ತುಮಕೂರು
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಮಾಡಿ, ಜನ ಮನೆಯಲ್ಲೇ ಉಳಿಯುವಂತೆ ಮಾಡಿದೆ. ಅದರ ಜನ ಒಂದಲ್ಲೊಂದು ನೆಪ ಮಾಡಿಕೊಂಡು ರಸ್ತೆಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಅಂತಹವವರನ್ನು ನಿಯಂತ್ರಿಸಲು ಪೊಲೀಸರು ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅನಗತ್ಯವಾಗಿ ರಸ್ತೆಗೆ ಬಂದವರನ್ನು ಬೈದು ಓಡಿಸಿದರು, ಮೇಲೆ ಲಾಠಿ ಬೀಸಿ ಬೆದರಿಸಿ ಮನೆ ಕಡೆ ಓಡಿಸುವ ಪ್ರಯತ್ನ ಮಾಡಿದರು. ಆದರೂ ಜನ ಮಾತು ಕೇಳದಿದ್ದಾಗ ಪೊಲೀಸರು, ಈಗ ಲಾಠಿ ಕೆಳಗಿಟ್ಟು, ರಸ್ತೆ ಸುತ್ತುವವರ ವಾಹನದ ಕೀಲಿಗೆ ಕೈ ಹಾಕಿದ್ದಾರೆ.
ವಾಹನವಿದ್ದರೆ ತಾನೆ ಜನ ರಸ್ತೆಗೆ ಬರುವುದು ಎಂದು ಪೊಲೀಸರು, ವಾಹನಗಳನ್ನೇ ಜಪ್ತಿ ಮಾಡಿ ಪರಿಸ್ಥಿತಿ ನಿಯಂತ್ರಿಸುವ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರು ಇಂತಹ ನೂರಾರು ವಾಹನಗಳನ್ನು ಈಗಾಗಲೇ ಜಪ್ತಿ ಮಾಡಿ ತಮ್ಮ ವಶಕ್ಕೆ ಪಡೆದಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ವಾಹನಗಳು ಪೊಲೀಸರ ವಶದಲ್ಲಿರುತ್ತವೆ. ಇಂತಹ ಕಠಿಣ ಕ್ರಮದಿಂದ ಒಂದಷ್ಟು ಜನರ ನಿಯಂತ್ರಣ ಸಾಧ್ಯವಾಗಿದೆ. ಆದರೂ ಇನ್ನೂ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಖಾಲಿ ರಸ್ತೆಗೆ ವಾಹನ ತಂದು ವೀಲಿಂಗ್ ಮಾಡಿ ಉದ್ದಟತನ ತೋರುತ್ತಿದ್ದಾರೆ. ಅಂತಹವರು ಕಣ್ಣಿಗೆ ಬಿದ್ದರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ವಾಹನ ಜಪ್ತಿ ಮಾಡುತ್ತಾರೆ.
ನಗರದ ಅನೇಕ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಮಾಡಿಕೊಂಡು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕೆಲವು ಕಡೆ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಿದೆ, ಒಂದಷ್ಟು ಕಡೆ ಪೊಲೀಸರ ಎಚ್ಚರಿಕೆಗೂ ಜನ ಜಗ್ಗುತ್ತಿಲ್ಲ ಅಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಅಗತ್ಯವಾಗಿದೆ ಎಂದು ಪೊಲೀಸರು ಅಭಿಪ್ರಾಯ ಪಡುತ್ತಾರೆ.
ವಾಹನ ಸಂಚಾರಕ್ಕೆ ಇಷ್ಟೆಲ್ಲಾ ಕಡಿವಾಣ ಹಾಕಿದರೂ ತರಕಾರಿ, ದಿನಸಿಯಂತಹ ದಿನ ಬಳಕೆ ಪದಾರ್ಥಗಳ ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಯಾವುದೂ ಅಡ್ಡಿ ಮಾಡಿಲ್ಲ. ರಸ್ತೆ ಬದಿ, ಬಡಾವಣೆಗಳಲ್ಲಿ ವಾಹನಗಳಲ್ಲಿ ತರಕಾರಿ ಮಾರುವವರಿಗೆ ತೊಂದರೆ ಮಾಡದೆ ಅವಕಾಶ ಕಲ್ಪಿಸಲಾಗಿದೆ. ಪೆಟ್ರೋಲ್, ಡೀಸೆಲ್, ಆಹಾರ ಧಾನ್ಯ ಸಾಗಿಸುವ ವಾಹನಗಳಿಗೆ ತೊಂದರೆಯಿಲ್ಲ. ಅಗತ್ಯ ಸೇವಾ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಪಾಸ್ ನೀಡಿರುವುದರಿಂದ ಅವರು ನಿರಾಳವಾಗಿ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆಹಾರ ಧಾನ್ಯ ಖರೀದಿ, ಆಸ್ಪತ್ರೆಗೆ ಹೋಗಿಬರುವವರಿಗೆ ಪೊಲೀಸರು ಅಡ್ಡಿ ಮಾಡುವುದಿಲ್ಲ. ಜೊತೆಗೆ ನಿಗಧಿತ ಪಾಸ್ ಹೊಂದಿರುವ ಆಹಾರ ವಿತರಿಸುವ ಸ್ವಯಂಸೇವಕರ ಸಂಚಾರಕ್ಕೂ ಅಡಚಣೆ ಇಲ್ಲ.
ಕೊರೊನಾ ವೈರಸ್ ಹರಡುವುದನ್ನು ತಯಡೆಯಲು ಮುಖ್ಯವಾಗಿ ಒಬ್ಬರಿಂದ ಒಬ್ಬರ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಈ ಕಾರಣಕ್ಕೆ ನಗರದ ಎಲ್ಲಾ ದಿನ ಬಳಕೆ ಪದಾರ್ಥ ಮಾರಾಟ ಮಾಡುವ ಅಂಗಡಿಗಳ ಎದುರು ಗ್ರಾಹಕರು ಅಂತರ ಕಾಪಾಡಿಕೊಳ್ಳಲು ವೃತ್ತ ಅಥವಾ ಚೌಕಾಕಾರದ ಗುರುತು ಬರೆದಿದ್ದಾರೆ. ಅನೇಕ ಕಡೆ ಅಂತರ ಕಾಪಾಡುವುದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ಉಳಿದ ಕಡೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಜನ ಗುಂಪುಗೂಡುವುದು ತಪ್ಪಿಲ್ಲ.
ಲಾಕ್ಡೌನ್ನಿಂದ ಊಟ ಸಿಗದೆ ಸಂಕಷ್ಟಕ್ಕೀಡಾದವರಿಗೆ ಹಲವಾರು ಸಂಘ ಸಂಸ್ಥೆಗಳು ಆಹಾರ ಪೂರೈಸುವ ಸೇವೆ ಮಾಡುತ್ತಿವೆ. ಬೇರೆ ಜಿಲ್ಲೆಗಳಿಗಿಂತಾ ತುಮಕೂರಿನಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಊಟ ಸರಬರಾಜಿಗೆ ಸಂಘಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿರುವುದು ಎನ್ನಲಾಗಿದೆ. ಒಂದು ಲೆಕ್ಕದಲ್ಲಿ, ನಗರದಲ್ಲಿ ಊಟದ ಅಗತ್ಯವಿರುವವರಿಗೆಲ್ಲಾ ಒಂದಲ್ಲಾ ಒಂದು ಸಂಸ್ಥೆ ಮೂಲಕ ಊಟ ಸಿಗುತ್ತದೆ ಎನ್ನಲಾಗಿದೆ. ಕೆಲವು ಸಂಸ್ಥೆಗಳು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಊಟ ಸಿದ್ಧಪಡಿಸಿ ಸರಬರಾಜು ಮಾಡುತ್ತಿವೆ. ಕೆಲವರು ವಾಹನದಲ್ಲಿ ಆಹಾರದ ಪೊಟ್ಟಣ ತುಂಬಿಕೊಂಡು ನಗರದೆಲ್ಲೆಡೆ ಸಂಚರಿಸುತ್ತಾ ಊಟದ ಅಗತ್ಯವಿರುವವರನ್ನು ಗುರುತಿಸಿ ನೀಡುತ್ತಿದ್ದಾರೆ. ನಿರಾಶ್ರಿತರ ತಾಣಗಳಿಗೆ ಹೋಗಿ ನೀರು, ಆಹಾರ ನೀಡುತ್ತಿದ್ದಾರೆ. ಲಾಕ್ಡೌನ್ ಮುಗಿಯುವ ತನಕವೂ ಆಹಾರ ಪೂರೈಸುವುದಾಗಿ ಅನೇಕ ಸಂಸ್ಥೆಗಳು ಹೇಳಿವೆ.
ಇದೇ ರೀತಿ, ಕೊರೊನಾ ವೈರಸ್ ನಿಯಂತ್ರಣಕ್ಕೆ ಬೇಕಾಗಿರುವ ಮಾಸ್ಕ್, ಸ್ಯಾನಿಟೈಸರ್ಗಳನ್ನು ಹಲವಾರು ದಾನಿಗಳು ನೀಡುತ್ತಿದ್ದಾರೆ. ಅನೇಕರು ಪ್ರಚಾರ ಬಯಸದೆ, ಹಳ್ಳಿ ಹಳ್ಳಿಗಳಲ್ಲೂ ಹಂಚುತ್ತಿದ್ದಾರೆ. ಹಲವು ಕಡೆ ಮಾಸ್ಕ್, ಸ್ಯಾನಿಟೈಸರ್ಗಳನ್ನು ಪಡೆದವರೇ ಮತ್ತೆ ಪಡೆಯುತ್ತಿದ್ದಾರೆ. ಹೀಗಾಗಿ, ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಆಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಇನ್ನಿತರ ಸೇವೆಯಲ್ಲಿರುವವರಿಗೆ ಮಾಸ್ಕ್, ಸ್ಯಾನಿಟೈಸರ್ಗಳ ಅಗತ್ಯವಿದೆ. ದಾನಿಗಳು ಸಾರ್ವಜನಿಕರಿಗೆ ಹಂಚುವ ಜೊತೆಗೆ ಜಿಲ್ಲಾಡಳಿತಕ್ಕೆ ಅಥವಾ ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ನೀಡಿದರೆ ಅವರು ಅಗತ್ಯವಿರುವವರಿಗೆ ವಿತರಿಸಲು ಸಹಾಯವಾಗುತ್ತದೆ.
ಲಾಕ್ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬಾರದಂತೆ ಎಚ್ಚರವಹಿಸಿ. ನಿತ್ಯ ಬಳಕೆ ವಸ್ತುಗಳ ಖರೀದಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಹಾಪ್ಕಾಮ್ಸ್ ಸೇರಿದಂತೆ ಖಾಸಗಿ ಮಾರಾಟಗಾರರು ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರಾಟ ವ್ಯವಸ್ಥೆ ಮಾಡುತ್ತಿದ್ದಾರೆ. ಔಷಧಿ ಅಂಗಡಿ, ಆಸ್ಪತ್ರೆ ಸೇವೆಗೆ ತೊಂದೆರೆ ಇಲ್ಲ. ಹಾಲಿನ ಸರಬರಾಜಿನಲ್ಲಿ ವ್ಯತ್ಯಾಸವಾಗಿಲ್ಲ. ಮನೆಗೆ ಸಮೀಪದ ಅಂಗಡಿಗಳಲ್ಲಿ ದಿನಸಿ ಪದಾರ್ಥಗಳನ್ನು ಖರೀದಿ ಮಾಡಿ, ಅನಗತ್ಯವಾಗಿ ಓಡಾಡಬೇಕಾದ ಪರಿಸ್ಥಿತಿಗೆ ನಿಯಂತ್ರಣ ಹಾಕಿಕೊಳ್ಳುವುದು ಉತ್ತಮ.
ಹೊರಗೆ ಹೋದಾಗ ಮಾಸ್ಕ್ ಧರಿಸುವುದು, ಇನ್ನೊಬ್ಬರಿಂದ ಅಂತರ ಕಾಪಾಡಿಕೊಳ್ಳುವುದು ಮುಂತಾದ ಕೊರೊನಾ ವಿರುದ್ಧದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಕ್ಕಳು, ವಯೋವೃದ್ಧರು ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಂಡರೆ ಕೊರೊನಾ ಅಥವಾ ಇನ್ನಾವುದೇ ವೈರಸ್ ಹರಡದಂತೆ ತಡೆಯಲು ಸಾಧ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
