ ಆಹಾರ ಕೊರತೆಯಿಂದ ಅಸುನೀಗಬಾರದೆಂಬ ಉದ್ದೇಶದಿಂದ ಭಾರತ ಸರ್ಕಾರ 2013ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತು. 2017 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಯ್ದೆ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.

     ವಿವಿಧ ಗೋದಾಮುಗಳಲ್ಲಿ ಸ್ವಲ್ಪ ಮಟ್ದದ ಆಹಾರ ಧಾನ್ಯಗಳು ಹಾಳಾಗುವ ಹಂತಕ್ಕೆ ತಲುಪಿವೆ. ಅವುಗಳನ್ನು ಕೂಡಲೇ ವಿಲೇವಾರಿಗೆ ಕ್ರಮ ಕೈಗೊಳ್ಳುವುದು. ಆದಷ್ಟು ಗೋಡಾನ್‍ಗಳಲ್ಲಿ ಮರದ ಕ್ರೇಟ್‍ಗಳನ್ನು ಬಳಸಿದರೆ ಉತ್ತಮ. ಇಂಡಿಯನ್ ಪುಡ್ ಗ್ರೈನ್ ಇನ್‍ಸ್ಟಿಟೂಟ್ ಮಾರ್ಗದರ್ಶನದಂತೆ ನಿರ್ವಹಿಸಿದರೆ 2 ವರ್ಷದವರೆಗೆ ಆಹಾರ ಧಾನ್ಯಗಳ ಹಾಳಾದಂತೆ ನೋಡಿಕೊಳ್ಳಬಹುದು. ಜಿಲ್ಲೆಯ ಗೋಡೊನ್‍ಗಳಲ್ಲಿ 890 ಕ್ವಿಂಟಾಲ್ ರಾಗಿ ದಾಸ್ತಾನಿದೆ. ಚನ್ನಗಿರಿಯಲ್ಲಿ 10 ಕ್ವಿಂಟಾಲ್ ದಾಸ್ತಾನಿದೆ. ಇವುಗಳನ್ನು ಬೇಗ ವಿಲೇವಾರಿ ಮಾಡಬೇಕು. ಈಗಾಗಲೇ 3 ತಿಂಗಳು ಕಳೆದಿದೆ. ಹೆಚ್ಚು ದಿನ ಇಟ್ಟರೆ ಕೆಡುವ ಸಂಭವೇ ಜಾಸ್ತಿ. ಕೆಲವೆಡೆ ಪಾಮ್ ಆಯಿಲ್ ಹಾಳಾಗುವ ಸಂಭವ ಇದೆ.

     ಹರಿಹರದಲ್ಲಿರುವಂತೆ ವುಡನ್ ಕ್ರೇಟ್ ಗೋಡಾನಿನಂತೆ ಎ.ಪಿ.ಎಂ.ಸಿ ಯವರು ನಿರ್ಮಿಸಿಕೊಂಡರೆ ಒಳ್ಳೆಯದು ಎಂದರು. ಜಾಗದ ಕೊರತೆ ಇದ್ದರೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿ ರಾಜ್ಯಮಟ್ಟದಲ್ಲಿ ಶಿಫಾರಸ್ಸು ಕಳುಹಿಸಲಾಗುವುದು. ವೈಜ್ಞಾನಿಕವಾಗಿ ಸಂಗ್ರಹಿಸುವುದು ಮುಖ್ಯ. ಉಳಿದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾದ ರೀತಿಯಲ್ಲಿ ಆಹಾರ ಪಡಿತರ ವಿತರಣೆ ಆಗುತ್ತದೆ ಎಂದರು.

     ಜಿಲ್ಲೆಯಲ್ಲಿ 781 ನ್ಯಾಯಬೆಲೆ ಅಂಗಡಿಗಳಿದ್ದು, 7-8 ಆಹಾರ ನಿರೀಕ್ಷರಿದ್ದಾರೆ. ಎಲ್ಲರೂ 7ನೇ ತಾರೀಖಿನಂದು ವೀಕ್ಷಣೆ ಮಾಡಬೇಕಾಗಿರುವುದರಿಂದ ತಪಾಸಣೆಗೆ ಸಾಧ್ಯವಿಲ್ಲ. ಹಾಗಾಗಿ ಬೇರೆ ಇಲಾಖೆ ಅಧಿಕಾರಿಗಳನ್ನು ನೋಡಲ್ ಅಧಿಕಾರಗಳನ್ನಾಗಿ ನೇಮಿಸಬಹುದು ಎಂದರು.

     ಸದಸ್ಯರಾದ ವಿ.ಬಿ ಪಾಟೀಲ್ ಮಾತಾನಾಡಿ, ಈವರೆಗೆ ಜಾಗೃತ ಸಮಿತಿಗೆ 10 ದೂರು ಬಂದಿವೆ.ಅವುಗಳನ್ನು ಜಿಲ್ಲಾಧಿಕಾರಿಗಳು ಹಂತದಲೇ ವಿಲೇ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಆಯೋಗಕ್ಕೆ ಯಾವ ಜಿಲ್ಲೆಯಿಂದಲೂ ದೂರು ಬಂದಿಲ್ಲ ಎಂದರು. ಜಾಗೃತ ಸಮಿತಿಗೆ ಮಹಿಳೆಯರನ್ನು ಸದಸ್ಯರಾನ್ನಾಗಿ ಮಾಡಿ ಅವರ ಮೊಬೈಲ್ ನಂಬರ್‍ಗಳನ್ನು ನ್ಯಾಯ ಬೆಲೆ ಅಂಗಡಿಗಳ ಬೋರ್ಡ್‍ನಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಆದರೆ ಪುಂಡರು ಆ ನಂಬರ್‍ನ್ನು ದುರುಪಯೋಗ ಪಡಿಸಿಕೊಂಡರು. ಹಾಗೂ ಆ ಮಹಿಳೆಯರ ಪತಿಯಂದಿರು ಒಪ್ಪದ ಕಾರಣ ಈಗಿರುವ 3 ಸದಸ್ಯರ ಬದಲಾಗಿ 5 ಜನರ ಸಮಿತಿ ಮಾಡಿ ಗ್ರಾಮ ಪಂಚಾಯುತ್‍ನ ಪಿ.ಡಿ.ಓ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಿ ಜಾಗೃತ ಸಮಿತಿ ರಚಿಸಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಇದೆ ಎಂದರು.

    ಆಯೋಗದ ಸದಸ್ಯೆ ಮಂಜುಳಾಬಾಯಿ ಮಾತಾನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನೀಡಿರುವ ಅಂಕಿ-ಅಂಶಗಳು ತಾಳೆಯಾಗುತ್ತಿಲ್ಲ. ಕಿಶೋರಿಯರು 150 ಇದ್ದಾರೆಂದು ಮಾಹಿತಿ ನೀಡಿದ್ದೀರಿ. ಆದರೆ ಗುರುತಿಸುವುದು 133 ಎಂದಿದ್ದೀರಿ ಇದು ಹೇಗೆ ಸಾಧ್ಯ. ಬಾಲವಿಕಾಸ ಸಮಿತಿ ಸಭೆಗಳು ಆಗಿವೆ ಎನ್ನುತ್ತೀರಿ. ಯಾವುದೇ ಸಭೆಗಳ ನಡಾವಳಿ ಇಲ್ಲ, ಸದಸ್ಯರ ಸಹಿ ಇಲ್ಲ. ಇದನ್ನು ನಂಬುವುದು ಹೇಗೆ ಎಂದರು. ಕೆಲವೆಡೆ ಹಾಜರಾತಿಯಲ್ಲಿ ಪೆನ್ಸಿಲ್‍ನಲ್ಲಿ ಬರೆದಿದ್ದೀರಿ. ಜಿಲ್ಲೆಯು ಬಯಲು ಶೌಚಾ ಮುಕ್ತ ಎನ್ನುತ್ತೀರಿ ಆದರೆ ಕೆಲವು ಅಂಗನವಾಡಿಗಳಲ್ಲಿ ಶೌಚಾಲಯಗಳೇ ಇಲ್ಲ. ಇದ್ದರೂ ನಿರ್ವಹಣೆ ಇಲ್ಲ ಎಂದರು. ಈ ಮಧ್ಯೆ ಸಿ.ಡಿ.ಪಿ.ಓ ಮತ್ತು ಸೂಪರ್‍ವೈಸರ್ ನಡುವೆ ಸರಿಯಾದ ಸಂವಹನ ಮಾಹಿತಿ ಇಲ್ಲದುದರಿಂದ ಹೀಗಾಗಿದೆ ಸರಿಪಡಿಸಿಕೊಳ್ಳಿ ಎಂದರು

     ಮತ್ತೋರ್ವ ಸದಸ್ಯ ಶಿವಶಂಕರ ಮಾತಾನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪೌಷ್ಠಿಕ ಮಕ್ಕಳ ಸಂಖ್ಯೆ ಈ ಜಿಲ್ಲೆಯಲ್ಲಿ ಕಡಿಮೆ ಇದೆ. 287 ಅಪೌಷ್ಠಿಕ ಮಕ್ಕಳ್ಳಿದ್ದಾರೆಂದು ವರದಿ ನೀಡಿದ್ದೀರಿ. ಆ ಸಂಖ್ಯೆ ಹೆಚ್ಚಿರಬಹುದು, ಮತ್ತೊಮ್ಮೆ ಪರಿಶೀಲಿಸಿ ಹಾಗೂ ಅಂಗನವಾಡಿಗಳಲ್ಲಿರುವ ಗ್ರೋತ್ ಚಾರ್ಟ್ ಬಗೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಪ್ರತಿ 2 ತಿಂಗಳಿಗೊಮ್ಮೆ ಮಕ್ಕಳ ತೂಕ ಪರೀಕ್ಷಿಸಿ ಸರಿಯಾದ ಗ್ರೋತ್ ಚಾರ್ಟ್ ಬರೆಯಬೇಕು. ಹಳದಿ ಜೋನ್‍ನಲ್ಲಿ ಬರುವ ಮಕ್ಕಳನ್ನು ಗುರುತಿಸಿ ಅಪೌಷ್ಠಿಕ ಮಕ್ಕಳನ್ನು ಸರಿಯಾಗಿ ಗುರುತಿಸಬೇಕು ಎಂದರು.

      ಆಯೋಗದ ಸದಸ್ಯರಾದ ಡಿ.ಹೆಚ್. ಹಸಬಿ ಮಾತಾನಾಡಿ, ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಚನ್ನಾಗಿ ನಡೆಯುತ್ತಿದೆ. ಎಲ್ಲಿಯೂ ದೂರುಗಳಿಲ್ಲ. ಆದರೆ 1 ಶಾಲೆಯಲ್ಲಿ ಮಾತ್ರ ಪ್ರತಿಭಾ ಕಾರಂಜಿಗೆ ಅಕ್ಕಿ ಕೊಡಲು ಹೋಗಿ ಅಡುಗೆಯವರಿಗೆ 5 ಕೆ.ಜಿ ಅಕ್ಕಿ ನೀಡಿ ಸಮಿತಿಗೆ 9 ಕೆ.ಜಿ ಎಂದು ಸುಳ್ಳು ಹೇಳಿದ್ದರು ನಂತರ ಒಪ್ಪಿಕೊಂಡರು ಈ ರೀತಿ ಆಗಬಾರದು ಎಂದರು.

     ಸದಸ್ಯರಾದ ಶಿವಶಂಕರ ಮಾತಾನಾಡಿ ಜಿಲ್ಲೆಯಲ್ಲಿರುವ ಹಾಸ್ಟೆಲ್‍ಗಳಲ್ಲಿ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಈ ಕುರಿತು ಸರ್ಕಾರಿ ಆದೇಶವಿದ್ದರೂ ಅಷ್ಟು ಜನರಿಗೆ ಮೂಲ ಸೌಕರ್ಯ ಒದಗಿಸಲು ಆಗುತ್ತದೆಯೇ ಎಂಬುದನ್ನು ಗಮನಿಸಿ ಅಗತ್ಯವಿರುವ ಕಡೆ ಬಾಡಿಗೆ ಕಟ್ಟಡ ಪಡೆಯರಿ ಎಂದರು.

     ಸದಸ್ಯರಾದ ಮಹಮ್ಮದ್ ಅಲಿ ಮಾತನಾಡಿ ಹರಪನಹಳ್ಳಿಯ ಹಾಸ್ಟೆಲ್‍ವೊಂದರಲ್ಲಿ 160 ಹಾಸಿಗೆಗಳು, 30 ಸೈಕಲ್‍ಗಳು, ಬೆಡ್ ಶೀಟ್‍ಗಳನ್ನು ಹಾಗೇ ದಾಸ್ತಾನಿರಿಸಲಾಗಿದೆ ಆದರೆ ವಿತರಿಸಿಲ್ಲ ಹಾಗೂ ಯಾವುದೇ ಹಾಸ್ಟೆಲ್‍ಗಳಲ್ಲಿ ರಿಜಿಸ್ಟರ್ ಇಲ್ಲ ಮತ್ತು ರೆಕಾರ್ಡ್ ಮಾತ್ರ ಕರೆಕ್ಟಾಗಿ ನಿರ್ವಹಿಸುತ್ತಿದ್ದೀರಿ, ರಿಜಿಸ್ಟಾರ್‍ನಲ್ಲಿ ನಮೂದಿಸಲು ಏನು ತೊಂದರೆ ಎಂದರು. ಸಮಾಜ ಕಲ್ಯಾಣಾಧಿಕಾರಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವುದರಿಂದ ಜಾಗದ ಕೊರತೆಯಿಂದ ಹಾಸಿಗೆಗಳನ್ನು ವಿತರಿಸಲಾಗಿಲ್ಲ. ಈಗಾಗಲೇ ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆಗೆ ಸರ್ಕಾರಕ್ಕೆ ಬರೆಯಲಾಗಿದೆ. ಅಲ್ಲಿಂದ ಸೂಚನೆ ಬಂದಾಕ್ಷಣ ಸಮಸ್ಯೆ ಪರಿಹಾರವಾಗಲಿದೆ ಎಂದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಡಿಹೆಚ್‍ಓ ತ್ರಿಫುಲಾಂಭ, ಜಿಲ್ಲಾ ಆಹಾರ ಮತ್ತು ನಾಗರೀಕ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಪರಿಶಿಷ್ಠ ಪಂಗಡದ ಜಿಲ್ಲಾ ಅಧಿಕಾರಿ ದೇವೆಂದ್ರಪ್ಪ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link