ದಾವಣಗೆರೆ:
ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆಯ ಹರಿವಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ತುಂಗಭದ್ರ ನದಿ ಹಾದು ಹೋಗಿರುವ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ನದಿ ಪಾತ್ರದ ಜನರಲ್ಲಿ ಜಲಾವೃತಗೊಂಡು ಮನೆ ಮಠ ಕಳೆದುಕೊಳ್ಳುವ ಭೀತಿ ಮನೆ ಮಾಡಿದ್ದು, ನದಿಪಾತ್ರದಲ್ಲಿ ಆಡಳಿತ ಯಂತ್ರವು ಹೈ ಅಲರ್ಟ್ ಘೋಷಿಸುವುದರ ಜೊತೆಗೆ ಸಂತ್ರಸ್ಥರಿಗೆ ಗಂಜಿ ಕೇಂದ್ರವನ್ನು ಸಹ ಆರಂಭಿಸಿದೆ.
ಜಿಲ್ಲೆಯ ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಬುಧವಾರ ಸಂಜೆ ಹೊತ್ತಿಗೆ ನೀರಿನ ಹರಿವಿನ ಪ್ರಮಾಣವು 10.5 ಮೀಟರ್ಗೆ ತಲುಪಿದ್ದು, ಇದೇರೀತಿ ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶ, ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಗಳಲ್ಲಿ ಜೋರು ಮಳೆ ಮುಂದುವರಿದರೆ, ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದರೇ ಅಪಾಯದ ಮಟ್ಟವನ್ನೂ ಮೀರಿ ನದಿ ಹರಿಯಲಿದೆ.
ಗಂಜಿ ಕೇಂದ್ರ ಸ್ಥಾಪನೆ:
ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯು ಅಪಾಯದ ಮಟ್ಟಕ್ಕೆ ತಲುಪುತ್ತಿದೆ. ಹೊನ್ನಾಳಿಯ ಅಂಬೇಡ್ಕರ್ ಭವನದಲ್ಲಿ ನದಿ ಪಾತ್ರದ 17 ಕುಟುಂಬಗಳ 59 ಜನರಿಗೆ ಗಂಜಿ ಕೇಂದ್ರ ಕಲ್ಪಿಸಿ, ಆಶ್ರಯ ಕಲ್ಪಿಸಲಾಗಿದ್ದು, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇನ್ನೂ ಶಾಸಕ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳ ಸಭೆ ನಡೆಸಿ, ನದಿ ನೀರಿನ ಹರಿವಿನ ಮೇಲೆ, ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಸಂತ್ರಸ್ಥರಿಗೆ ಪರಿಹಾರ ಕಾರ್ಯಕ್ಕೆ ಸಜ್ಜಾಗುವಂತೆಯೂ ಸೂಚನೆ ನೀಡಿದ್ದಾರೆ.
ಮುಳುಗಡೆ ಸಾಧ್ಯತೆ:
ಹೊನ್ನಾಳಿಯ ಬಾಲರಾಜ ಘಾಟ್ 2 ಮನೆ ಈಗಾಗಲೇ ಮುಳುಗಿದ್ದು, ಮತ್ತಷ್ಟು ಮನೆಗಳು ಜಲಾವೃತವಾಗುವ ಸಾಧ್ಯತೆ ಇದೆ. ಬಾಲರಾಜ ಘಾಟ್, ಸಂತೇ ಮೈದಾನ, ಬಂಬೂ ಬಜಾರ್, ವಡ್ಡಿನಕೆರೆ ಹಳ್ಳ ಇತರೆ ಪ್ರದೇಶಗಳು ನದಿ ನೀರು ಹರಿವು ಮತ್ತಷ್ಟು ಹೆಚ್ಚಾದರೆ ಮುಳುಗಡೆಯಾಗಲಿವೆ. ಹಾಗೆಯೇ ತಾಲೂಕಿನ ಬೇಲಿಮಲ್ಲೂರು, ಕೋಣನತಲೆ ಗ್ರಾಮಗಳ ಸಂಪರ್ಕ ಸೇತುವೆಯೂ ಮುಳುಗಡೆಯಾಗುವ ಸಾಧ್ಯತೆ ಇದೆ.
ಇನ್ನೂ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ಸ್ನಾನ ಘಟ್ಟ ಮುಳುಗಡೆಯಾಗಿದೆ. ಸಾರಥಿ, ಚಿಕ್ಕಬಿದರೆ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ತುಂಗಭದ್ರೆ ಹಿನ್ನೀರಿನಿಂದಾಗಿ ಸಂಪರ್ಕ ಸೇತುವೆ ಮೇಲೆ 2-3 ಅಡಿಯಷ್ಟು ನೀರು ಹರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಸಾರಥಿ-ಚಿಕ್ಕಬಿದರೆ ಸಂಪರ್ಕ ಕಡಿತವಾಗಿ, ಉಕ್ಕಡಗಾತ್ರಿ ಜಲಾವೃತವಾಗಲಿದೆ. ದೀಟೂರು ಹಳೆ ಗ್ರಾಮವು ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಹರಿಹರದ ಹರಿಹರೇಶ್ವರ ದೇವಸ್ಥಾನ ಸಮೀಪ ನದಿಯಲ್ಲಿರುವ ಗೋಪುರ ಮುಳುಗಿದ್ದು, ಇಲ್ಲಿ ಸುಮಾರು 20 ಅಡಿಗೂ ಅಧಿಕ ನೀರು ನದಿಯಲ್ಲಿ ಹರಿಯುತ್ತಿದೆ. ಹರಿಹರದ ಗಂಗಾ ನಗರವು ನೆರೆ ಬಂದಾಗಲೆಲ್ಲಾ ಮುಳುಗಡೆ ಪ್ರದೇಶವಾಗಿದ್ದು, ಸಧ್ಯಕ್ಕೆ ಇನ್ನಷ್ಟು ನೀರು ಬಂದರೆ ಗಂಗಾ ನಗರವೂ ಜಲಾ ವೃತವಾಗಲಿದೆ. ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದ ಹೊಳೆ ಮೆಟ್ಟಿಲುಗಳೂ ಮುಳುಗಡೆಯಾಗಿದೆ.
ನದಿ ಪಾತ್ರದ ಸ್ಥಳ, ಮುಳುಗಡೆ ಪ್ರದೇಶಕ್ಕೆ ಪೌರಾಯುಕ್ತೆ ಎಸ್.ಲಕ್ಷ್ಮಿ ಅಧಿಕಾರಿ, ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು. ತಾಲೂಕು ಆಡಳಿತ, ಜಿಲ್ಲಾಡಳಿತವೂ ಹೈ ಅಲರ್ಟ್ ಘೋಷಿಸಿದ್ದು, ಯಾವುದೇ ಸ್ಥಿತಿ ಎದುರಾದರೂ ಪರಿಹಾರ ಕಾರ್ಯಕ್ಕೆ ಸನ್ನದ್ಧವಾಗಿದೆ.
ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಭದ್ರಾ ಡ್ಯಾಂಗೆ ಒಳ ಹರಿವು ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. 156 ಅಡಿಗಳನ್ನು ಡ್ಯಾಂ ದಾಟಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಗೆ ನೀರು ಬಿಡುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
