ದಾವಣಗೆರೆ :
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಜುಲೈ 22ರಿಂದ ಪ್ರೇಮಲೋಕ ಧಾರಾವಾಹಿ ಪ್ರಸಾರ ವಾಗಲಿದೆ ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿಪ್ರಸಾದ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಧಾರಾವಾನಿಯ ಪ್ರೊಮೊ ಬಿಡುಗಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 22ರಿಂದ ಪ್ರತಿ ರಾತ್ರಿ 8 ಗಂಟೆಗೆ ಅಮೃತ ವರ್ಷಿಣಿ ಖ್ಯಾತಿಯ ನಟ ವಿಜಯಸೂರ್ಯ ನಟಿಸಿರುವ ಪ್ರೇಮಲೋಕ ಧಾರವಾಹಿ ಪ್ರಸಾರವಾಗಲಿದ್ದು, ವೀಕ್ಷಕರು ಅಮೃತ ವರ್ಷಿಣಿ ಧಾರವಾಹಿಯನ್ನು ಬೆಂಬಲಿಸಿದಂತೆ, ಈ ಧಾರವಾಹಿಗೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ದಾವಣಗೆರೆಯು ಅದೃಷ್ಟದ ಊರು ಎಂಬ ಕಾರಣಕ್ಕೆ ಇಲ್ಲೇ ಧಾರಾವಾಹಿಯ ಅಫಿಷಿಯಲ್ ಲಾಂಚ್ ಇಟ್ಟುಕೊಂಡಿದ್ದೇವೆ. ಕಿರುತೆರೆಯ ಇತಿಹಾಸದಲ್ಲೇ ಮೊದಲ ಬಾರಿಗೆ 35 ಅಡಿ ಕಟೌಟ್ ಅನಾವರಣಗೊಳಿಸಿದ್ದೇವೆ. 80 ಎಪಿಸೋಡ್ಗಳ ಕಥೆ ಕೇಳಿ ವಿಜಯ ಸೂರ್ಯ ಧಾರಾವಾಹಿಯನ್ನು ಒಪ್ಪಿಕೊಂಡಿದ್ದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇದಕ್ಕಾಗಿ ಕಳೆದೊಂದು ವರ್ಷದಿಂದ ಇಡೀ ತಂಡ ಶ್ರಮಪಟ್ಟಿದೆ ಎಂದು ಮಾಹಿತಿ ನೀಡಿದರು.
ವಾಹಿನಿಗಳಲ್ಲಿ ಪ್ರಸಾರವಾಗುವ ಧಾರವಾಹಿಗಳು ಅತ್ತೆ-ಸೊಸೆ ಗಲಾಟೆಯನ್ನೇ ಪ್ರಧಾನ ಕಥಾವಸ್ತುವಾಗಿಸಿಕೊಳ್ಳುವುದರಿಂದ ಮಹಿಳೆಯರನ್ನು ಧಾರವಾಹಿಗಳಲ್ಲಿ ವಿಲನ್ನಂತೆ ಬಿಂಬಿಸಲಾಗುತ್ತಿದೆ ಎಂಬ ಅಪವಾದವಿತ್ತು. ಆದರೆ, ನಮ್ಮ ಸ್ಟಾರ್ ಸುರ್ವಣ ವಾಹಿನಿಯು ಈಗಾಗಲೇ ಬಿಳಿ ಹೆಂಡ್ತಿ, ಮುದ್ದುಲಕ್ಷ್ಮಿ, ವರಲಕ್ಷ್ಮೀ ಸ್ಟೋರ್ಸ್, ಮರಳಿ ಬಂದಳು ಸೀತೆ ಧಾರಾವಾಹಿಗಳ ಮೂಲಕ ಈ ಅಪವಾದವವನ್ನು ಅಳಸಿ ಹಾಕಿದೆ ಎಂದರು.
ಈ ಎಲ್ಲ ಧಾರವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಕಳೆದ 5 ವಾರಗಳಿಂದ ಪ್ರೈಮ್ ಟೈಮ್ನಲ್ಲಿ ಸ್ಟಾರ್ ಸುರ್ವಣ ವಾಹಿನಿಯು 3ನೇ ಸ್ಥಾನ ಕಾಯ್ದುಕೊಂಡಿದೆ. ನಂಬರ್ 1 ಸ್ಥಾನಕ್ಕೇರುವಲ್ಲಿ ಪ್ರೇಮಲೋಕ ದೊಡ್ಡ ಹೆಜ್ಜೆಯಾಗಿದ್ದು, ಇದು ಚಾನೆಲ್ಗೆ ಸುವರ್ಣ ಯುಗ ತಂದುಕೊಡುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧಾರಾವಾಹಿಯ ನಾಯಕನಟ ವಿಜಯ ಸೂರ್ಯ ಮಾತನಾಡಿ, ಪ್ರೇಮಲೋಕ ಧಾರವಾಹಿಯ ಮೂಲಕ ಮನೆ-ಮನೆಗೂ ಪ್ರೀತಿ-ಪ್ರೇಮ ಹಂಚಲು ಮುಂದಾಗಿದ್ದೇವೆ. ನಾನು ಈ ಪ್ರಾಜೆಕ್ಟ್ನ ಭಾಗವಾಗಿರುವುದು ಸಂತಸ ತಂದಿದೆ. ಜೀವನಕ್ಕೆ ಪ್ರೇಮವೇ ಉಸಿರು. ಎಲ್ಲಾ ಕಡೆಯೂ ಪ್ರೀತಿಯನ್ನು ಕಾಣಬಹುದು. ಇದನ್ನೇ ಪ್ರೇಮಲೋಕ ಧಾರಾವಾಹಿಯಲ್ಲಿ ಕುಟುಂಬದ ಮೂಲಕ ವಿಭಿನ್ನವಾಗಿ ಹೇಳಲು ಹೊರಟಿದ್ದೇವೆ. ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಧಾರವಾಹಿ ಇದಾಗಿದೆ ಎಂದರು.
2ನೇ ಇನ್ನಿಂಗ್ಸ್ನಲ್ಲಿ ಕಲಾವಿದನಾಗಿ ನನ್ನನ್ನು ನಾನು ಪ್ರೂವ್ ಮಾಡಲು ಸ್ಟಾರ್ ಸುವರ್ಣ ವಾಹಿನಿ ಅವಕಾಶ ಕಲ್ಪಿಸಿದೆ. ಈ ಮೂಲಕ ಇಡೀ ಚಾನೆಲ್ ಗೆಲ್ಲಿಸುವ ಉತ್ಸಾಹ ಎಲ್ಲರಲ್ಲೂ ಕಂಡುಬರುತ್ತಿದೆ. ಈ ಹಿಂದೆ ಇಷ್ಟಕಾಮ್ಯ ಸಿನಿಮಾದ ಪ್ರಮೋಷನ್ಗಾಗಿ ದಾವಣಗೆರೆಗೆ ಬಂದಿದ್ದೆ. ಅದೇ ಪ್ರೀತಿ, ಪ್ರೋತ್ಸಾಹವನ್ನು ಜನತೆ ಪ್ರೇಮಲೋಕ ಧಾರಾವಾಹಿಗೂ ನೀಡುವ ವಿಶ್ವಾಸವಿದೆ ಎಂದರು.
ವೈಯಕ್ತಿಕವಾಗಿ ನನ್ನ ಕೆರಿಯರ್ ಶುರುವಾಗಿದ್ದು ರವಿಚಂದ್ರನ್ ಅವರ ಕ್ರೇಜಿಲೋಕ ಸಿನಿಮಾ ಮೂಲಕ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನನ್ನ ತಂದೆ ಪಾತ್ರ ನಿರ್ವಹಿಸಿದ್ದರು. ಅದನ್ನು ಬಿಟ್ಟರೆ ರವಿಚಂದ್ರನ್ರ ಪ್ರೇಮಲೋಕ ಸಿನಿಮಾಕ್ಕೂ ನಮ್ಮ ಪ್ರೇಮಲೋಕ ಧಾರಾವಾಹಿಗೂ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ಧಾರಾವಾಹಿಯ ನಾಯಕಿ ಅಂಕಿತಾ ಮಾತನಾಡಿ, ದೊಡ್ಡ ಚಾನೆಲ್ನಲ್ಲಿ ಈ ರೀತಿ ಲಾಂಚ್ ಆಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮೊದಲ ಸೀರಿಯಲ್ನಲ್ಲೇ ನಾಯಕಿಯಾಗಿ ಅವಕಾಶ ಕೊಟ್ಟಿದ್ದಕ್ಕೆ ಅಭಾರಿಯಾಗಿದ್ದೇನೆ. ವಿಜಯ ಸೂರ್ಯ, ಬಾಲರಾಜ್, ವಾಣಿಶ್ರೀ, ಅಶೋಕ್ ಹೆಗಡೆ, ಶಾಲಿನಿ ರವಿಭಟ್, ಮಾಲತಿ ಸರದೇಶಪಾಂಡೆಯಂತಹ ಹಿರಿಯರ ಜೊತೆಗೆ ಕೆಲಸ ಮಾಡಿರುವುದು ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.
ಕಟೌಟ್ ಅನಾವರಣ :
ಶನಿವಾರ ಬೆಳಗ್ಗೆ ದಾವಣಗೆರೆಯ ಹಳೇ ಪಿ.ಬಿ. ರಸ್ತೆಯಲ್ಲಿರುವ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರೇಮಲೋಕ ಧಾರಾವಾಹಿಯ 35 ಅಡಿ ಎತ್ತರದ ಕಟೌಟ್ ಸ್ಟಾಚ್ಯು ಆಫ್ ಲವ್ ಅನಾವರಣಗೊಳಿಸಲಾಯಿತು.
ಲಾಂಚ್ ಇವೆಂಟ್ :
ಸಂಜೆ ತ್ರಿಶೂಲ್ ಕಲಾಭವನದಲ್ಲಿ ನಡೆದ ಪ್ರೇಮಲೋಕ ಲಾಂಚ್ ಇವೆಂಟ್ನಲ್ಲಿ ವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿಪ್ರಸಾದ್, ಧಾರಾವಾನಿಯ ನಾಯಕ ವಿಜಯ್ ಸೂರ್ಯ, ನಾಯಕಿ ಅಂಕಿತಾ ಸೇರಿದಂತೆ ಬಯಸದೇ ಬಂದ ಭಾಗ್ಯ ಹಾಗೂ ವರಲಕ್ಷ್ಮೀ ಸ್ಟೋರ್ಸ್ ಧಾರಾವಾಹಿ ತಂಡದವರು ಪಾಲ್ಗೊಂಡಿದ್ದರು.ಸುದ್ದಿಗೋಷ್ಠಿಯಲ್ಲಿ ವಾಹಿನಿಯ ಮಾರ್ಕೆಟಿಂಗ್ ಎನ್.ಸಂಗೀತಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/06_dvg_02.gif)