ಫಲಾನುಭವಿಗಿಂತ ವಿತರಕರ ಹೊಟ್ಟೆ ಭರ್ತಿ..!!

ದಾವಣಗೆರೆ :

ವಿಶೇಷ ವರದಿ : ವಿನಾಯಕ ಪೂಜಾರ್

   ಹಸಿವು ಮುಕ್ತ ಕರ್ನಾಟಕಕ್ಕಾಗಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಅನ್ನ ಭಾಗ್ಯ ಯೋಜನೆಯು, ಫಲಾನುಭವಿಗಳ ಹಸಿವು ನೀಗಿಸುವ ಬದಲು ಅಧಿಕಾರಿಗಳ ಹಾಗೂ ಪಡಿತರ ವಿತರಕರ ಹೊಟ್ಟೆ ತುಂಬಿಸುತ್ತಿರುವುದರಿಂದ ಈ ಯೋಜನೆಯ ಆಶಯವೇ ಬುಡಮೇಲಾಗಿದೆ.

      ಹೌದು… ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜಾರಿಗೆ ತಂದ ಹಲವು ಜನಪರ ಯೋಜನಗಳ ಪೈಕಿ, ಅನ್ನ ಭಾಗ್ಯ ಯೋಜನೆಯು ಒಂದಾಗಿದೆ. ಅವರೆನೋ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಯೋಜನೆ ಘೋಷಿಸಿ, ಆರಂಭದಲ್ಲಿ ಕೆಜಿ ಅಕ್ಕಿಗೆ ಒಂದು ರೂ. ನಿಗದಿ ಮಾಡಿದ್ದರು. ಬಳಿಕ ಉಚಿತ ಅಕ್ಕಿ ನೀಡಲು ಆದೇಶ ಮಾಡಿದರು. ಈ ಯೋಜನೆ ಮೈತ್ರಿ ಸರ್ಕಾರದಲ್ಲೂ ಮುಂದುವರೆದಿದ್ದು, ಕೆಲ ಅಧಿಕಾರಿಗಳ ಹಾಗೂ ಪಡಿತರ ವಿತರಕರ ಒಳ ಒಪ್ಪಂದಿಂದಾಗಿ ಈ ಯೋಜನೆಯೇ ಹಳ್ಳ ಹಿಡಿದಿದೆ.

ಅಧಿಕಾರಿಗಳ ಕುಮ್ಮಕ್ಕು:

     ಅನ್ನ ಭಾಗ್ಯ ಯೋಜನೆ 2014ರಲ್ಲಿ ಆರಂಭವಾದರೂ, ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿ, ಮೇ 2015ರ ಮೇ ಮಾಹೆಯಿಂದ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‍ದಾರರಿಗೆ ಅಕ್ಕಿ ಮತ್ತು ಗೋಧಿ ಸಂಪೂರ್ಣ ಉಚಿತವಾಗಿ ಹಾಗೂ ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಹಾಗೂ ಸೀಮೆ ಎಣ್ಣೆ ರಿಯಾಯಿತಿ ದರದಲ್ಲಿ ಪೂರೈಸುವ ಉದ್ದೇಶ ಹೊಂದಲಾಗಿತ್ತು. ಇದೀಗ ಸೀಮೆ ಎಣ್ಣೆ, ಗೋಧಿ, ಅಡುಗೆ ಎಣ್ಣೆ, ಸಕ್ಕರೆ ಪೂರೈಕೆ ಸ್ತಗಿತವಾಗಿದೆ. ಆದರೆ, ಉಚಿತವಾಗಿ ನೀಡಬೇಕಿರುವ ಅಕ್ಕಿಗೂ ಫಲಾನುಭವಿಗಳಿಂದ ಪಡಿತರ ವಿತರಕರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕೆಲ ಅಧಿಕಾರಿಗಳ ಕುಮ್ಮಕ್ಕು ಸಹ ಇದೆ.

ಹೆಚ್ಚುವರಿ ಹಣ ವಸೂಲಿ:

    ಈಗ ಅನ್ನ ಭಾಗ್ಯ ಯೋಜನೆಯಡಿ ತಲಾ ಉಚಿತ ಏಳು ಕೆಜಿ ಅಕ್ಕಿ ಹಾಗೂ ಒಂದು ಕಾರ್ಡ್‍ಗೆ ಒಂದು ಕೆಜಿ ತೊಗರಿಬೇಳೆ ಯನ್ನು ರಿಯಾಯಿತಿ ದರದಲ್ಲಿ (38 ರೂ) ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಹೀಗಾಗಿ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಪ್ರತಿ ತಿಂಗಳು ಪಡಿತರ ಮಂಜೂರಾಗಿರುವುದರ ಮಾಹಿತಿ ಹಾಗೂ ಫಲಾನುಭವಿಗಳು ನೀಡಬೇಕಾಗಿರುವ ಮೊತ್ತದ ಬಗ್ಗೆ ಸಂದೇಶ ಬರುತ್ತದೆ. ಫಲಾನುಭವಿಗಳು 38 ರೂ. ನೀಡಬೇಕೆಂಬ ಸಂದೇಶ ಬಂದಿದ್ದರೂ ಸಹ ಪಡಿತರ ವಿತರಕರು ಒಬ್ಬ ಕಾರ್ಡುದಾರರಿಂದ 50ರಿಂದ 60 ರೂ. ವಸೂಲಿ ಮಾಡುತ್ತಿದ್ದಾರೆ.

     ಹೀಗಾಗಿ ಪಡಿತರ ವಿತರಕರ ಜೇಬಿಗೆ 12ರಿಂದ 22 ರೂ.ಗಳು ಅನಾಯಾಸವಾಗಿ ಸೇರುತ್ತಿದೆ. ಇದನ್ನು ಪಡಿತರ ವಿತರಕರಿಗೆ ಪ್ರಶ್ನಿಸಿದರೇ, ತಮ್ಮ ಕಾರ್ಡ್‍ಗಳಿಗೆ ಕತ್ತು ಬರಬಹುದೆಂಬ ಕಾರಣಕ್ಕೆ ಯಾರೂ ಸಹ ಇದನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಅಕಾಸ್ಮಾತ್ ಯಾರಾದರೂ ಅಧಿಕಾರಿಗಳಿಗೆ ಹೆಚ್ಚುವರಿ ಹಣ ಪಡೆಯುತ್ತಿರುವುದ ಬಗ್ಗೆ ದೂರು ನೀಡಿದರೆ, ಅಧಿಕಾರಿಗಳು ಪಡಿತರ ವಿತರಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ದೂರು ನೀಡಿದವರ ಸಂಪೂರ್ಣ ಮಾಹಿತಿಯನ್ನು ಪಡಿತರ ವಿತರಕರಿಗೆ ನೀಡಿ, ಸರಿ ಪಡಿಸಿಕೊಳ್ಳುವಂತೆ ಬಿಟ್ಟಿ ಸಲಹೆ ನೀಡುತ್ತಿರುವುದೇ, ಪಡಿತರ ವಿತರಕರೊಂದಿಗೆ ಅಧಿಕಾರಿಗಳು ಮಾಡಿಕೊಂಡಿರುವ ಅಪವಿತ್ರ ಮೈತ್ರಿಗೆ ಕೈಗನ್ನಡಿಯಾಗಿದೆ.

ಬೆಳೆದಿದೆ ಪಡಿತರ ಮಾಫಿಯಾ:

    ಇನ್ನೂ ಕೆಲ ಪಡಿತರ ವಿತರಕರು ಫಲಾನುಭವಿಗಳ ಥಂಬ್ ಪಡೆದು, ಕೆಜಿಗೆ 10ರಿಂದ 11 ರೂ.ಗಳಂತೆ ಲೆಕ್ಕ ಹಾಕಿ, ಅಕ್ಕಿಯನ್ನು ಸಹ ತೂಗದೇ, ಹಣ ನೀಡಿ ಅವರೇ ಖರೀದಿಸಿ, ನಂತರ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾರೆ. ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುವ ಜಾಲ ದಾವಣಗೆರೆಯಲ್ಲಿ ಒಂದು ದೊಡ್ಡ ಮಾಫಿಯಾದಂತೆ ಬೆಳೆದಿದೆ.

 ಪ್ರಾಮಾಣಿಕರ ಹತ್ಯೆಗೂ ಯತ್ನ:

     ಪಡಿತರ ಅಕ್ಕಿಯನ್ನು ದೊಡ್ಡ ಬಾತಿಯ ಗೋಡಾಂ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲು ಹೋಗಿದ್ದ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ಮೇಲೆ ಲಾರಿ ಹತ್ತಿಸಿ, ಕೊಲೆ ಮಾಡಲು ಸಹ ಯತ್ನಿಸಲಾಗಿತ್ತು. ಅಲ್ಲದೇ, ಇತ್ತೀಚೆಗಷ್ಟೇ ಚಿತ್ರದುರ್ಗದ ಆಹಾರ ನಿರೀಕ್ಷರೊಬ್ಬರನ್ನು ದಾವಣಗೆರೆಗೆ ಕರೆಯಿಸಿ, ಆರ್‍ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಗೆ ಯತ್ನಿಸಲಾಗಿತ್ತು. ಹೀಗೆ ಪಡಿತರ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗುವ ಅಧಿಕಾರಿಗಳನ್ನೇ ಮುಗಿಸುವ ಮಟ್ಟಕ್ಕೆ ಪಡಿತರ ಮಾಫಿಯಾ ಬೆಳೆದು ನಿಂತಿದೆ.

    ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ, ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.

ಅಧಿಕಾರಿಗಳನ್ನ ಸಾಕಬೇಕು!

      ಸರ್ಕಾರ ನಮಗೆ ನೀಡುತ್ತಿರುವ ಕಮಿಷನ್ ಸಾಲುತ್ತಿಲ್ಲ. ಅಲ್ಲದೇ, ಇಲ್ಲಿ ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಹಿಡಿದು, ಅಧಿಕಾರಿಗಳನ್ನು ಸಾಕಬೇಕಾಗಿದೆ. ಹೀಗಾಗಿ ಪಡಿತರ ನೀಡುವಾಗದ 38 ರೂ.ಗಳ ಬದಲು 60 ರೂ. ಪಡೆಯುತ್ತೇವೆ. ಅಧಿಕಾರಿ ಗಳಿಗೆ ಪ್ರತಿ ತಿಂಗಳು ಅವರಿಗೆ ಸಲ್ಲಿಸಬೇಕಾದ ಕಾಣಿಕೆ ಸಲ್ಲಿಸದಿದ್ದರೇ, ನಮಗೆ ಅನಗತ್ಯ ಕಿರುಕುಳ ನೀಡುತ್ತಾರೆ. ಆದ್ದರಿಂದ ಹೆಚ್ಚುವರಿ ಹಣ ಪಡೆಯುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಸದ ಪಡಿತರೆ ವಿತರಕರೊಬ್ಬರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link