ತುಮಕೂರು
ಕೊರೋನಾ ವೈರಸ್ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನಸಂಚಾರವನ್ನು ನಿಯಂತ್ರಿಸಲು ರೈಲು ಸಂಚಾರವನ್ನು ಸರ್ಕಾರ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ತುಮಕೂರು ರೈಲು ನಿಲ್ದಾಣವು ಸೋಮವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ತುಮಕೂರು ರೈಲು ನಿಲ್ದಾಣವು ಮಹತ್ವ ಪಡೆದಿದ್ದು, ಈ ಮಾರ್ಗವಾಗಿ ಪ್ರತಿನಿತ್ಯ ಹಲವಾರು ರೈಲುಗಳು ಸಂಚರಿಸುತ್ತವೆ. ಬೆಂಗಳೂರು ಕಡೆಗೆ ಬಂದು-ಹೋಗುತ್ತವೆ. ಹೀಗಾಗಿ ಸದಾ ಕಾಲ ಪ್ರಯಾಣಿಕರಿಂದ ಗಿಜಿಗಿಡುತ್ತಿರುತ್ತದೆ. ರೈಲು ನಿಲ್ದಾಣದ ಹೊರಗೆ ಹಾಗೂ ಸುತ್ತಮುತ್ತ ಜನಸಂಚಾರ- ವಾಹನ ಸಂಚಾರ ದಟ್ಟವಾಗಿರುತ್ತದೆ. ಆದರೆ ಸೋಮವಾರ ಇಲ್ಲಿನ ದೃಶ್ಯ ವಿಭಿನ್ನವಾಗಿತ್ತು. ಇಡೀ ರೈಲು ನಿಲ್ದಾಣ ಖಾಲಿ ಖಾಲಿಯಾಗಿತ್ತು. ನಿಲ್ದಾಣದ ಹೊರಗೂ ಜನರು-ವಾಹನಗಳು ಇರಲಿಲ್ಲ. ಅಲ್ಲಿನ ಇಡೀ ವಾತಾವರಣ ನಿಶ್ಯಬ್ದವಾಗಿತ್ತು. ನೀರವ ಮೌನ ಆವರಿಸಿತ್ತು.
ಆದರೆ ನಗರದ ಅಶೋಕ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು. ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತವಾಗಿರುವುದರಿಂದ, ಈಗ ಜನರು ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದಾರೆ. ಬಸ್ ದರಗಳೂ ವ್ಯತ್ಯಯವಾಗುತ್ತಿವೆ. ಇಷ್ಟಾಗಿಯೂ ಜನರು ಖಾಸಗಿ ಬಸ್ಗಳ ಟಾಪ್ ಮೇಲೆ ಕುಳಿತು ಸಂಚರಿಸುತ್ತಿದ್ದಾರೆ. ಬಸ್ಗಳ ಒಳಗೂ ಜನಜಂಗುಳಿ, ಮೇಲೂ ಜನರ ಗುಂಪು ಇರುವ ದೃಶ್ಯ ಅನೇಕ ಮಾರ್ಗಗಳಲ್ಲಿ ಕಂಡುಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ