ದಾವಣಗೆರೆ:
ಪೇಟಿಎಂ ಖಾತೆಯ ಮೂಲಕ 45 ಸಾವಿರ ಹಣ ಲಪಟಾಯಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ, ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪೊಲೀಸರು, ಬಂಧಿತರಿಂದ 25 ಸಾವಿರ ರೂ. ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ದೂರು ದಾಖಲಾದ 24 ಗಂಟೆಯಲ್ಲಿಯೇ ಯಶಸ್ವಿಯಾಗಿದ್ದಾರೆ.
ಬಳ್ಳಾರಿ ತಾಲೂಕಿನ ದಿಬ್ಬದಹಳ್ಳಿ ಗ್ರಾಮದ ರೆಡ್ಡಿ ಗಿರೀಶ್ ಅಲಿಯಾಸ್ ಗಿರೀಶ್ (21 ವರ್ಷ) ಹಾಗೂ ಹರಪನಹಳ್ಳಿ ತಾಲೂಕಿನ ಕೊಂಗನ ಹೊಸರು ಗ್ರಾಮದ ಮಧುಕುಮಾರ್ (23 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.
ಕೆಎಸ್ಆರ್ಟಿಸಿ ಚಾಲಕ ಸದಾನಂದಗೌಡ ಜೂ.25ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಹಾಜರಾಗಿ, ತಮ್ಮ ಖಾತೆಯಿಂದ ತಮ್ಮ ಗಮನಕ್ಕೆ ಬಾರದೇ 45 ಸಾವಿರ ರೂ. ಕಡಿತವಾಗಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಸಿಇಎನ್ ಅಪರಾಧ ಪೊಲೀಸ್ ಠಾಣೆ ಇನ್ಸ್ಪೇಕ್ಟರ್ ದೇವರಾಜ್ ಟಿ.ವಿ ಹಾಗೂ ಸಿಬ್ಬಂದಿಗಳು ತನಿಖೆಯನ್ನು ಕೈಗೊಂಡು, ಬುಧವಾರ ರೆಡ್ಡಿ ಗಿರೀಶ್ ಅಲಿಯಾಸ್ ಗಿರೀಶ್ ಆರ್ ಹಾಗೂ ಮಧುಕುಮಾರ್ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಈ ಇಬ್ಬರು ಆರೋಪಿಗಳು ಹಣ ಕಳೆದುಕೊಂಡ ಸದಾನಂದಗೌಡನ ಜೊತೆಯಲ್ಲಿ ಒಂದೇ ರೂಮಿನಲ್ಲಿ ವಾಸವಾಗಿರುವಾಗ, ಈತನಿಗೆ ಗೊತ್ತಾಗದಂತೆ ಗಿರೀಶ್ ಎಟಿಎಂ ಕಾರ್ಡ್ ತೆಗೆದುಕೊಂಡು ಹಂತ ಹಂತವಾಗಿ 45,000 ರೂಪಾಯಿಗಳನ್ನು ಪೇಟಿಎಂ ಮೂಲಕ ತನ್ನ ಖಾತೆಗೆ ಹಾಕಿಕೊಂಡು, ಇದರಲ್ಲಿ 5 ಸಾವಿರ ರೂ.ಗಳನ್ನು ಮಧುಕುಮಾರ್ ಪಡೆದಿರುವುದಾಗಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
