ಚಿಕ್ಕನಾಯಕನಹಳ್ಳಿ
2019ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಾಣೆಯ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಅಕ್ರಮಗಳ ತಡೆಗಟ್ಟುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ವಿ.ಕುಲಕರ್ಣಿ ತಿಳಿಸಿದರು.ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಚುನಾವಣಾಧಿಕಾರಿ ಕರೆದಿದ್ದ ತಾಲ್ಲೂಕಿನ ಕಲ್ಯಾಣ ಮಂಟಪ, ಹೋಟೆಲ್, ಲಾಡ್ಜ್, ಬಾರ್, ರೆಸ್ಟೋರೆಂಟ್, ಡಾಬಾ, ಮಾಲಿಕರ ಸಭೆಯಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಕಡ್ಡಾಯವಾಗಿ ಪಾಲನೆಯಿರುತ್ತದೆ, ಲಾಡ್ಜ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಹೆಚ್ಚು ಜನ ಬಂದಾಗ ಅವರ ಮಾಹಿತಿ ಅಗತ್ಯ, ಕಲ್ಯಾಣ ಮಂಟಪಗಳಲ್ಲಿ ಸಮಾರಂಭಗಳು, ರಾಜಕೀಯ ಸಭೆಗಳಿಗೆ ಚುನಾವಣಾಧಿಕಾರಿಗಳಿಂದ ಪರವಾನಗಿಯಿರಬೇಕು ಎಂದ ಅವರು, ಛತ್ರಗಳಲ್ಲಿ ನಡೆಯುವ ರಾಜಕೀಯ ಸಭೆಗಳಿಗೆ ಸುವಿಧ ಎಂಬ ಆಪ್ಮೂಲಕ ಸಭೆಯ ಮಾಹಿತಿ ನೀಡಬೇಕು, ರಾಜಕೀಯ ಸಭೆಯ ದಿನಾಂಕ, ಪಕ್ಷ, ಜನರ ಸೇರುವಿಕೆ, ಸಮಯ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಮೂದಿಸಿದ ನಂತರ ಪರವಾನಗಿಯನ್ನು ನೀಡಲಾಗುತ್ತದೆ ಎಂದರು.
ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ ಪರವಾನಗಿಯಲ್ಲಿ ನಮೂದಿಸಿರುವ ನಿಯಮಗಳ ಮಿತಿಯಲ್ಲಿ ಸಭೆಗಳನ್ನು ನಡೆಸಬೇಕು. ಇದಕ್ಕೆ ಗುರುತಿನ ಚೀಟಿ ಕಡ್ಡಾಯ ಸಭೆ ಸಮಾರಂಭಗಳಲ್ಲಿ ರಾಜಕೀಯ ಪಕ್ಷಗಳ ವ್ಯಕ್ತಿಗಳು ಸೀರೆ, ಉಡುಗೊರೆ, ಕೊಡುಗೆಗಳನ್ನು ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇಂತಹ ಘಟನೆ ಜರಗಿದರೆ ಕಲ್ಯಾಣ ಮಂಟಪಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದ ಅವರು, ಬಾರ್, ಲಾಡ್ಜ್ ಹಾಗೂ ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ ಅಕ್ರಮ ಹಣದ ವಹಿವಾಟಿನ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಚುನಾವಣೆ ಮಗಿಯುವವರೆಗೂ ದೊಡ್ಡ ಮೊತ್ತದ ಹಣದ ಎಲ್ಲಾ ವ್ಯವಹಾರಗಳಿಗೂ ಕಡ್ಡಾಯವಾಗಿ ದಾಖಲೆ ನೀಡಬೇಕು, ದಾಖಲೆ ಇಲ್ಲದ ದೊಡ್ಡಮಟ್ಟದ ಹಣ ದೊರೆತರೆ ಜಪ್ತಿ ಮಾಡಲಾಗುವುದು ನಂತರ ಜಪ್ತಿ ಮಾಡಿದ ಹಣವನ್ನು ಹಿಂಪಡೆಯಲು ಬ್ಯಾಂಕ್ ರಶೀದಿ, ಮೊಬೈಲ್ ಎಸ್.ಎಂ.ಎಸ್ ಮುಂತಾದ ಅಗತ್ಯ ದಾಖಲೆ ನೀಡಿ ಹಿಂಪಡೆಯಬಹುದು ಎಂದರು.
ಅಬಕಾರಿ ಇಲಾಖಾಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಪರವಾನಗಿ ಇಲ್ಲದ ಮಧ್ಯವನ್ನು ಜಪ್ತಿ ಮಾಡಲಾಗುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ಕುಡಿತಕ್ಕೆ ಅವಕಾಶವಿಲ್ಲ ಎಂದರು.ಅಕ್ರಮ ಹಣ ಹಾಗೂ ಮದ್ಯ ಮತ್ತಿತರ ವಸ್ತುಗಳ ಸಂಗ್ರಹದ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಮೊ. ಸಂಖ್ಯೆ 9480695352, ಅಬಕಾರಿ ಅಧಿಕಾರಿ ಮೊ. 9972325224 ಹಾಗೂ ತಹಸೀಲ್ದಾರ್ 9141586566 ದೂರು ನೀಡಬಹುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
