ಹುಳಿಯಾರು ಪ್ರವೇಶಿಸಿದ ಪ್ರಧಾನ ಸೇವಕ ರಥಯಾತ್ರೆ

ಹುಳಿಯಾರು:

       ದೇಶದ ಪ್ರಧಾನ ಮಂತ್ರಿಗಳಾಗಿ ಇಡೀ ವಿಶ್ವವೇ ಮೆಚ್ಚುವಂತಹ ಕಾರ್ಯ ಮಾಡುತ್ತಿರುವ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಗಳಾಗಬೇಕು.ಮೋದಿ ಅವರ ಐದು ವರ್ಷಗಳ ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಟೀಂಮೋದಿ ಗುಂಪಿನ ಮೂಲಕ ಪ್ರಧಾನ ಸೇವಕ ರಥಯಾತ್ರೆಯನ್ನು ಆಯೋಜಿಸಿದ್ದು ರಾಜ್ಯದ ಪ್ರತಿ ಹಳ್ಳಿಗೂ ರಥ ಸಂಚರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.

       ಟೀಮ್ ಮೋದಿ ಬಳಗದ ಪ್ರಧಾನ ಸೇವಕ ರಥಯಾತ್ರೆಯನ್ನು ಹುಳಿಯಾರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.

       ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣೆ ಬದಲಾವಣೆಗಳು ತಳಮಟ್ಟದ ಜನರ ಅನುಭವಕ್ಕೆ ಬರಲು ಕನಿಷ್ಠ ಹತ್ತು ವರ್ಷಗಳು ಅನಿವಾರ್ಯ.ಈ ನಿಟ್ಟಿನಲ್ಲಿ ಮೋದಿ ಇನ್ನಷ್ಟು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಇದೆ ಎಂದರು.ಭಾರತವನ್ನು ವಿಶ್ವಮಾನ್ಯ ಅಗ್ರ ರಾಷ್ಟ್ರವನ್ನಾಗಿ ಮಾರ್ಪಡಿಸಿ ದೇಶವಾಸಿಗಳಿಗೆ ನೂರಾರು ಯೋಜನೆಗಳ ಮೂಲಕ ಆರ್ಥಿಕ ಸಂಕಷ್ಟದಿಂದ ಮೇಲೆತ್ತಿರುವ ಪ್ರಧಾನಿ ನರೇಂದ್ರ ಮೋದಿ 2019 ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

        ವಿಶ್ವದ ಬಲಿಷ್ಠ ದೇಶಗಳು ಭಾರತದ ಸ್ನೇಹವನ್ನು ಬಯಸುವಂತೆ ಮಾಡಿರುವ ಮೋದಿಮುಂದಿನ ಅವಧಿಗೂ ಪ್ರಧಾನಿಯಾಗುವ ನಿಟ್ಟಿನಲ್ಲಿ ಅವರ ಸಾಧನೆಗಳನ್ನು ಹಳ್ಳಿಹಳ್ಳಿಗೂ ತಲುಪಿಸಲಾಗುತ್ತಿದ್ದು ರಥಯಾತ್ರೆಯ ವಾಹನದಲ್ಲಿ ಮೋದಿಯವರ ಸಾಧನೆಯನ್ನು ವಿಡಿಯೋ ಚಿತ್ರ ಸಹಿತ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

         ರಥಯಾತ್ರೆಯ ಸಮಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೋದಿ ಅಭಿಮಾನಿಗಳು ಬೈಕ್ ನಲ್ಲಿ ಮೋದಿ ಪರ ಘೋಷಣೆ ಕೂಗುತ್ತಾ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಟೀಮ್ ಮೋದಿಯ ಗಂಗಾಧರಯ್ಯ, ಉಪನ್ಯಾಸಕ ನರೇಂದ್ರಬಾಬು, ಲೇತ್ ವಿಶ್ವನಾಥ್, ಬಾಲಾಜಿ ಸಿಂಗ್, ಕೆ.ಸಿ.ಚನ್ನಬಸಪ್ಪ, ಕೈಲಾಸಮೂರ್ತಿ, ಬ್ಯಾಂಕ್ ಶ್ರೀಧರ್, ನವೀನ್, ಹಿಂದೂ ಜಾಗರಣ ವೇದಿಕೆ ಬಸವರಾಜು ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap