ರಸ್ತೆ ಬದಿ ಮರ ಉಳಿಸಿ, ಫುಟ್‍ಪಾತ್‍ನಲ್ಲಿ ಗಿಡ ನೆಡಿ : ಮಹಾಂತೇಶ್ ಬೀಳಗಿ

ದಾವಣಗೆರೆ

      ಬೆಂಗಳೂರು ಮಾದರಿಯಲ್ಲಿ ರಸ್ತೆ ಬದಿಯ ಮರ ಉಳಿಸಿ, ಫುಟ್‍ಪಾತ್‍ನಲ್ಲಿ ಗಿಡ ನೆಡಲು ಅವಕಾಶ ಕಲ್ಪಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ನಡೆದ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆಯ ಗಿರಿಶ್ ದೇವರಮನಿ ಅಹವಾಲು ಸಲ್ಲಿ, ನಗರದಲ್ಲಿ ರಸ್ತೆಗಳು ಹಾಗೂ ಫುಟ್‍ಪಾತ್‍ಗಳನ್ನು ನಿರ್ಮಿಸುತ್ತಿದ್ದು, ಗಿಡಗಳನ್ನು ಹಾಕಲು ಯಾವುದೇ ಸ್ಥಳವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿದರು.

     ನಗರದಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅವರೆಲ್ಲರನ್ನೂ ಹಿಡಿದು ನಿರಾಶ್ರಿತರ ಕೇಂದ್ರಗಳಿಗೆ ಕರೆದೊಯ್ದು ಪುನರ್ವಸತಿ ಕಲ್ಪಿಸಬೇಕೆಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರದಲ್ಲಿ ಬೆಂಗಳೂರು ಮಾದರಿಯಲ್ಲಿ ರಸ್ತೆಗಳ ಪಕ್ಕದಲ್ಲಿರುವ ಮರಗಳನ್ನು ಆದಷ್ಟು ಉಳಿಸಿ ಹಾಗೂ ಫುಟ್‍ಪಾತ್‍ನಲ್ಲಿ ಗಿಡಗಳನ್ನು ನೆಡಲು ಅವಕಾಶ ಕಲ್ಪಿಸಿ ರಸ್ತೆ ನಿರ್ಮಾಣ ಮಾಡಬೇಕು. ನಗರದಲ್ಲಿ ಭಿಕ್ಷಾಟನೆ ಮಾಡುವÀವರನ್ನು ಕಾರ್ಯಾಚರಣೆ ನಡೆಸಿ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಸೂಚಿಸಿದರು.

    ವಕೀಲ ಪಿ.ನಿರಂಜನಮೂರ್ತಿ ಅರ್ಜಿ ಸಲ್ಲಿಸಿ, ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿರುವ ಬಸ್ ತಂಗುದಾಣಗಳನ್ನು ಹೊಸದಾಗಿ ನಿರ್ಮಿಸುತ್ತಿದ್ದು, ಸುಸ್ಥಿತಿಯಲ್ಲಿರುವ ಬಸ್ ಶೆಲ್ಟರ್‍ಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುತ್ತಿದ್ದಾರೆ. ಇದರ ಬದಲು ದುಸ್ಥಿತಿಯಲ್ಲಿರುವುಗಳನ್ನು ಗುರುತಿಸಿ ಹೊಸದಾಗಿ ನಿರ್ಮಿಸಬೇಕೆಂದು ಮನವಿ ಮಾಡಿದರು.

     ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಮಹಾಂತೇಶ್ ಬೀಳಗಿ, ಸುಸ್ಥಿತಿಯಲ್ಲಿರುವ ಬಸ್ ತಂಗುದಾಣಗಳನ್ನು ಕೆಡವದಂತೆ ಹಾಗೂ ದುರಸ್ಥಿ ಇರುವಲ್ಲಿ ಮಾತ್ರ ಹೊಸದಾಗಿ ನಿರ್ಮಿಸುವಂತೆ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ತಿಳಿಸಿದರು.ದಾವಣಗೆರೆಯ ಶಂಕರ್ ವಿಹಾರ ನಗರದಲ್ಲಿ ಪಾಲಿಕೆಯಿಂದ ಕಲುಷಿತ ನೀರು ಪೂರೈಸಲಾಗುತ್ತಿದ್ದು, ಶುದ್ಧ ನೀರು ಪೂರೈಸಲು ಹಾಗೂ ನಗರದಲ್ಲಿ ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದರು.

     ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಬರುವ ಸೋಮವಾರದ ಒಳಗಾಗಿ ಈ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚನೆ ನೀಡಿದರು.ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಅರ್ಜಿ ನೀಡಿ, ಪಾಲಿಕೆ ವ್ಯಾಪ್ತಿಗೆ ಬರುವ ರಾಜಕಾಲುವೆ ಕಾಮಗಾರಿ ನಡೆಸುತ್ತಿರುವ ಟೆಂಡರ್‍ದಾರರು, ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಹಾಗೂ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹಳೆ ರಾಜಕಾಲುವೆ ಸೈಜುಕಲ್ಲುಗಳನ್ನು ಮಾರಾಟ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

    ಚನ್ನಗಿರಿ ತಾಲ್ಲೂಕು ನವೀಲೆಹಾಳ್ ಗ್ರಾಮಸ್ಥರ ಪರವಾಗಿ ಟಿ.ಬಿ ಹರೀಶ್ ಅರ್ಜಿ ಸಲ್ಲಿಸಿ, ಬಸವಾಪಟ್ಟಣ ಹೋಬಳಿಯ ಮೀಯಾಪುರದಿಂದ ನಲ್ಕುದುರೆ, ನವೀಲೆಹಾಳ್ ಹಾಗೂ ಸೋಮ್ಲಾಪುರ ಗ್ರಾಮದವರೆಗಿನ ಐಟಿ ರಸ್ತೆ ಮಧ್ಯಭಾಗದಲ್ಲಿರುವ ನವೀಲೆಹಾಳ್ ಕರೇಕಟ್ಟೆ ರಸ್ತೆಯೂ ಕಳೆದ 25 ವರ್ಷಗಳಿಂದ ಅಭಿವೃದ್ಧಿಯಾಗದೆ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣ ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು.

     ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿ ಕ್ರಮ ಕೈಗೊಂಡು ರಸ್ತೆ ದುರಸ್ಥಿ ಕಾರ್ಯ ನಡೆಸುವಂತೆ ಜಿ.ಪಂ ಕಾರ್ಯ ನಿರ್ವಹಕಾಧಿಕಾರಿಗಳಿಗೆ ಸೂಚಿಸಿದರು.ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ಗ್ರಾಮದ ಮರಿಸ್ವಾಮಿ ಎಸ್.ಟಿ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ಡಿಪೊ ಸ್ಥಾಪಿಸುವಂತೆ ಮಾನವಿ ಮಾಡಿದರು.

    ಜಿಲ್ಲಾಧಿಕಾರಿಗಳು ಮಾತನಾಡಿ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೊ ಸ್ಥಾಪಿಸಲು ಚನ್ನಗಿರಿ ಪಟ್ಟಣದಲ್ಲಿ ಚಿಕ್ಕೋಲಿ ಕೆರೆ ಗ್ರಾಮದ ಸರ್ವೆ ನಂ. 103 ರಲ್ಲಿ ಸುಮಾರು 4 ಎಕರೆ 34 ಗುಂಟೆ ಜಮೀನನ್ನು ಮಾಡಲು ಅನುಮತಿ ನೀಡಿದ್ದು, ಅತಿ ಶೀಘ್ರವಾಗಿ ಕಾರ್ಯ ಪ್ರಾರಂಭವಾಗಲಿದೆ ಎಂದರು.

    ಚನ್ನಗಿರಿ ತಾಲ್ಲೂಕು ಹೊಸೂರು ಗ್ರಾಮದ ಹೈದರಾಲಿ ಮಾತನಾಡಿ, ದಾವಣಗೆರೆಯಿಂದ ಸಂಜೆ 5.50 ಕ್ಕೆ ತುರ್ತಾಗಿ ಸರ್ಕಾರಿ ಬಸ್ ಸೇವೆಯನ್ನು ದೊಡ್ಡಘಟ್ಟ ಗ್ರಾಮಕ್ಕೆ ಕಲ್ಪಿಸಬೇಕು. ಇದರಿಂದ 2000 ವಿದ್ಯಾರ್ಥಿಗಳು, 800 ಜನ ಅಂಗವಿಕಲರು, 600 ಜನ ಹಿರಿಯ ನಾಗರಿಕರಿಗೆ, 300 ಅಧಿಕಾರಿಗಳು ಬಸ್ ಪಾಸ್ ಪಡೆದಿದ್ದು, ಅವರಿಗೆಲ್ಲಾ ಅನುಕೂಲವಾಗಲಿದೆ ಎಂದರು.

      ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಅವಕಾಶವಿದ್ದಲ್ಲಿ ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಕೆ.ಎಸ್.ಆರ್.ಟಿ.ಸಿ ಡಿಸಿ ಮಾತನಾಡಿ, ಸರ್ಕಾರಕ್ಕೆ 99 ಹೆಚ್ಚುವರಿ ಬಸ್‍ಗಳನ್ನು ಕಲ್ಪಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

    ಸಭೆಯಲ್ಲಿ ಸಂಧ್ಯಾಸುರಕ್ಷಾ ಯೋಜನೆಗೆ ಸಂಬಂಧಿಸಿದ ಅರ್ಜಿಗಳು, ಖಾತೆ ವರ್ಗಾವಣೆ, ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು, ನಗರದಲ್ಲಿನ ಬಡಾವಣೆಗಳಲ್ಲಿ ಬೀದಿ ದೀಪ ಹಾಗೂ ರಸ್ತೆ ದುರಸ್ಥಿ ಕುರಿತು, ಸಾಲ ಸೌಲಭ್ಯಗಳ ಕುರಿತು ಹಾಗೂ ಅಂಗವಿಕಲರ ಯುನಿಕ್ ಡಿಸಿಬಲಿಟಿ ಕಾರ್ಡ್ ಸೆಂಟರ್‍ಗಳನ್ನು ತಾಲ್ಲೂಕುಗಳಲ್ಲಿ ಪ್ರಾರಂಭಿಸುವುದು ಸೇರಿದಂತೆ ಸಾರ್ವಜನಿಕರಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಯಿತು.

     ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಪದ್ಮ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link