ಪ್ರತಿಯೊಬ್ಬರ ಮನೆ ಮುಂದೆ ಒಂದು ಸಸಿ ನೆಡಿ : ಶುಭಾ ಕಲ್ಯಾಣ್

ತುಮಕೂರು
       ಪ್ರತಿಯೊಬ್ಬರ ಮನೆಯ ಮುಂದೆ ತಪ್ಪದೇ ಒಂದೊಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸಿ  ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
      ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಬಿಜಿಎಸ್ ವೃತ್ತದಲ್ಲಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿಂದು ಶೇ.24ರಷ್ಟು ಮಾತ್ರ ಅರಣ್ಯ ಪ್ರದೇಶ ಹೊಂದಿದ್ದು, ಶೇ.10 ರಷ್ಟು ಅರಣ್ಯ ಪ್ರದೇಶ ಕುಂಠಿತವಾಗಿದೆ. ಪರಿಸರದಲ್ಲಿ ನೈಸರ್ಗಿಕವಾಗಿ ದೊರೆಯುವ ಆಮ್ಲಜನಕ, ನೀರನ್ನು ನಾವಿಂದು ಹಣ ಕೊಟ್ಟು ಬಳಸುವ ಪರಿಸ್ಥಿತಿ ಬಂದಿದೆ ಎಂದರು. 
        ದಟ್ಟ ಮರಗಳಿಂದ ಕೂಡಿದ ಅರಣ್ಯ ಪ್ರದೇಶಗಳಿದ್ದರೆ, ಆ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆಯಾದರೆ ಬತ್ತಿ ಹೋಗಿರುವ ನೀರಿನ ಮೂಲಗಳು ಪುನಶ್ಚೇತನಗೊಂಡು   ಅಂತರ್ಜಲ ಮಟ್ಟ ಹೆಚ್ಚುತ್ತದೆ.   ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅರಣ್ಯ ಬೆಳೆಸಲು ನಾವೆಲ್ಲ ಕಟಿಬದ್ಧರಾಗಬೇಕು.  ಉತ್ತಮ ಪರಿಸರ ನಿರ್ಮಿಸುವ  ಬಗ್ಗೆ ಶಾಲಾ ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. 
        ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಮಾತನಾಡಿ ವಿಶ್ವದಾದ್ಯಂತ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸಲಾಗುತ್ತಿದೆ. ಕಾಂಕ್ರೀಟ್ ನಾಡಿಗೆ ಜನರು  ಹೆಚ್ಚು ಆಕರ್ಷಿತರಾಗುತ್ತಿರುವ  ಪರಿಣಾಮ ಅರಣ್ಯ ಪ್ರದೇಶಗಳ ಪ್ರಮಾಣ ಕಡಿಮೆಯಾಗುತ್ತಿದೆ.  ಮುಂದಿನ ಪೀಳಿಗೆಯವರಿಗೂ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡಬೇಕು  ಎಂದರು. 
       ಅಲ್ಲದೇ ರಾಜ್ಯ ಸರ್ಕಾರದಿಂದ ಅರಣ್ಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಗಳಡಿ ರೈತರು ಬೆಳೆಸುವ ಪ್ರತಿ ಸಸಿಗಳಿಗೆ 100 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.  ಅರಣ್ಯ ಪ್ರದೇಶದ ಸುತ್ತಮುತ್ತ ಇರುವ  ಜನರಿಗೆ ಅರಣ್ಯ ಸಂರಕ್ಷಣೆಯ ಬಗ್ಗೆ ಬೀದಿನಾಟಕ, ಕರಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
      ಬಿಜಿಎಸ್ ವೃತ್ತದಿಂದ ಶಿರಾನಿ ರಸ್ತೆ, ಎಂ.ಜಿ ರಸ್ತೆ ಮೂಲಕ ಬಾಲಭವನ ತಲುಪಿದ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಂದ್ರ, ಸತ್ಯನಾರಾಯಣ್, ನಾಗರಾಜು, ಚಂದ್ರಪ್ಪ, ವಲಯ ಅರಣ್ಯಾಧಿಕಾರಿ ಮಹೇಶ್ ವಿ ಮಾಲಗತ್ತಿ, ನಿರ್ಮಿತಿ ಕೇಂದ್ರದ ರಾಜಶೇಖರ್, ತುಮಕೂರು ವಿಭಾಗದ ಎಲ್ಲಾ ವಲಯದ ಅರಣ್ಯ(ಪ್ರಾದೇಶಿಕ ಮತ್ತು ಸಾಮಾಜಿಕ)  ಸಿಬ್ಬಂದಿಗಳು ಹಾಜರಿದ್ದರು.  
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link