ಹುಳಿಯಾರು:
ಪರಿಶಿಷ್ಟ ಪಂಗಡದ ಮೀಸಲಾತಿ ಕಬಳಿಸಲು ಕೆಲಸವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವುಗಳನ್ನು ಪತ್ತೆಯಚ್ಚಿ ಪಡೆದಿರುವ ಹಾಗೂ ಕೊಟ್ಟವರಿಗೆ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೆಶಕ ಹಾಗೂ ನಾಯಕ ಜನಾಂಗದ ಮುಖಂಡ ಸಿಂಗದಹಳ್ಳಿ ರಾಜ್ ಕುಮಾರ್ ಆಗ್ರಹಿಸಿದರು.
ಹುಳಿಯಾರಿನಲ್ಲಿ ಗುರುವಾರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜಾಗೃತಿ ಹೋರಾಟ ವೇದಿಕೆಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ವರ್ಗದಲ್ಲಿ ನಾಯಕ, ವಾಲ್ಮೀಕಿ, ಬೇಡ ಜನಾಂಗವಲ್ಲದೆ 49 ಕ್ಕೂ ಜಾತಿಗಳು ಸೇರುತ್ತವೆ. ಇವರೆಲ್ಲರಿಗೂ ವಿದ್ಯೆ, ಉದ್ಯೋಗ, ರಾಜಕೀಯ, ಆರ್ಥಿಕದಲ್ಲಿ ಮೀಸಲಾತಿ ನೀಡಲು ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದರು. ಸಂವಿಧಾನ ಬರೆದಾಗ 10 ಲಕ್ಷ ಜನಸಂಖೆಯಿದ್ದು ಶೇ.3 ಮೀಸಲಾತಿ ಜಾರಿಯಲ್ಲಿತ್ತು. ಈಗ 60 ಲಕ್ಷ ಜನಸಂಖ್ಯೆಯಾಗಿದ್ದು ಈಗಲೂ ಶೇ.3 ರಷ್ಟೇ ಮೀಸಲಾತಿಯಿದ್ದರೆ ಜನಾಂಗ ಅಭಿವೃದ್ಧಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಈಗ ಹಿಂದುಳಿದ ವರ್ಗದ ಕೆಲ ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಡ ಏರುತ್ತಿವೆ. ಹಿಂದುಳಿದ ವರ್ಗದವರೂ ಸಹ ನಮ್ಮ ಸೋದರ ಜಾತಿಯಾಗಿರುವುದರಿಂದ ಅವರ ಸೇರ್ಪಡೆಗೆ ನಮ್ಮಲ್ಲಿ ಭಿನ್ನಾಭಿಪ್ರಾಯ ಹಾಗೂ ಆಕ್ಷೇಪವಿಲ್ಲ. ಆದರೆ ಶೇ.3 ಮೀಸಲಾತಿ ಹೆಚ್ಚಿಸದೆ ಬೇರೆಬೇರೆ ಜಾತಿಗಳನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಅವರಿಗೂ ಅನ್ಯಾಯ ಮಾಡಿದಂತೆ ಹಾಲಿ ಇರುವ ಜನಾಂಗಕ್ಕೂ ಅನ್ಯಾಯ ಮಾಡಿದಂತ್ತಾಗುತ್ತೆ ಎಂದು ಅಭಿಪ್ರಾಯಪಟ್ಟರು.
ಹೋಬಳಿ ನಾಯಕ ಸಮಾಜದ ಮುಖಂಡ ಎಚ್.ಡಿ.ದುರ್ಗರಾಜು ಅವರು ಮಾತನಾಡಿ ಒಂದು ಜಾತಿ ಜನರ ಏಳಿಗೆಗಾಗಿ ಮಠದಿಮದ ವಿಧಾನಸೌಧಕ್ಕೆ ಪಾದಯಾತ್ರೆ ಕೈಗೊಂಡ ಏಕೈಕ ಸ್ವಾಮೀಜಿ ನಮ್ಮ ನಾಯಕ ಜನಾಂಗದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ. ಇವರ ಈ ಪಾದಯಾತ್ರೆಯಿಂದ ನಾಯಕ ಜನಾಂಗದಲ್ಲಿ ಜಾಗೃತಿ ಮೂಡಿದ್ದು ಹೋರಾಟದ ಕಿಚ್ಚು ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಕೂಡ ಕೊಟ್ಟ ಭರವಸೆಯಂತೆ 2 ತಿಂಗಳೊಳಗಾಗಿ ಮೀಸಲಾತಿ ಹೆಚ್ಚಿಸದಿದ್ದರೆ ಹಳ್ಳಿಹಳ್ಳಿಗಳಲ್ಲಿ ನಾಯಕ ಜನಾಂಗ ಹೋರಾಟ ಮಾಡಲಿ ಸಿದ್ಧವಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಸೀತರಾಮಯ್ಯ ಅವರು ಮಾತನಾಡಿ ಮೇಲ್ವರ್ಗದ ಸ್ವಾಮೀಜಿಗಳು ಪಾದಯಾತ್ರೆ ಮಾಡುವುದಿರಲಿ ಪ್ರತಿಭಟನೆಯ ಎಚ್ಚರಿಕೆ ಕೊಟ್ಟರೂ ಮಠದ ಬಾಗಿಲಿಗೆ ಹೋಗಿ ಬೇಡಿಕೆ ಈಡೇರಿಸಿ ಬರುತ್ತಾರೆ. ಆದರೆ ವಾಲ್ಮೀಕಿ ಸಮಾಜದ ಸ್ವಾಮೀಜಿ ನೂರಾರು ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಾಗ ಕಡೇ ಪಕ್ಷ ಮಾರ್ಗ ಮಧ್ಯದಲ್ಲಾದರೂ ಸರ್ಕಾರ ಬಂದು ಅಹವಾಲು ಆಲಿಸಬೇಕಿತ್ತು. ಆದರೆ ನೂರಾರು ಕಿ.ಮೀ ನಡೆಸಿ ವಿಧಾನಸೌದಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಂದಿರುವುದು ಸರ್ಕಾರದ ಮಲತಾಯಿ ಧೋರಣೆಯ ನಿದರ್ಶನವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾತನಾಯಕನಹಟ್ಟಿ ಮಂಜುನಾಥ್, ದಸೂಡಿಯ ಮಂಜುಮದಕರಿ, ಮಾದಾಪುರ ರಂಗನಾಥ್, ಶೆಟ್ಟಿಕೆರೆ ಪರಮೇಶ್, ಹರೇನಹಳ್ಳಿ ಮೋಹನ್, ಕೋರಗೆರೆ ರೇಣುಕಯ್ಯ, ದೊಡ್ಡಪಾಳ್ಯ ನಾಗೇಶ್, ಯರೇಕಟ್ಟೆರಾಮು, ದಬ್ಬಗುಂಟೆ ಶಶಿ, ಕುಶಾಲಪುರ ಬಸವರಾಜು, ಕುರಿಹಟ್ಟಿ ಗೋವಿಂದರಾಜು, ಹುಳಿಯಾರು ದಿವಾಕರ, ಚಿಕ್ಕಬಿದರೆ ರಮೇಶ್, ದಬ್ಬಗುಂಟೆ ಜಯಣ್ಣ, ದಸೂಡಿ ಹನಮಣ್ಣ, ಸಿಂಗಾಪುರ ಸುರೇಶ್, ಸೀಗೆಬಾಗಿ ವರದರಾಜು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
