ತುಮಕೂರು

ತುಮಕೂರು ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಲ್ಲಿ ಪೈಪ್ಗಳು ಹೊಡೆದಿರುವುದು ನೋಡಿದ್ದೇವೆ. ಕೆಲ ಭಾಗಗಳಲ್ಲಿ ನೆಲದಲ್ಲಿ ಹಾಕಲಾದ ಕೇಬಲ್ಗಳು ಹಾಳಾಗಿರುವುದು ನೋಡಿದ್ದೇವೆ. ಇದೀಗ ರಸ್ತೆ ಕಾಮಗಾರಿಗೆ ಪೊಲೀಸ್ ಚೌಕಿಯನ್ನೆ ಬಲಿ ಮಾಡಲಾಗಿದೆ.
ಪೊಲೀಸ್ ಇಲಾಖೆ ಹಾಗೂ ನಿರ್ಮಿತಿ ಕೇಂದ್ರ ಸಹಯೋಗದಲ್ಲಿ ದಿವ್ಯಾಗೋಪಿನಾಥ್ರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾಗಿದ್ದಾಗ ಟ್ರಾಫಿಕ್ ಪೊಲೀಸರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಅವುಗಳು ಉದ್ಘಾಟನೆಗೂ ಮುನ್ನವೇ ಹಾಳಾಗಿದ್ದವು. ಈ ಚೌಕಿಗಳನ್ನು ಯಾರೂ ಬಳಕೆ ಮಾಡುತ್ತಿರಲಿಲ್ಲ. ಕೇವಲ ನೋಡಲಿಕ್ಕೆ ಮಾತ್ರ ನಿರ್ಮಾಣ ಮಾಡಿದಂತಾಗಿದ್ದು, ಅವು ಪಾಳುಬಿದ್ದಿದ್ದವು.
ಆ ನಂತರದಲ್ಲಿ ಅವುಗಳನ್ನು ದುರಸ್ಥಿ ಮಾಡದೇ ಇದ್ದರೂ ಸಹ ಹಾಲಿ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ನಗರದ ಮುಖ್ಯ ರಸ್ತೆಗಳಲ್ಲಿರುವ ಕೆಲವು ಪೊಲೀಸ್ ಚೌಕಿಗಳನ್ನು ಬಳಕೆ ಮಾಡಲಾಗುತ್ತಿತ್ತು. ಅದರಲ್ಲಿ ಭದ್ರಮ್ಮ ವೃತ್ತದಲ್ಲಿರುವ ಚೌಕಿಯೂ ಒಂದಾಗಿತ್ತು. ಸ್ಮಾರ್ಟ್ ಸಿಟಿ ಯಿಂದ ಮಾಡಲಾಗುತ್ತಿರುವ ರಸ್ತೆ ಅಭಿವೃದ್ಧಿಯಲ್ಲಿ ಭದ್ರಮ್ಮ ವೃತ್ತದಲ್ಲಿ ನಿರ್ಮಾಣ ಮಾಡಲಾಗಿದ್ದ ಚೌಕಿಯನ್ನು ನೆಲಸಮ ಮಾಡಲಾಗಿದೆ. ಕೇವಲ ಅದಕ್ಕೆ ಅಳವಡಿಸಿದ್ದ ಗಾಜಿನ ಗ್ಲಾಸ್ಗಳನ್ನು ಮಾತ್ರ ಪಕ್ಕಕ್ಕೆ ತೆಗೆದಿಡಲಾಗಿದ್ದು, ಉಳಿದಂತೆ ಕಟ್ಟಡದ ಯಾವ ಭಾಗಗಳು ಕಾಣುತ್ತಿಲ್ಲ.
ಸುಮಾರು 1 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ಚೌಕಿಯು ಸ್ಮಾರ್ಟ್ ಸಿಟಿಯ ಕಾಮಗಾರಿಗೆ ಬಲಿಯಾಗಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ನಂತರ ಮತ್ತೊಂದು ಪೊಲೀಸ್ ಚೌಕಿ ನಿರ್ಮಾಣ ಮಾಡುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
