ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೊಳದುದ್ದ ಗುಂಡಿ : ಸರ್ವೀಸ್ ರಸ್ತೆ ಸರಿಪಡಿಸಲು ಗ್ರಾಮಸ್ಥರ ಆಗ್ರಹ

ಕುಣಿಗಲ್

     ಸಾರ್ವಜನಿಕರ ಸಂಚಾರಕ್ಕೆಂದು ನಿರ್ಮಿಸಿರುವ ಸರ್ವೀಸ್ ರಸ್ತೆ ಹಾಳಾಗಿದ್ದು ಮೊಳದುದ್ದ ಗುಂಡಿ ಬಿದ್ದಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.

      ತಾಲ್ಲೂಕಿನ ಎಡೆಯೂರು ಹೋಬಳಿಯ ಆಲಪ್ಪನಗುಡ್ಡೆ ಬಳಿಯಿಂದ ಅಮೃತೂರು ಕಡೆಗೆ ಸಂಚರಿಸುವ ಸರ್ವೀಸ್ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ನಿರ್ಮಾಣವಾಗಿ ನೀರು ತುಂಬಿಕೊಂಡು ದ್ವಿಚಕ್ರ ಸೇರಿದಂತೆ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಉತ್ತಮ ರಸ್ತೆ ನಿರ್ಮಿಸಬೇಕೆಂದು ಆ ಭಾಗದ ಸುತ್ತ ಮುತ್ತ ಗ್ರಾಮಸ್ಥರು ಸೇರಿದಂತೆ ಕುಮಾರ್, ರಾಮಣ್ಣ, ಸುರೇಶ್ ಆಗ್ರಹಿಸಿದ್ದಾರೆ.

        ಆಲಪ್ಪನಗುಡ್ಡೆಯ ಬಳಿ ರೈಲ್ವೇ ಅಳಿ ಪ್ರಾರಂಭವಾದ ನಂತರ ಮಾಮೂಲಿಯಿದ್ದ ರಸ್ತೆಯನ್ನು ಬಂದ್ ಮಾಡಿ ಒಳಸೇತುವೆ ಮುಖಾಂತರ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಆದರೆ ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ಪಕ್ಕದಲ್ಲಿ ಸುಮಾರು 20 ಅಡಿಗಳಷ್ಟು ಆಳದಲ್ಲಿ ರೈಲ್ವೇ ಹಳಿಯಿದೆ. ವಾಹನ ಸವಾರರು ಆಯತಪ್ಪಿ ಅಳಿಯ ಮೇಲೆ ಬೀಳುವ ಸಾಧ್ಯತೆಯೂ ಇದೆ.

         ಇಂತಹ ಸಮಸ್ಯೆಯಲ್ಲಿ ಹೊಳಲುಗುಂದ, ಅಮೃತೂರು, ಕಗ್ಗೆರೆ, ತಿಮ್ಮೇಗೌಡನಪಾಳ್ಯ, ಹೊಸಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಜೀವ ಕೈಯಲ್ಲಿಡಿದುಕೊಂಡು ಸಂಚರಿಸುವ ಪರಿಸ್ಥಿತಿಯಿದೆ. ಆಗಿಂದಾಗ್ಗೆ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ, ಈ ಬಗ್ಗೆ ಹಲವಾರು ಬಾರಿ ಕೆಲ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಇದುವರೆವಿಗೂ ಸರ್ವೀಸ್ ರಸ್ತೆ ದುರಸ್ಥಿ ಪಡಿಸಿಲ್ಲ. ಪ್ರತಿದಿನ ತಪೋಕ್ಷೇತ್ರ ಕಗ್ಗೆರೆ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಇಂತಹ ಹದಗೆಟ್ಟ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತ ಈ ಭಾಗದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link