ಚಿತ್ರದುರ್ಗ;
12ನೇ ಶತಮಾನದಲ್ಲಿ ಪ್ರತಿಯೊಬ್ಬರೂ ಕಾಯಕಪ್ರೇಮಿಗಳಾಗಿದ್ದರು. ತಾವು ಮಾಡುವ ದಾಸೋಹದಲ್ಲಿ ದೇವರನ್ನು ಕಾಣುತ್ತಿದ್ದರು. ಕಾಯಕದ ಮೂಲಕ ಬದುಕನ್ನು ಎತ್ತರಿಸಿಕೊಂಡರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶ್ರೀಮುರುಘಾಮಠದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಜಮುರಾ ನಾಟಕೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, 21ನೇ ಶತಮಾನದಲ್ಲಿ ದುಡಿಮೆ ಒಂದುಕಡೆ ಕಾಯಕ ಒಂದು ಕಡೆಯಾಗಿದೆ ಆದರೆ ಶರಣರ ದೃಷ್ಟಿಯಲ್ಲಿ ಕಾಯಕ ದೊಡ್ಡದಾಗಿತ್ತು ದೈವೀಭಾವನೆ ಚಿಕ್ಕದಾಗಿತ್ತು. ನಾವು ಇಂದು ದುಡಿಮೆಯೇ ದೇವರು ಎಂದು ಭಾವಿಸಿಕೊಳ್ಳಬೇಕು.
ಶರಣರು ಎಂದರೆ ಪ್ರತ್ಯಕ್ಷ ಶಿವ. ಭಾವೈಕ್ಯತೆ ಬೆಸೆಯುವ ಚಿಂತನೆಗಳು ನಮಗೆ ಬೇಕು. ಇಂದು ಕಾಂಚಾಣ ಪ್ರೀತಿ ಹೆಚ್ಚಾಗಿದೆ. ಕಾಯಕದಿಂದ ಯಾರೂ ವಂಚಿತರಾಗಬಾರದು. ಸ್ವಾವಲಂಬಿ ಬದುಕು ನಮ್ಮದಾಗಬೇಕು ಎಂದರು.
ರಬಕವಿಯ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ಬದುಕಿನಲ್ಲಿರುವ ಏರುಪೇರುಗಳನ್ನು ತಿಳಿಸುವ ಪ್ರಯತ್ನವನ್ನು ನಾಟಕಗಳು ಮಾಡುತ್ತವೆ. ಸಮಾಜಕ್ಕೆ ದೇಶಕ್ಕೆ ನಾಟಕಗಳ ಮೂಲಕ ಉತ್ತಮ ಸಂದೇಶವನ್ನು ತಲುಪಿಸುವ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಮುಖ್ಯಅತಿಥಿ ಹೊಸಪೇಟೆಯ ರಂಗನಿರ್ದೇಶಕ ಅಬ್ದುಲ್ಲಾ ಮಾತನಾಡಿ, ನಾನು ಅತ್ಯಂತ ಸ್ಲಂ ಪ್ರದೇಶದಿಂದ ಬಂದವನು. ಸ್ವಚ್ಛತೆ ಬಗ್ಗೆ ಅಂದಿನಿಂದಲೇ ಸಾಕಷ್ಟು ಜಾಗೃತಿಯನ್ನು ಮೂಡಿಸುತ್ತ ಬಂದಿದ್ದೇನೆ. ನಮಗೆ ಪರಿಸರ ಮತ್ತು ಶಿಕ್ಷಣ ಕಡ್ಡಾಯವಾಗಬೇಕು. ಆಗ ನಾವು ಬೆಳೆಯುತ್ತೇವೆ. ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸುತ್ತ ಜನರಿಗೆ ತಿಳುವಳಿಕೆ ನೀಡುತ್ತ ಬಂದಿದ್ದೇನೆ ಎಂದರು.
ಹಿಂದಿನ ಎರಡು ನಾಟಕಗಳ ವಿಮರ್ಶೆಯನ್ನು ಡಾ. ಯಶೋದ ರಾಜಶೇಖರಪ್ಪ ಮಾಡಿದರು. ರಂಗನಿರ್ದೇಶಕಿ ಡಾ. ನಾಗರತ್ನಮ್ಮ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮರಿಯಮ್ಮನಹಳ್ಳಿಯ ರಂಗ ಕಲಾವಿದೆ ಶ್ರೀಮತಿ ರೇಣುಕ ಅವರನ್ನು ಗೌರವಿಸಲಾಯಿತು.ಬಸವ ಮಕ್ಕಳು ವಚನ ಪ್ರಾರ್ಥನೆ ಮಾಡಿದರು. ಕೆ.ಪಿ.ಎಂ. ಗಣೇಶಯ್ಯ ಸ್ವಾಗತಿಸಿದರು. ನಂತರ ಡಾ. ಶಿವಮೂರ್ತಿ ಮುರುಘಾ ಶರಣರ ರಚನೆ, ಉಮೇಶ ಪತ್ತಾರ್ ಸಂಗೀತ ಹಾಗು ವೈ.ಡಿ. ಬದಾಮಿ ನಿರ್ದೇಶಿಸಿರುವ ಬೆಳಕಿನೆಡೆಗೆ ನಾಟಕವನ್ನು ಜಮುರಾ ಸುತ್ತಾಟ ತಂಡವು ಅಭಿನಯಿಸಿ ಜನಮೆಚ್ಚುಗೆಗೆ ಪಾತ್ರವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








