ದಾವಣಗೆರೆ:
ಯಾವ ಜನಾಂಗದ ನೌಕರರಿಗೂ ಅನ್ಯಾಯವಾಗದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕವನ್ನು ಅನುಷ್ಠಾನಗೊಳಿಸಿ, ಸರ್ಕಾರಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಅಭಿನಂದನಾರ್ಹವಾಗಿದೆ ಎಂದು ಛಲವಾದಿ ಮಹಾಸಭಾ ತಿಳಿಸಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ಎಸ್.ಶೇಖರಪ್ಪ, ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿಯನ್ನು ರದ್ದು ಗೊಳಿಸಲು ಸೂಚಿಸಿ, ಆದೇಶ ಹೊರಡಿಸಿದ್ದರ ಪರಿಣಾಮ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 3,790 ಜನ ಅಧಿಕಾರಿಗಳು ಹಾಗೂ ನೌಕರರು ಹಿಂಬಡ್ತಿ ಪಡೆಯುವಂತಾಗಿತ್ತು ಎಂದರು.
ಹೀಗಾಗಿ ಇತ್ತೀಚೆಗೆ ನಗರದಲ್ಲಿ ಮಹಾಸಭಾ ನಡೆಸಿದ ಅಭಿನಂದನಾ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಮೀಸಲಾತಿಯಲ್ಲಿ ಹಿಂಬಡ್ತಿಯಾಗಿರುವುದಕ್ಕೆ ನ್ಯಾಯಕೊಡಿಸಬೇಕೆಂದು ಒತ್ತಾಯಿಸಿ, ಸಮಾವೇಶಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಈ ವಿಷಯವಾಗಿ ಎಸ್ಸಿ-ಎಸ್ಟಿ ಸಚಿವರುಗಳು ಸಂಪುಟದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಲ್ಲದೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕವನ್ನು ಅನುಷ್ಠಾನಗೊಳಿಸಿದಿದ್ದರೆ, ರಾಜೀನಾಮೆ ನೀಡುವುದಾಗಿಯೂ ಸರ್ಕಾರಕ್ಕೆ ಬೆದರಿಕೆ ಹಾಕಿದ್ದರು.
ಈ ಎಲ್ಲದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವು ಯಾವುದೇ ಸಮುದಾಯದ ನೌಕರರಿಗೆ ಅನ್ಯಾಯವಾಗದಂತೆ, ಸೂಕ್ತ ತೀರ್ಮಾನ ಕೈಗೊಳ್ಳುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿ ವಿಧೇಯಕವನ್ನು ಅನುಷ್ಠಾನಗೊಳಿಸಿ, ಸರ್ಕಾರಿ ಆದೇಶ ಹೊರಡಿಸಿದೆ. ಹೀಗಾಗಿ ಹಿಂಬಡ್ತಿ ಪಡೆದಿದ್ದ ನೌಕರರು ಹಾಗೂ ಅಧಿಕಾರಿಗಳು ಮುಂಬಡ್ತಿ ಪಡೆಯಲಿದ್ದಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಅಧ್ಯಕ್ಷ ಜಯಪ್ಪ ಗುಡಾಳ್, ಮುಖಂಡರಾದ ಟಿ.ಎಸ್.ರಾಮಯ್ಯ, ಎಸ್.ಎಂ.ಬಸವರಾಜ್, ನವೀನ್ಕುಮಾರ್, ಬೇತೂರು ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.