ದಾವಣಗೆರೆ:
ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಆಧಾರದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಅರುಣ ವೃತ್ತದ ಬಳಿಯಲ್ಲಿರುವ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕಳೆದ ಐದು ವರ್ಷ ಆಡಳಿತಾವಧಿಯಲ್ಲಿ ದೇಶದ ಭದ್ರತೆಗೆ ಧಕ್ಕೆ ಬಾರದಂತೆ ಹಾಗೂ ಅಸ್ತಿರತೆ ಕಾಡದಂತೆ ರಕ್ಷಣೆ ನೀಡಿದ್ದಲ್ಲದೇ, ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಬರುವ ಲೋಕಸಭಾ ಚುನಾವಣೆಯನ್ನು ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ವಿಚಾರ ಇಟ್ಟುಕೊಂಡು ಎದುರಿಸುತ್ತೇವೆ ಎಂದು ಹೇಳಿದರು.
ಕಾಶ್ಮೀರ ಪುಲ್ವಾಮಾದಲ್ಲಿ ಉಗ್ರರು ಆತ್ಮಹುತಿ ದಾಳಿ ನಡೆಸಿ, ನಮ್ಮ 44 ಸೈನಿಕರನ್ನು ಬಲಿಪಡಿದುದಕ್ಕೆ, ಪ್ರತೀಕಾರವನ್ನು ತೀರಿಸಿಕೊಳ್ಳಲು ಪ್ರಧಾನಮಂತ್ರಿ ಸೇನೆಗೆ ಪೂರ್ಣ ಸ್ವಾತಂತ್ರ ನೀಡದ ಕಾರಣಕ್ಕೆ ಸೇನೆಯು ಏರ್ ಸ್ಟ್ರೈಕ್ ನಡೆಸಿ, 300 ಉಗ್ರರ ಸಂಹಾರ ಮಾಡಲು ಕಾರಣೀಭೂತರಾಗಿದ್ದಾರೆ. ಆದರೆ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಮುಂಬೈಯ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರೂ ಯಾವುದೇ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಜನರಲ್ಲಿ ನರೇಂದ್ರ ಮೋದಿಯವರೇ ಸಮರ್ಥ ನಾಯಕ ಎಂಬ ಭಾವನೆ ಬಂದಿದ್ದು, ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ 55 ತಿಂಗಳ ಆಡಳಿತಾವಧಿಯಲ್ಲಿ ಹೊಗೆ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ, ಉಜ್ವಲ್ ಯೋಜನೆ ಜಾರಿಗೆ ತಂದು ಕೋಟ್ಯಂತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ 10 ಕೋಟಿ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಗೆ ಆರೋಗ್ಯ ವಿಮೆ ನೀಡಿದ್ದಾರೆ. ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ, ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ ಆರು ಸಾವಿರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲು ಸರ್ಕಾರ ಮುಂದಾಗಿದೆ. ಹೀಗೆ ಬಡವರು, ಮಧ್ಯಮ ವರ್ಗ, ರೈತರು, ಶ್ರಮಿಕರು, ಕೂಲಿ ಕಾರ್ಮಿಕರು ಹಾಗೂ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜಿಲ್ಲೆಯ ಅರ್ಹರಿಗೆ ತಲುಪಿಸಿದ್ದೇನೆಂಬ ಖುಷಿ, ಹೆಮ್ಮೆ ಇದೆ ಎಂದರು.
ಯಾರೇ ಒಂದಾದರೂ ಬಿಜೆಪಿಗೆ ಏನೂ ಆಗಲ್ಲ. ಘಟಬಂಧನ್ನಲ್ಲಿ ಇದ್ದವರು ಒಬ್ಬೊಬ್ಬರಾಗಿಯೇ ಹೇಗೆ ಉದುರಿಕೊಂಡು ಹೋಗಿದ್ದಾರೆ ನೋಡಿದ್ದಿರಲ್ಲ. ಜೆಡಿಯು ರಾಷ್ಟ್ರಮಟ್ಟದಲ್ಲಿ ಎನ್ಡಿಎ ಕೂಟದ ಜೊತೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್. ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ಅಣಬೇರು ಜೀವನಮೂರ್ತಿ, ಎನ್.ರಾಜಶೇಖರ್, ಹೇಮಂತಕುಮಾರ್, ಹೆಚ್.ಎಂ.ರುದ್ರಮುನಿಸ್ವಾಮಿ, ದನುಶ್ ರೆಡ್ಡಿ, ಪ್ರವೀಣ್ ಜಾಧವ್, ವೈ.ಮಲ್ಲೇಶ್ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
