ಹರಿಹರ:
ನಗರದ ಸೀಬಾರ ಸರ್ಕಲ್ ಬಳಿ ಇರುವ ತೆಗ್ಗಿನಕೇರಿ ಮನೆಯೊಂದರ ಹಿಂದೆ ನಿಧಿ ದೊರಕಿದೆ ಎಂಬ ಸುಳ್ಳು ಸುದ್ದಿ ಹರಡಿದ್ದರಿಂದ ಜನರು ಮುಗಿ ಬಿದ್ದು ನೋಡಲು ಬಂದು ಹಾಳು ಹಗೇವು ನೋಡಿ ಬೇಸ್ತು ಬಿದ್ದ ಪ್ರಸಂಗ ಹರಿಹರದಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಸಮಯದಲ್ಲಿ ತೆಗ್ಗಿನ ಕೇರಿಯಲ್ಲಿರುವ ನಗರಸಭಾ ಮಾಜಿ ಅಧ್ಯಕ್ಷ ವಿಶ್ವನಾಥ ಭೂತೆ ಯವರು ತಮ್ಮ ಮನೆಯ ಹಿಂಭಾಗದಲ್ಲಿ ವಿದ್ಯುತ್ ಅರ್ಥಿಂಗ್ ವೈರ್ ಹಾಕಿಸುವ ಸಲುವಾಗಿ ಗುಂಡಿ ತೆಗೆಯುತ್ತಿದ್ದಾಗ ಮಣ್ಣಿನ್ನು ಹಾರೆಯಿಂದ ಅಗೆಯುವಾಗ ಹಾರೆಯು ಇದ್ದಕ್ಕಿದ್ದಂತೆಯೇ ಗುಂಡಿಯಲ್ಲಿ ಸಂಪೂರ್ಣವಾಗಿ ಒಳಗೆ ಹೋದಾಗ ಗಾಬರಿಗೊಂಡು ನೋಡಿದಾಗ ಸಣ್ಣ ಕಿಡಿಯೊಂದು ಕಂಡು ಬಂದಿದೆ ತಕ್ಷಣ ಅಗೆಯುವುದನ್ನು ನಿಲ್ಲಿಸಲಾಗಿದೆ.
ಯಾರೋ ಕಿಡಿಗೇಡಿಗಳು ಈ ಗುಂಡಿಯಲ್ಲಿ ಅಪಾರವಾದ ನಿಧಿಯಿದೆ ರಾತ್ರಿ ಕತ್ತಲಾದ ನಂತರ ತೆಗೆಯಲು ಹಾಗೆಯೇ ಬಿಟ್ಟಿರುತ್ತಾರೆ ಎಂಬ ಹಾರಿಕೆಯ ಸುದ್ದಿಯನ್ನು ಸುತ್ತಮುತ್ತಲು ಹರಡಿದ್ದೆ ಅಲ್ಲದೇ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣ ಗಳಲ್ಲಿಯೂ ಸಹ ಹರಿಬಿಟ್ಟಿದ್ದಾರೆ.ಈ ಸಂದೇಶವು ಒಬ್ಬರಿಂದ ಮತ್ತೊಬ್ಬರಿಗೆ ತಲುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಲುಪಿದೆ ಅವರು ಮೌಖಿಕ ಆದೇಶ ನೀಡಿ ಸಂಬಂಧಿ ಸಿದ ಅಧಿಕಾರಿಗಳಿಗೆ ಪರೀಕ್ಷಿಸಲು ತಿಳಿಸಿರುತ್ತಾರೆ. ತಕ್ಷಣ ತಹಸೀಲ್ದಾರ್ ಮತ್ತು ನಗರ ಠಾಣೆಯ ಪಿಎಸ್ಐ ಸಿಬ್ಬಂದಿಗಳೊಂದಿಗೆ ಆಗಮಿಸಿ ವೀಕ್ಷಿಸಿ ಬೆಳಗ್ಗೆ ನೋಡೋಣ ಎಂಬ ನಿರ್ಣಯಕ್ಕೆ ಬಂದು ತಾತ್ಕಾಲಿಕವಾಗಿ ಗುಂಡಿಯನ್ನು ಮುಚ್ಚಿಸಿದ್ದಾರೆ.
ಮರುದಿನ ಶನಿವಾರ ಬೆಳಗ್ಗೆ ಪುರಾತತ್ವ ಇಲಾಖೆ, ತಹಸೀಲ್ದಾರ್ ಮತ್ತು ನಗರ ಪಿಎಸ್ಐ ಸಮ್ಮುಖ ದಲ್ಲಿ ಗುಂಡಿಯನ್ನು ತಪಾಸಣೆ ನಡೆಸಿದಾಗ ಅದೊಂದು ಹಿಂದಿನ ಕಾಲದಲ್ಲಿ ಕಾಳು,ದವಸ-ಧಾನ್ಯಗಳನ್ನು ಸಂಗ್ರಹಿಸುತ್ತಿದ್ದ ಹಾಳು ಬಿದ್ದ ಹಗೇವು ಎಂದು ಗುರುತಿಸಲಾಗಿದೆ.ಈ ಸುದ್ದಿ ನಗರದಲ್ಲೆಲ್ಲ ಹರಡಿ ಸಾವಿರಾರು ಜನರು ಜಮಾಯಿಸಿ ನೋಡಲು ಆಗಮಿಸಿದ್ದರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.ನಂತರ ಅದೊಂದು ಹಾಳು ಬಿದ್ದ ಹಗೇವು ಎಂದು ತಿಳಿದ ಜನರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸಾದರು.ಈ ಸಮಯದಲ್ಲಿ ತಹಸೀಲ್ದಾರ್ ರೆಹಾನ್ ಪಾಷಾ, ಪಿಎಸ್ಐ ಪ್ರಭು ಡಿ. ಕೆಳಗಿನಮನಿ, ನಗರ ಸಭೆ ಆರೋಗ್ಯ ನಿರೀಕ್ಷಕ ಸಂತೋಷ್ ನಾಯಕ್ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
![](https://prajapragathi.com/wp-content/uploads/2019/08/IMG_20190817_130351.gif)