ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸಿಕೊಳ್ಳಿ: ಎಡಿಸಿ

ದಾವಣಗೆರೆ :

     ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಕರೆ ನೀಡಿದರು.

     ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಮತದಾರರ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಪವಿತ್ರ ಹಕ್ಕಾಗಿದೆ. ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಅತ್ಯವಶ್ಯವಾಗಿದೆ. ಎಷ್ಟೋ ಬಾರಿ ಉತ್ಸಾಹದಿಂದ ಮತಗಟ್ಟೆಗೆ ಮತ ಚಲಾಯಿಸಲು ಹೋದಾಗ ಮತದಾರರ ಪಟ್ಟಿಯಲ್ಲಿ ಹೆಸರೇ ಮಾಯವಾಗಿರುತ್ತದೆ.

      ಆಗ ನಿರಾಶೆಯಿಂದ ಮನೆಗೆ ವಾಪಾಸಾಗಬೇಕಾಗುತ್ತದೆ. ಹೀಗಾಗಿ ಇಂತಹ ಗೊಂದಲಗಳಿಗೆ ಅವಕಾಶ ಮಾಡಿ ಕೊಡದಂತೆ ಮೊದಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಯಸ್ಸು, ಭಾವಚಿತ್ರ, ಸಮರ್ಪಕವಾಗಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

      ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು ಪ್ರತಿಯೊಬ್ಬ ಮತದಾರನ ವೈಯಕ್ತಿಕ ಜವಬ್ದಾರಿಯಾಗಿದೆ. ಹೀಗಾಗಿ ಪ್ರತಿ ಗ್ರಾಮ ಪಂಂಚಾಯಿತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ಅಟಲ್‍ಜೀ ಜನಸ್ನೇಹಿ ಕೆಂದ್ರಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ದಾವಣಗೆರೆ ಒನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ, ‘ಸಿಟಿಜನ್ ಆ್ಯಪ್’ ಮೂಲಕ ಮೊಬೈಲ್‍ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

      ಇಂದು ದಾವಣಗೆರೆ ನಗರದಲ್ಲಿ ಗಣ್ಯರು, ನ್ಯಾಯಾಧಿಶರು, ಅಧಿಕಾರಿಗಳು, ವಿಕಲಚೇತನರ ಮನೆಗಳಿಗೆ ತೆರಳಿ ಮರದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಪರಿಶೀಲಿಸಲಿದ್ದಾರೆ. ಇನ್ನುಳಿದಂತೆ ಉಳಿದಂತೆ ಇತರೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಬಿಎಲ್‍ಓಗಳು ಇಂದಿನಿಂದಲೇ ಮನೆ, ಮನೆಗೆ ತೆರಳಿ ಮತದಾರರ ಪಟ್ಟಿಯ ಲೋಪಗಳನ್ನು ಸರಿಪಡಿಸಲಿದ್ದಾರೆ ಎಂದು ಅವರು ವಿವರಿಸಿದರು.

      ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶÀವಾಗಿರುವ ಭಾರತದಲ್ಲಿ ಚುನಾವಣೆ ಎಂಬುದು ಒಂದು ಹಬ್ಬವಿದ್ದಂತೆ ಸುಭದ್ರ ಸರ್ಕಾರಕ್ಕಾಗಿ ತಮ್ಮ ಹಕ್ಕನ್ನು ಚಲಾಯಿಸುವ ಒಂದು ಸಂಭ್ರಮದ ಹಬ್ಬವಾಗಿದೆ. ಇದು ಒಂದು ರೀತಿ ಚುನಾವಣಾ ಆಯೋಗವೇ ಮತದಾರರ ಬಳಿ ಹೋಗುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

      ಮತದಾರರ ಮನೆ, ಮನೆಗಳಿಗೆ ತೆರಳಿ ಅಧಿಕಾರಿಗಳು ಹೊಸ ಮತದಾರರ ಹೆಸರುಗಳ ಸೇರ್ಪಡೆ ಮಾಡಿಕೊಳ್ಳುವುದರ ಜೊತೆಗೆ ಪತಿ, ಪತ್ನಿ ಹೆಸರುಗಳು ಬೇರೆ ಬೇರೆ ಕಡೆಗಳಲ್ಲಿ ಇರುವುದು, ವಾಸಸ್ಥಳ ಬದಲಾವಣೆ, ವಲಸೆ ಹೋಗಿರುವ ಪ್ರಕರಣಗಳು, ಮರಣಹೊಂದಿದವರ ಹೆಸರುಗಳು ಮತದಾರರ ಪಟ್ಟಿಯಲ್ಲಿರುವುದನ್ನು ತೆಗೆದು ಹಾಕುವುದು ಮತ್ತಿತರೆ ಕಾರ್ಯಗಳನ್ನು ಮಾಡಲಿದ್ದಾರೆ. ಬಿಎಲ್‍ಓಗಳು ತಮ್ಮ ಮನೆಯ ಬಳಿ ಬಂದಾಗ ಅವರಿಗೆ ಸರಿಯಾದ ಮಾಹಿತಿ ನೀಡಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

       ಒಂದು ವೇಳೆ ಅರ್ಹ ಮತದಾರರಲ್ಲದವರ ಹೆಸರುಗಳು ಪಟ್ಟಿಯಲ್ಲಿದ್ದರೆ, ಅವರಿಗೆ ನೋಟಿಸ್ ನೀಡಲಾಗುವುದು. ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ನ್ಯೂನ್ಯತೆಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಹಾಗೂ ಮತದಾರರ ನೋಂದಣಿ ಕಚೇರಿಯಲ್ಲಿರುವ ಹೆಲ್ಪ್‍ಡೆಸ್ಕ್‍ಗಳಲ್ಲಿ ಮಾಹಿತಿ ಪಡೆದುಕೊಂಡು ಮತದಾರರ ಪಟ್ಟಿಯಲ್ಲಿರುವ ತಮ್ಮ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ ಕೊಳ್ಳಬಹುದು ಎಂದರು.

        ಕಾರ್ಯಕ್ರಮದಲ್ಲಿ ಹರಿಹರ ಕೊಟ್ಟೂರು ರೈಲ್ವೆ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್, ಮಹಾನಗರ ಪಾಲಿಕೆ ಉಪ ಆಯಕ್ತ ರವೀಂದ್ರ ಮಲ್ಲಾಪುರ, ಜಗಳೂರು ತಹಶೀಲ್ದಾರ್ ತಿಮ್ಮಣ್ಣ, ಪಾಲಿಕೆ ಸಹಾಯಕ ಮತದಾನ ಅಧಿಕಾರಿ ನಾಗರಾಜ್, ಗದುಗೇಶ್, ಚುನಾವಣಾ ತಹಶೀಲ್ದಾರ್ ಪ್ರಸಾದ್, ಶ್ರೀಕುಮಾರ್, ಲಕ್ಷ್ಮೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link