ಹೊನ್ನಾಳಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಮಾತುಗಾರ, ಕೆಲಸಗಾರನಲ್ಲ. ಶ್ರಮಿಕರು, ಬಡವರು, ದೀನ-ದಲಿತರ ಬದುಕಿನ ಅರಿವು ಅವರಿಗಿಲ್ಲ. ಹಾಗಾಗಿ, ಬಡವರು ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಹೇಳಿದರು.
ತಾಲೂಕಿನ ಈಶಾನ್ಯ ದಿಕ್ಕಿನಲ್ಲಿರುವ, ಶಕ್ತಿದೇವತೆ ದುರುಗಮ್ಮ ದೇವಿಯ ಸುಕ್ಷೇತ್ರ ಮುಕ್ತೇನಹಳ್ಳಿ ಗ್ರಾಮದಲ್ಲಿ ಭಾನುವಾರ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಮರೆತು ಕೇವಲ ವಿದೇಶ ಪ್ರವಾಸ ಮಾಡುತ್ತ ಕಾಲಹರಣ ಮಾಡಿದ್ದಾರೆ. ಬಿಜೆಪಿ ಮಂದಿಗೆ ಜನಸಾಮಾನ್ಯರ ಕಷ್ಟಗಳ ಬಗ್ಗೆ ಅರಿವಿಲ್ಲ. ಅವರೆಲ್ಲರೂ ಹಣ, ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಬಿಜೆಪಿ ಶ್ರೀಮಂತರು ಹಾಗೂ ಮೇಲ್ವರ್ಗದ ಕೆಲವೇ ಜನರ ಹಿತ ಕಾಯಲು ಬದ್ಧವಾಗಿದೆ. ಜೈನರು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ನಾಡಿನ ಅಲ್ಪಸಂಖ್ಯಾತರು ಅವರಿಗೆ ಬೇಡವಾಗಿದ್ದಾರೆ.
ಇಂಥವರಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಇತರ ಮುಖಂಡರು ತಮ್ಮ ಮೇಲೆ ವಿಶ್ವಾಸ ಇಟ್ಟು ಲೋಕಸಭಾ ಅಭ್ಯರ್ಥಿಯನ್ನಾಗಿಸಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಮುಂದಿನ ದಿನಗಳಲ್ಲಿ ನಡೆಯುವ ಇತರೆ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಎಲ್ಲರೂ ಜಾತಿ ಭೇದ ಎಣಿಸದೇ ತಮ್ಮನ್ನು ಬೆಂಬಲಿಸಬೇಕು. ಸಂಸದರಾಗಿ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು. ತಾವು ಜಯಗಳಿಸಿದರೆ, ಸಮಾಜದ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವುದಾಗಿ, ಎಲ್ಲರ ಋಣ ತೀರಿಸುವುದಾಗಿ ಭರವಸೆ ನೀಡಿದರು.
“ಭಾರತ್ ಮಾತಾ ಕಿ ಜೈ”, “ವಂದೇ ಮಾತರಂ” ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಭಾಷಣ ಪ್ರಾರಂಭಿಸಿದ ಎಚ್.ಬಿ. ಮಂಜಪ್ಪ, ಈ ಘೋಷಣೆಗಳು ಬಿಜೆಪಿ ಆಸ್ತಿ ಅಲ್ಲ. ಈ ಘೋಷಣೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಕಾಂಗ್ರೆಸ್ ಪಕ್ಷ ಬಹುವಾಗಿ ಶ್ರಮಿಸಿದೆ. ಸ್ವಾತಂತ್ರ್ಯೋತ್ತರ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಆದರೆ, ಬಿಜೆಪಿ ಮಂದಿ ಈ ದೇಶದಲ್ಲಿ ತಮ್ಮಿಂದಲೇ ಎಲ್ಲಾ ಅಭಿವೃದ್ಧಿ ಆಗಿದೆ ಎನ್ನುವ ಮೂಲಕ ಜನತೆಯನ್ನು ಭ್ರಮಾಲೋಕದಲ್ಲಿ ವಿಹರಿಸುವಂತೆ ಮಾಡುತ್ತಿದ್ದಾರೆ. ಇದನ್ನು ಜನತೆ ಸೂಕ್ಷ್ಮವಾಗಿ ಗಮನಿಸಿ, ಸಕಾಲದಲ್ಲಿ ಸೂಕ್ತ ಪಾಠ ಕಲಿಸಬೇಕು ಎಂದು ವಿವರಿಸಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದನ್ನು ಆಧರಿಸಿ ಜನತೆ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಎಚ್.ಬಿ. ಮಂಜಪ್ಪ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ದೊಡ್ಡೇರಿ ಡಿ.ಜಿ. ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್ ಮುಖಂಡರು ಕ್ಷಿಪ್ರಗತಿಯಲ್ಲಿ ಎಲ್ಲೆಡೆ ತಾವೇ ಖುದ್ದಾಗಿ ಪ್ರಚಾರ ಮಾಡುವ ಮೂಲಕ ಮಂಜಪ್ಪ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಬಿ.ಜಿ. ಜಗದೀಶ್ ಮಾತನಾಡಿ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಲೋಕಸಭಾ ಅಭ್ಯರ್ಥಿ ಎಚ್.ಬಿ. ಮಂಜಪ್ಪ ನಿಜಕ್ಕೂ ಜೋಡೆತ್ತುಗಳಂತೆ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದಾರೆ. ಜನತೆ ಇವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಮುಖಂಡರಾದ ಡಾ.ಎಲ್. ಈಶ್ವರಾನಾಯ್ಕ, ಎನ್.ಜಿ. ಮರುಳಸಿದ್ಧಪ್ಪ, ಎಂ. ಸಿದ್ಧಪ್ಪ ಮತ್ತಿತರರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಕೆ.ಎಚ್. ಷಣ್ಮುಖಪ್ಪ, ತಾಪಂ ಸದಸ್ಯರಾದ ವಿಜಯಕುಮಾರ್, ಅಂಬುಜಾಕ್ಷಿ ಮರುಳಸಿದ್ಧಪ್ಪ, ಪೀರ್ಯಾನಾಯ್ಕ್, ಎಪಿಎಂಸಿ ನಿರ್ದೇಶಕರಾದ ದಿಡಗೂರು ಎ.ಜಿ. ಪ್ರಕಾಶ್, ತರಗನಹಳ್ಳಿ ಟಿ.ಜಿ. ರಮೇಶ್, ಪಪಂ ಸದಸ್ಯ ಎಚ್.ಬಿ. ಅಣ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ, ಮುಖಂಡರಾದ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ, ಕುಂದೂರು ಅನಿಲ್, ಕೆ.ಆರ್. ವಸಂತನಾಯ್ಕ್, ಕೆಂಗಲಹಳ್ಳಿ ಪ್ರಭಾಕರ್, ಕೆ.ಎಚ್. ದೂದ್ಯಾನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ತಿಮ್ಮೇನಹಳ್ಳಿ, ಕೂಲಂಬಿ, ಕುಂದೂರು, ಕುಂಬಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರೊಂದಿಗೆ ಎಚ್.ಬಿ. ಮಂಜಪ್ಪ ಮತ್ತಿತರ ಮುಖಂಡರು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿ, ಮತಯಾಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
