ತುಮಕೂರು:
ವರದಿ : ರಾಕೇಶ್.ವಿ

ನಗರದ ಜಿಲ್ಲಾ ನ್ಯಾಯಾಲಯದ ಕಟ್ಟಡದ ಪಕ್ಕದಲ್ಲೇ ಇರುವ ನೋಂದಣಿ ಮತ್ತು ಮುದ್ರಾಂಕ ಇಲಾಖಾ ಕಚೇರಿಗೆ ದಿನಕ್ಕೆ ನೂರಾರು ಮಂದಿ ನೋಂದಣಿಗಾಗಿ ಬರುತ್ತಾರೆ. ಇಲ್ಲಿ ಮೂವರು ಉಪನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಯ ಆವರಣದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಲೈಸೆನ್ಸ್ ಹೊಂದಿದ ಜಿಲ್ಲಾ ಪತ್ರಬರಹಗಾರರು ಕೆಲಸ ಮಾಡುತ್ತಾರೆ. ನಿತ್ಯ ಈ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ದಾಖಲೆಗಳನ್ನು ಇವರ ಬಳಿ ನೀಡಿ ಅರ್ಜಿಯನ್ನು ಬರೆಸಿಕೊಂಡು ಹೋಗುತ್ತಾರೆ. ಆದರೆ ಈ ಕಚೇರಿಯಲ್ಲಿ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತಿಲ್ಲ. ಅಲ್ಲಿನ ಕೆಲವೊಂದು ಲೋಪದೋಷಗಳಿಂದ ಯಾವುದೇ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತದೆ.
ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡುವವರ ( ಕಂಪ್ಯೂಟರ್ ಆಪರೇಟರ್ ) ಸಂಖ್ಯೆ ಎಂಟು. ಎಂಟು ಕಂಪ್ಯೂಟರ್ಗಳನ್ನು ಬಳಸಿ ದಿನವಿಡೀ ಕೆಲಸ ಮಾಡಬೇಕು. ಇಲ್ಲಿರುವ ಕಂಪ್ಯೂಟರ್ಗಳು ಹಳೆಯವು, ಅದರಲ್ಲಿ ಅಳವಡಿಸಿದ ತಂತ್ರಾಂಶವೂ ಹಳೆಯದು. ಸುಮಾರು 2004ರಲ್ಲಿ ಅಳವಡಿಸಿರುವ ತಂತ್ರಾಂಶದಿಂದ ನೋಂದಣಿ ಮಾಡುವ ಕೆಲಸ ತುಂಬಾ ನಿಧಾನವಾಗುತ್ತಿದೆ. ಇದರಿಂದ ನಿತ್ಯ ಕಚೇರಿಗೆ ಬರುವ ಅರ್ಜಿದಾರರದ್ದು ಅಲೆದಾಟವೇ ಆಗಿದೆ. ಬೆಳಗ್ಗೆ 10 ಗಂಟೆಗೆ ಕಚೇರಿ ಆರಂಭವಾಗುವ ಸಮಯಕ್ಕೆ ಅರ್ಜಿದಾರರು ಬಂದರೆ ತಮ್ಮ ಕೆಲಸ ಮುಗಿಸಿಕೊಂಡು ಹೋಗುವುದರೊಳಗೆ ಸಂಜೆಯಾಗುತ್ತದೆ. ಹೀಗೆ ಅನೇಕರು ಸೂಕ್ತ ಸಮಯಕ್ಕೆ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಲಾರದೆ ವಾಪಸ್ಸು ತೆರಳುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ.
ಈಗಿರುವ ಎಂಟು ಮಂದಿ ಕಂಪ್ಯೂಟರ್ ಆಪರೇಟರ್ಗಳಲ್ಲಿ ಒಬ್ಬರಿಬ್ಬರು ರಜೆ ಮೇಲೆಯೇ ಇರುತ್ತಾರೆ. ಈ ಕಾರಣದಿಂದಲೂ ದಿನವೂ ಕೆಲಸ ನಡೆಯುವುದು ಕಷ್ಟಕರವಾಗಿದೆ. ಅವರ ಸ್ಥಳಕ್ಕೆ ಹೊಸದಾಗಿ ಬಂದ ಆಪರೇಟರ್ಗಳಿಗೆ ಪ್ರಾಥಮಿಕ ಕೆಲಸವೇ ಗೊತ್ತಿಲ್ಲ. ಅವರು ದಾಖಲೆಗಳನ್ನು ಇಟ್ಟುಕೊಂಡು ಒಂದೊಂದು ಖಾತೆ ನೋಂದಣಿ ಮಾಡುವಷ್ಟರಲ್ಲಿ ಸುಮಾರು ಗಂಟೆಗಳೇ ಕಳೆದು ಹೋಗಿರುತ್ತದೆ. ಇದರಿಂದ ಕೆಲಸದ ಕಚೇರಿಗಳು ವಿಳಂಬವಾಗುತ್ತಿದೆ.
ಎಂಟು ಆಪರೇಟರ್ಗಳಿಗೆ ನಾಲ್ಕು ಸ್ಕ್ಯಾನಿಂಗ್ ಯಂತ್ರಗಳು
2004ರಲ್ಲಿ ಇಡಲಾದ ಗಣಕಯಂತ್ರಗಳನ್ನು ಇಂದಿಗೂ ಬಳಸಲಾಗುತ್ತಿದೆ. ಅದರಲ್ಲಿ ಎಂಟು ಜನ ಆಪರೇಟರ್ಗಳಿದ್ದರೆ ನಾಲ್ಕು ಸ್ಕ್ಯಾನಿಂಗ್ ಯಂತ್ರಗಳನ್ನು ಇಡಲಾಗಿದೆ. ಇದರಿಂದ ನಿತ್ಯ ಸ್ಕ್ಯಾನಿಂಗ್ ಮಾಡುವುದು ತಡವಾಗುತ್ತಿದೆ. ದಿನಕ್ಕೆ ನೂರಾರು ಮಂದಿ ನೋಂದಾವಣೆ ಕಾರ್ಯಕ್ಕಾಗಿ ಬರುತ್ತಾರೆ. ಆದರೆ ಸ್ಕ್ಯಾನರ್ಗಳಿಲ್ಲವಾದ್ದರಿಂದ ಕೆಲಸ ತಡವಾಗುತ್ತಿದೆ. ಇದರಿಂದ ಬಂದವರು ವಾಪಸ್ ತೆರಳುತ್ತಾರೆ. ಈ ಸಮಸ್ಯೆಗೆ ಮುಕ್ತಿಕಾಣಿಸಬೇಕು ಎಂದು ಜಿಲ್ಲಾ ಪತ್ರ ಬರಹಗಾರ ವೇದವ್ಯಾಸರು ಒತ್ತಾಯಿಸುತ್ತಾರೆ.
ಒಂದು ದಿನ ಮಾತ್ರಕ್ಕೆ ಟೋಕನ್ ಸಿಸ್ಟಮ್
ಕಳೆದ ಎರದು ದಿನಗಳಿಂದ ಕಂಪ್ಯೂಟರ್ನ ತಾಂತ್ರಿಕ ತೊಂದರೆಯಿಂದ 40ಕ್ಕೂ ಹೆಚ್ಚು ಕಡತಗಳು ಬಾಕಿ ಉಳಿದಿವೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಒಂದು ದಿನಕ್ಕೆ ಮಾತ್ರ ಟೋಕನ್ ಸಿಸ್ಟಂ ಅಳವಡಿಕೆ ಮಾಡಿ 60 ಟೋಕನ್ಗಳನ್ನು ವಿತರಣೆ ಮಾಡಲಾಗಿದೆ. ಒಟ್ಟು ನೂರು ಕಡತಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಆಪರೇಟರ್ಗಳಿಗೆ ವಹಿಸಿದ್ದು, ಅವು ಮುಗಿದ ನಂತರ ಉಳಿದಂತೆ ಹೆಚ್ಚುವರಿ ಕಡತಗಳನ್ನು ನೋಂದಣಿ ಮಾಡಿ ಕೊಡಲಾಗುವುದು ಎಂದು ಉಪನೊಂದಣಾಧಿಕಾರಿ ತಿಳಿಸಿದ್ದಾರೆ.
ರಾಮಚಂದ್ರಯ್ಯ, ಜಿಲ್ಲಾ ಪತ್ರ ಬರಹಗಾರ

ಎಲ್ಲಾ ನೊಂದಣಿಗೆ ತೊಂದರೆಯಾಗಿದೆ. ಬ್ಯಾಂಕ್ ರಜೆ ಇದ್ದಾಗ ಹಣ ಕಟ್ಟಿಸಿಕೊಳ್ಳುವುದಿಲ್ಲ. ದಿನ ದಿನಕ್ಕೆ ನೋಂದಣಿಗಳು ಹೆಚ್ಚಾಗುತ್ತಿವೆ. ಇದರಿಂದ ಸರ್ಕಾರಕ್ಕೆ ವರಮಾನ ಹೆಚ್ಚಾಗುತ್ತಿದೆ. ಆದರೆ ಇಲ್ಲಿರುವ ಕಂಪ್ಯೂಟರ್ ಆಪರೇಟರ್ಗಳು ಕೆಲಸ ಮಾಡುಲು ಹುಮ್ಮಸ್ಸು ತೋರಿಸುತ್ತಿಲ್ಲ. ಕೇಳಿದರೆ ಸರ್ವರ್ ಸರಿಯಿಲ್ಲ, ಸಿಸ್ಟಂ ಸಮಸ್ಯೆಯಾಗಿದೆ. ನಾಳೆ ಬನ್ನಿ ಎಂದು ಕಳುಹಿಸುತ್ತಾರೆ. ದಿನ ಒಂದಕ್ಕೆ ನೀಡಲಾದ ಟೋಕನ್ಗಳು 60 ಅದರ ಮೇಲೆ ಕೊಡುವುದಿಲ್ಲ ಎನ್ನುತ್ತಾರೆ. ಬೆಳಗ್ಗೆಯಿಂz ಬಂದು ಕಾದು ಕುಳಿತವರ ಪರಿಸ್ಥಿತಿ ಯಾರಿಗೆ ಹೇಳೋದು. ಇರುವ ಉಪನೊಂದಣಾಧಿಕಾರಿಗಳು ಒಬ್ಬರು ಇದ್ದರೆ ಇನ್ನೊಬ್ಬರು ಇರುವುದಿಲ್ಲ. ಇದರಿಂದ ಸಮಸ್ಯೆ ಹೆಚ್ಚಾಗುತ್ತಿದೆ.
ಬಾಲಕೃಷ್ಣ ಭಟ್, ನ್ಯಾಯವಾದಿ

ಕಂಪ್ಯೂಟರ್ ಹಳೆಯದನ್ನೇ ಬಳಸಲಾಗುತ್ತಿದೆ. ಅಂತರ್ಜಾಲ ಸೌಕರ್ಯವನ್ನು ಸರಿಯಾಗಿ
ಮಾಡಿಲ್ಲ. ಏನೇ ಕೆಲಸಕ್ಕೆ ಬರಲಿ ಸ್ಕ್ಯಾನಿಂಗ್ ಪೆಂಡಿಂಗ್ ಇದೆ ಎಂದು ಹೇಳುತ್ತಾರೆ.
ಈ ಮುಂಚೆ ತುಮಕೂರು ನಗರಕ್ಕೆ ಬೇರೆ ಹಾಗೂ ಗ್ರಾಮಾಂತರಕ್ಕೆ ಬೇರೆ ಎಂದು ಮಾಡುತ್ತೇವೆ ಎಂದು ಹೇಳಲಾಗಿತ್ತು. ಅದು ಇಂದಿಗೂ ಆಗಿಲ್ಲ. ಈ ಕಚೇರಿಯಲ್ಲಿ ಮೂವರು ಉಪ ನೊಂದಣಾಧಿಕಾರಿಗಳಿದ್ದರೂ ಏನೂ ಕೆಲಸ ಆಗುತ್ತಿಲ್ಲ. ಕಂದಾಯ ವಸೂಲಿಯಲ್ಲಿ ತುಮಕೂರು ಕಚೇರಿ ಮೊದಲ ಸ್ಥಾನದಲ್ಲಿದೆ. ಆದರೆ ಕೆಲಸ ಮಾಡುವುದರಲ್ಲಿ ಮಾತ್ರ ತುಂಬಾ ಹಿಂದುಳಿದಿದೆ. ಈಗ ಹೊಸದಾಗಿ ಬಂದ ಕಂಪ್ಯೂಟರ್ ಆಪರೇಟರ್ಗಳಿಗೆ ಪ್ರಿಲಿಮಿನರಿ ಕೆಲಸನೂ ಕೂಡ ಗೊತ್ತಿಲ್ಲ. ಇದರಿಂದ ಬೆಳಗ್ಗೆ ಬಂದವರು ಸಂಜೆಯಾದರೂ ತನ್ನ ಕೆಲಸಗಳಾಗದೆ ಕಾಯುತ್ತಾ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೊದಲು ಕಂಪ್ಯೂಟರ್ ಆಪರೇಟರ್ಗಳು ಬದಲಾಗಬೇಕು.
ಫಣೀಂದ್ರ, ಉಪನೊಂದಣಾಧಿಕಾರಿ

ಎರಡು ದಿನಗಳಿಂದ ತಾಂತ್ರಿಕ ದೋಷದಿಂದ ಎರಡು ದಿನಗಳಿಂದ ಸಮಸ್ಯೆ ಉಂಟಾಗಿತ್ತು. ಇನ್ನೊಬ್ಬರನ್ನು ಕಂಪ್ಯೂಟರ್ ಆಪರೇಟರ್ಅನ್ನು ನಿಯೋಜನೆಗೊಳಿಸಿ ನಾಳೆಯಿಂದ ದಿನಕ್ಕೆ 120 ದಾಖಲಾತಿಗಳು ನೋಂದಾವಣೆ ಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಕಳೆದ 15 ವರ್ಷಗಳಿಂದ ಹಳೆಯ ವರ್ಷನ್ ಕಂಪ್ಯೂಟರ್ಗಳನ್ನು ಬಳಸಲಾಗುತ್ತಿತ್ತು. ಇದೀಗ ಟೆಂಡರ್ ಬೇರೆ ಕಂಪನಿಗೆ ನೀಡಲಾಗಿ ಎಲ್ಲದನ್ನು ಹೊಸದಾಗಿ ಮಾಡಲಾಗಿದೆ. ಆ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರವಾಗಲಿದೆ.
