ರೇಸಿಂಗ್ ಪಿಜನ್ ಸೊಸೈಟಿ ವತಿಯಿಂದ ಪಾರಿವಾಳ ಸ್ಪರ್ಧೆ

ಚಳ್ಳಕೆರೆ

      ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡೆಗಳು ಜನಪ್ರಿಯತೆಯ ತುತ್ತ ತುದಿಯಲ್ಲಿದ್ದು, ಹೆಚ್ಚು ಪ್ರಚಾರವನ್ನು ಪಡೆದಿವೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಜನ್ಮತಾಳಿ ನೂರಾರು ವರ್ಷಗಳ ಕಾಲ ಜಾನಪದ ಸೊಗಡಿನ ಕಲೆಯನ್ನು ಹೊತ್ತಿರುವ ಪಾರಿವಾಳ ಸ್ಪರ್ಧೆಯನ್ನು ಚಳ್ಳಕೆರೆ ರೇಸಿಂಗ್ ಪಿಜನ್ ಸೊಸೈಟಿ ಹಮ್ಮಿಕೊಂಡಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡುವ ಮೂಲಕ ಮರೆಯಾಗುತ್ತಿದ್ದ ಪಾರಿವಾಳ ಸ್ಪರ್ಧೆಗೆ ಹೊಸ ಆಯಾಮವನ್ನು ನೀಡಿದ್ಧಾರೆ.

       ನಗರದ ಕಾಟಪ್ಪನಹಟ್ಟಿಯ ಕಾಟಂಲಿಂಗೇಶ್ವರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವ ವಕೀಲ ವಿಜಯಕುಮಾರ್ ಮಾತನಾಡಿ, ಪಾರಿವಾಳದ ಬಗ್ಗೆ ಐತಿಹಾಸಿಕ ದಾಖಲೆಗಳನ್ನು ನಾವು ಕಾಣಬಹುದಾಗಿದೆ. ಇಂದು ನಾವು ಸ್ಪರ್ಧೆಯ ಮೂಲಕ ಪಾರಿವಾಳವನ್ನು ನೋಡುತ್ತಿದ್ದೇವೆ. ಆದರೆ, ಪಾರಿವಾಳವನ್ನು ಅನೇಕ ಉತ್ತಮ ಕಾರ್ಯಗಳಿಗಾಗಿ ರಾಜ ಮಹಾರಾಜರು ಉಪಯೋಗಿಸುತ್ತಿದ್ದರು.

       ಈ ಹಿಂದೇ ಯಾವುದೇ ರೀತಿಯ ವಿಚಾರ ತಿಳಿಸುವ ಸಾಧನಗಳು ಇಲ್ಲದ ಕಾರಣ ಪಾರಿವಾಳ ಕಾಲಿಗೆ ಮಾಹಿತಿಯನ್ನು ಕಟ್ಟಿ ಸಂಬಂಧಪಟ್ಟವರಿಗೆ ಕಳುಹಿಸಿಕೊಡಲಾಗುತ್ತಿತ್ತು. ಅವರು ಸಹ ತಮ್ಮ ಸಂದೇಶವನ್ನು ಇದೇ ಪಾರಿವಾಳದ ಮೂಲಕ ಕಳುಹಿಸಿಕೊಡುತ್ತಿದ್ದರು. ಪಾರಿವಾಳಗಳು ಒಂದು ಸಂಸ್ಥಾನದಿಂದ ಮತ್ತೊಂದು ಸಂಸ್ಥಾನದ ರಾಯಬಾರಿಗಳಾಗಿ, ಮಾಹಿತಿದಾರರಾಗಿ ಕಾರ್ಯನಿರ್ವಹಿಸಿವೆ. ಇಂದು ಸಹ ನಮ್ಮ ಸೈನ್ಯದಲ್ಲಿ ಪಾರಿವಾಳಗಳನ್ನು ಉಗ್ರರ ಗುಪ್ತ ಮಾಹಿತಿ ಪಡೆಯಲು ಬಳಸುತ್ತಿರುವುದು ವಿಶೇಷ.

      ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿವನಾಗ ಮೆಡಿಕಲ್ಸ್ ವೀರೇಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ತನ್ನದೇಯಾದ ವೈಶಿಷ್ಯತೆಯನ್ನು ಕಾಯ್ದುಕೊಂಡು ಬಂದಿರುವ ಪಾರಿವಾಳ ಸ್ಪರ್ಧೆ ಹಲವಾರು ಜನಪ್ರಿಯ ಮನರಂಜನೆಯಲ್ಲ್ಲಿ ಒಂದಾಗಿದೆ. ಪಾರಿವಾಳಗಳು ಎಲ್ಲಾ ರೀತಿಯಲ್ಲೂ ನಮ್ಮ ಬದುಕಿನಲ್ಲಿ ಸಹಕಾರ ನೀಡುತ್ತಾ ಬಂದಿವೆ. ಒಬ್ಬ ವ್ಯಕ್ತಿ ಐದಾರು ಪಾರಿವಾಳಗಳನ್ನು ಸಾಕಿದಲ್ಲಿ ಅವನು ತನ್ನ ಬದುಕನ್ನೇ ರೂಪಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಪಾರಿವಾಳಗಳ ಯಾವುದೇ ಸ್ಪರ್ಧೆ ನಡೆದಿರಲಿಲ್ಲ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೋಷವೆನ್ನಿಸುತ್ತದೆ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಪಿಜನ್ ಸೊಸೈಟಿ ಅಧ್ಯಕ್ಷರೂ, ಹಿರಿಯ ರಂಗಕಲಾವಿದರೂ ಆದ ಎಸ್.ಕೆ.ಸೂರಯ್ಯ, ಪಾರಿವಾಳಗಳ ಸ್ಪರ್ಧೆಯ ಬಗ್ಗೆ ಇಲ್ಲಿನ ಯುವ ಜನರು ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಅವರ ಅಭಿಲಾಷೆಯಂತೆ ಈ ಕಾರ್ಯಕ್ರಮವನ್ನು ನಡೆಸಲಾಗಿದೆ.

      ವಿಶೇಷವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಪಾರಿವಾಳಗಳನ್ನು ಒಂದೆಡೆ ಸೇರಿಸಿ ಅವುಗಳನ್ನು ಆಂದ್ರ ಪ್ರದೇಶದ ನಂದ್ಯಾಲ ನಗರದಿಂದ ಚಳ್ಳಕೆರೆ ನಗರಕ್ಕೆ ಸುಮಾರು 50ಕ್ಕೂ ಹೆಚ್ಚು ಪಾರಿವಾಳಗಳನ್ನು ಸ್ಪರ್ಧೆಗಾಗಿ ಹಾರಿಬಿಡಲಾಗಿತ್ತು. ವಿಶೇಷವೆಂದರೆ ನಂದ್ಯಾಲದಿಂದ ಚಳ್ಳಕೆರೆ ನಗರಕ್ಕೆ 300 ಕಿ.ಮೀ ದೂರವಿದ್ದು ಈ ಪಾರಿವಾಳಗಳು ವಾಹನಗಳಿಗಿಂತ ವೇಗವಾಗಿ ಕೇವಲ 2 ಗಂಟೆ 40 ನಿಮಿಷಗಳಲ್ಲಿ ಚಳ್ಳಕೆರೆ ನಗರಕ್ಕೆ ಬಂದು ಸೇರಿವೆ.

       ಇದರಲ್ಲಿ ತಳಕಿನ ತೋಡ್ಲಾರಹಟ್ಟಿ, ನೇರ್ಲಗುಂಟೆ, ಕೆರೆಹಿಂದಾಲಹಟ್ಟಿ, ಚಳ್ಳಕೆರೆ, ಚಿಕ್ಕಮ್ಮನಹಳ್ಳಿ, ನನ್ನಿವಾಳ ಮುಂತಾದ ಗ್ರಾಮಗಳ ಪಾರಿವಾಳಗಳಿದ್ದು ತಳಕು ಗ್ರಾಮದ ಆನಂದಮೂರ್ತಿ ಎಂಬುವವರ ಎರಡು ಪಾರಿವಾಳಗಳು ಮೊದಲಿಗೆ ಚಳ್ಳಕೆರೆ ನಗರಕ್ಕೆ ತಲುಪಿ ಪ್ರಥಮ, ದ್ವಿತೀಯ ಸ್ಥಾನವನ್ನು ಗಳಿಸಿದೆ.

         ತೊಡ್ಲಾರಹಟ್ಟಿಯ ಪಾಲಯ್ಯನವರಿಗೆ ಸೇರಿದ ಪಾರಿವಾಳ ತೃತೀಯ ಬಹುಮಾನವನ್ನು ಪಡೆದಿದೆ. ಪಾರಿವಾಳಗಳು ಒಂದು ಗಂಟೆಗೆ ಸರಾಸರಿ 150 ಕಿ.ಮೀ ವೇಗವಾಗಿ ಸಾಗಬಲ್ಲವಾಗಿದ್ದು, ಇದುವ ವಾಹನಗಳ ವೇಗಕ್ಕಿಂತ ಹೆಚ್ಚು ಎಂದು ಅವರು ತಿಳಿಸಿದರು. ಪ್ರಥಮ, ದ್ವಿತೀಯ ಬಹುಮಾನವಾಗಿ 15 ಗ್ರಾಂ ತೂಗದ ಉಂಗುರ, ತೃತೀಯ ಬಹುಮಾನವಾಗಿ 5 ಗ್ರಾಂ ತೂಕದ ಉಂಗುರ ನೀಡಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ಯಾತಯ್ಯ, ಕೊಂಡಯ್ಯ, ವೀರೇಶ್, ಪ್ರಕಾಶ್, ಎಸ್.ಕೆ.ಸೂರಯ್ಯ ಮುಂತಾದವರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರೇಸಿಂಗ್ ಪಿಜನ್ ಸೊಸೈಟಿ ಕಾರ್ಯದರ್ಶಿ ಶಿವರಾಜ್‍ಕುಮಾರ್, ಬಳ್ಲಾರಿ ಕ್ಲಬ್‍ನ ನಾರಾಯಣ, ಮಲ್ಲಿಕಾರ್ಜುನ, ಕಲ್ಯಾಣ ದುರ್ಗ ಕ್ಲಬ್‍ನ ಯರ್ರಿಸ್ವಾಮಿ ಬಲರಾಂ, ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link