ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯದ ಮತಗಳು ಅತ್ಯಧಿಕ ಸಂಖ್ಯೆಯಲ್ಲಿದ್ದು, ಕ್ಷೇತ್ರದ ಮಾದಿಗ ಸಮುದಾಯದ ಅಭ್ಯರ್ಥಿಗೆ ಮಾತ್ರ ಮತ ಚಲಾಯಿಸಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ಗಂಗಾಧರಪ್ಪ ಸಮುದಾಯ ಮುಖಂಡರಿಗೆ ಕರೆ ನೀಡಿದರು.
ಅವರು, ಸೋಮವಾರ ತಾಲ್ಲೂಕಿನ ತಳಕು ಹೋಬಳಿಯ ಮಾದಿಗ ಯುವ ಸೇನೆ ಕಾರ್ಯಕರ್ತರ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯ ಪಡಿಸಿದರೂ ನಮ್ಮ ಮನವಿಯನ್ನು ದಿಕ್ಕರಿಸಿ ಬೇರೆ ಜಿಲ್ಲೆಯ ಅಭ್ಯರ್ಥಿಯನ್ನು ನಿಲ್ಲಿಸಿ ಆಯ್ಕೆ ಮಾಡಲಾಗುತ್ತಿದೆ ಆದರೆ, ಈ ಬಾರಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಮಾದಿಗ ಸಮುದಾಯದ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜಿಲ್ಲೆಯ ಯುವ ರಾಜಕಾರಣಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಯವರನ್ನು ಈ ಕ್ಷೇತ್ರದ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಮತ ಪಡೆದು ಮತ್ತೆ ಈಕಡೆ ನೋಡದೆ ಸಮುದಾಯವನ್ನು ಕಡೆಗಣಿಸುತ್ತಾ ಬಂದಿದ್ದಾರೆ. ನಮ್ಮ ಜಿಲ್ಲೆಯವರೇಯಾದ ತಿಪ್ಪೇಸ್ವಾಮಿ ಲೋಕಸಭೆಗೆ ಸ್ಪರ್ಧಿಸಲಿದ್ದು, ಇಡೀ ಸಮುದಾಯ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಸದಸ್ಯ, ಪರಾಜಿತ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಮಾದಿಗ ಸಮುದಾಯ ಜನಸಂಖ್ಯೆ ಇದ್ದು, ನಾಲ್ಕು ಲಕ್ಷ ಮತದಾರರು ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಅಧಿಕಾರ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿ ಇದ್ದರೂ ಇಲ್ಲಿನ ಮಾದಿಗ ಸಮುದಾಯ ಮತದಾರರು ಬಯಸಿದರೂ ಸಹ ಅದಕ್ಕೆ ವಿರೋಧವಾಗಿ ಹೊರ ಜಿಲ್ಲೆಯವರನ್ನೇ ತಂದು ಇಲ್ಲಿ ಗೆಲ್ಲಿಸಲಾಗುತ್ತಿದೆ. ಅವರಿಗೆ ಜಿಲ್ಲೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ, ವಿಶೇಷವಾಗಿ ಈ ಜಿಲ್ಲೆಯ ಮಾದಿಗ ಸಮುದಾಯದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆಸಕ್ತಿ ಇಲ್ಲ, ಗೆದ್ದ ನಂತರ ಇಡೀ ಸಮುದಾಯವನ್ನೇ ದೂರವಿಟ್ಟು ಕಾರ್ಯನಿರ್ವಹಿಸಿದ್ಧಾರೆ. ಹಾಗಾಗಿ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯ ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತವಾಗಿದೆ. ನೀವೆಲ್ಲರೂ ಈ ಬಾರಿ ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಮಾಡಿದಲ್ಲಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ದಲಿತ ಸಮುದಾಯದ ಹಿರಿಯ ಮುಖಂಡ ನಾಗರಾಜ, ತಿಪ್ಪಯ್ಯ, ಚಂದ್ರಣ್ಣ, ಕುಮಾರಪ್ಪ, ಹನುಮಂತಯ್ಯ, ಶಿವಣ್ಣ, ಪಿ.ಬಸವರಾಜಪ್ಪ, ಕೃಷ್ಣಮೂರ್ತಿ, ನಾಗೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
