ಬಕ್ರಿದ್ ದಿನ ನೆರೆ ಸಂತ್ರಸ್ತರಿಗೆ ಮುಸ್ಲಿಂ ಬಾಂಧವರಿಂದ ಸಹಾಯ ಹಸ್ತ
ದಾವಣಗೆರೆ

ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ಮುಸ್ಲಿಂ ಧರ್ಮೀಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.
ನಗರದ ಹಳೆ ಪಿ.ಬಿ.ರಸ್ತೆಯ ಖಬರಸ್ಥಾನ, ಮಾಗಾನಹಳ್ಳಿ ರಸ್ತೆಯ ಹೊಸ ಈದ್ಗಾ ಮೈದಾನ ಸೇರಿದಂತೆ 3 ಕಡೆ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಜೊತೆಗೆ ರಾಜ್ಯದ ಅತಿವೃಷ್ಟಿ, ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದರು. ಸಮಾಜದ ಮುಖಂಡರಾದ ಸಾದಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಕೆ.ಅಬ್ದುಲ್ ಜಬ್ಬಾರ್, ಅಯೂಬ್ ಪೈಲ್ವಾನ್, ಅಬ್ದುಲ್ ಲತೀಫ್, ಟಾರ್ಗೆಟ್ ಅಸ್ಲಂ, ಜೆ.ಅಮಾನುಲ್ಲಾ ಖಾನ್, ಖಾದರ್ ಬಾಷಾ, ಅಮ್ಜದ್ ಅಲಿ, ಮಹಬೂಬ್ ಬಾಷಾ, ಹೆಚ್.ಜೆ.ಮೈನುದ್ದೀನ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ನೆರೆ ಸಂತ್ರಸ್ತರಿಗಾಗಿ ಯುವ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಲಾಯಿತು. ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಬಂದಿದ್ದ ಮುಸ್ಲಿಂ ಸಮಾಜ ಬಾಂಧವರು ನೆರೆ ಸಂತ್ರಸ್ತರಿಗಾಗಿ ಸ್ವಯಂಪ್ರೇರಿತರಾಗಿ ದೇಣಿಗೆ ನೀಡುವ ಮೂಲಕ ಪ್ರವಾಹಪೀಡಿತರ ಕಷ್ಟಕ್ಕೆ ಸ್ಪಂದಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೈಯದ್ ಖಾಲಿದ್, ಸುಭಾನ್ ಸಾಬ್, ನವೀದ್ ಬಾಷಾ, ಸಾದಿಕ್ ಖಾನ್, ಸಂದೀಪ್, ಸಂತೋಷ್, ಹರೀಶ ಕೆಂಗಲಹಳ್ಳಿ, ಎಲ್.ಹೆಚ್.ಸಾಗರ್ ಸೇರಿದಂತೆ ಯುವಕರ ತಂಡವು ಪರಿಹಾರ ನಿಧಿ ಸಂಗ್ರಹದಲ್ಲಿ ಭಾಗಿಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
