ರೈತರ ಅನುಕೂಲಕ್ಕಾಗಿ ಕೇಂದ್ರದೊಂದಿಗೆ ಚರ್ಚಿಸಿ: ಸಿದ್ದರಾಮಯ್ಯ

ಬೆಂಗಳೂರು

     ಕೊರೋನಾ ಲಾಕ್‍ಡೌನ್‍ನಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ಪರದಾಡುತ್ತಿದ್ದಾರೆ. ಆದ್ದರಿಂದ ತಾವು ಕೇಂದ್ರ ಸರ್ಕಾರದೊಡನೆ ಮಾತನಾಡಿ ಹಣ್ಣು, ತರಕಾರಿ, ಹೂವುಗಳ ಮುಕ್ತ ಸಾಗಣೆಯು ರಾಜ್ಯ ರಾಜ್ಯಗಳ ನಡುವೆ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

     ರಾಜ್ಯದಲ್ಲಿ ಕೊರೋನಾ ವೈರಸ್ ನೆಪದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮುಂತಾದ ವ್ಯವಸಾಯ ಸಂಬಂಧಿ ಕ್ಷೇತ್ರಗಳಲ್ಲಿ ಭೀಕರ ಸಮಸ್ಯೆಗಳು ಉದ್ಭವಿಸಿವೆ. ಪ್ರವಾಹ ಮತ್ತು ಬರಗಳ ಕ್ರೂರ ಇಕ್ಕಳಕ್ಕೆ ಸಿಲುಕಿ ನಲುಗಿ ಹೋಗಿರುವ ನಮ್ಮ ರೈತರು ಕಷ್ಟ ಪಟ್ಟು ಬೆಳೆದಿರುವ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ಹೊಲದಲ್ಲಿಯೇ ಹೂತು ಹಾಕುತ್ತಿರುವ, ಸುಟ್ಟು ಹಾಕುತ್ತಿರುವ, ತಿಪ್ಪೆಗೆ ಚೆಲ್ಲುತ್ತಿರುವ ಅಪಾರ ಸಂಖ್ಯೆಯ ಪ್ರಕರಣಗಳು ಗಮನಕ್ಕೆ ಬರುತ್ತಿವೆ. ಇದರಲ್ಲಿ ಹೂವು, ತರಕಾರಿ, ಹಣ್ಣುಗಳನ್ನು ಬೆಳೆದ ರೈತರ ಕಷ್ಟ ಹೇಳ ತೀರದಾಗಿದೆ. ಕೋಲಾರದ ರೈತರೊಬ್ಬರು ದೂರವಾಣಿ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎದುರಾಗಿರುವ ಕಷ್ಟವನ್ನು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

      ಇದೇ ಸಂದರ್ಭದಲ್ಲಿ ನಗರ, ಪಟ್ಟಣ ಪ್ರದೇಶಗಳ ಜನರು ಹಣ್ಣು ತರಕಾರಿಗಳು ಸಮರ್ಪಕವಾಗಿ ಸಿಗದೆ ಪರದಾಡುತ್ತಿದ್ದಾರೆ. ಸಮರ್ಪಕ ಪೂರೈಕೆ ಇಲ್ಲದ ಕಾರಣಕ್ಕಾಗಿಯೇ ಸಂತೆ ಮತ್ತು ಎಪಿಎಂಸಿ ಮಳಿಗೆಗಳಲ್ಲಿ ಜನ ಗುಂಪು ಗೂಡುತ್ತಿದ್ದಾರೆ. ಬೆಳೆದ ರೈತ ಮತ್ತು ಗ್ರಾಹಕ ಇಬ್ಬರಿಗೂ ಏಕಕಾಲದಲ್ಲಿ ಸಂಕಷ್ಟ ಬಂದಿರುವುದರಿಂದ ಅರಾಜಕ ವಾತಾವರಣ ಉಂಟಾಗಿದೆ. ತಾವು ಬೆಳೆದ ಬೆಳೆಗಳನ್ನು ಕಷ್ಟ ಪಟ್ಟು ಮಾರುಕಟ್ಟೆಗೆ ಸಾಗಿಸ ಹೋದರೆ ಪೆÇಲೀಸರು, ಆರ್‍ಟಿಒಗಳು ಲಂಚ ಕೊಡದೆ ವಾಹನಗಳನ್ನು ಬಿಡುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಇದನ್ನೆಲ್ಲಾ ನೋಡಿದರೆ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಜನಸಾಮಾನ್ಯರಲ್ಲಿ ಉಂಟಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದ್ದಾರೆ.

       ಈ ನಡುವೆ ಈ ತಿಂಗಳಿನಿಂದ ರಾಜ್ಯದಲ್ಲಿ ಅಪಾರ ಪ್ರಮಾಣದ ಮಾವು ಮಾರುಕಟ್ಟೆಗೆ ಬರುತ್ತದೆ. ವಿಮಾನ, ರೈಲುಗಳಿಲ್ಲದೆ ಬೆಳೆದ ಫಸಲನ್ನು ಹೊರ ರಾಜ್ಯಗಳಿಗೆ ವಿದೇಶಗಳಿಗೆ ಸಾಗಿಸಲಾಗುವುದಿಲ್ಲ. ಇದರಿಂದ ಬೆಲೆ ಕುಸಿಯಬಹುದು. ಹಾಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಮ್ಮ ಆಂತರಿಕ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ದೇಶವೇ ಒಂದು ಉಪಖಂಡವಾದ್ದರಿಂದ ಒಂದು ರಾಜ್ಯದ ರೈತರು ಬೆಳೆದ ಬೆಳೆಗೆ ಮತ್ತೊಂದು ರಾಜ್ಯ ಮಾರುಕಟ್ಟೆಯಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೇಂದ್ರ ಸರ್ಕಾರದೊಡನೆ ಮಾತನಾಡಿ ಹಣ್ಣು, ತರಕಾರಿ, ಹೂವುಗಳ ಮುಕ್ತ ಸಾಗಣೆಯು ರಾಜ್ಯ ರಾಜ್ಯಗಳ ನಡುವೆ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು.

        ಇದರ ಜೊತೆಗೆ ಮಲೆನಾಡು, ಅರೆ ಮಲೆನಾಡು , ಕೆಲವು ಬಯಲು ಸೀಮೆಯಲ್ಲೂ ಪೂರ್ವ ಮುಂಗಾರಿನಲ್ಲೇ ಬೆಳೆಗಳನ್ನು ಬಿತ್ತುತ್ತಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಇನ್ನೂ ಸಮರ್ಪಕವಾಗಿ ಮಾಡಿಕೊಂಡಿಲ್ಲ. ಅನೇಕ ಕಡೆಗಳಲ್ಲಿ ಬಿತ್ತನೆಗೆ ಅಗತ್ಯವಾದ ಬೀಝ, ಗೊಬ್ಬರ ಸಿಗುತ್ತಿಲ್ಲ. ಇದನ್ನು ಅರಿತುಕೊಂಡು ರೈತರ ಮತ್ತು ಗ್ರಾಹಕರ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link