ಹುಳಿಯಾರು:
ಹುಳಿಯಾರು ಹೋಬಳಿ ಪೋಚಕಟ್ಟೆ ಗ್ರಾಮದ ಪೋಚಕಟ್ಟೆ ಗೇಟ್ನಿಂದ ಉತ್ತರಕ್ಕೆ ಪೋಚಕಟ್ಟೆ ಗ್ರಾಮ, ಹುಳಿಯಾರು ಅಮಾನಿಕೆರೆ ಮತ್ತು ಕಸಬಾ ಗ್ರಾಮಗಳ ಆಯ್ದ ಸರ್ವೆ ನಂಬರ್ನ ಜಮೀನುಗಳಲ್ಲಿ ಹಾದು ಹೋಗುವ ನಿಯೋಜಿತ 150ಎ ಬೈಪಾಸ್ ರಸ್ತೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಹೊಸಹಳ್ಳಿ ಚಂದ್ರಣ್ಣ ) ಬಣದ ರೈತರು ಸೋಮವಾರ ಹುಳಿಯಾರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ ರೈತ ಸಂಘದ ಅಧಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಪ್ರತಿಭಟನೆಯಲ್ಲಿ ಮಾತನಾಡಿ 150 ಎ ರಾಷ್ಟ್ರೀಯ ಹೆದ್ದಾರಿಗೆ ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲೇ ಇಲ್ಲದ ಬೈಪಾಸ್ ಹುಳಿಯಾರಿನಲ್ಲಿ ಮಾಡಲು ಹೊರಟಿದ್ದಾರೆ. ಇಲ್ಲಿ ಬೈಪಾಸ್ ರಸ್ತೆ ಮಾಡಿದರೆ ನೂರಾರು ಕುಟುಂಬಗಳು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಹಾಗಾಗಿ ಈ ಹಿಂದೆಯೇ ಸಂಸದರು, ಸಚಿವರು, ಜಿಲ್ಲಾಧಿಕಾರಿಗಳಿಗೆ ಬೈಪಾಸ್ ಕೈ ಬಿಡಲು ಮನವಿ ಮಾಡಲಾಗಿತ್ತಾದರೂ ಯಾರೊಬ್ಬರೂ ರೈತರ ಪರ ನಿಂತಿಲ್ಲ. ಹಾಗಾಗಿ ಚಳುವಳಿಗೆ ಕರೆಕೊಟ್ಟಿದ್ದು ಈಗ ಮನೆಗೊಬ್ಬರಂತೆ ಮಾತ್ರ ಬಂದಿದ್ದು ಮುಂದಿನ ದಿನಗಳಲ್ಲಿ ಮನೆಮಂದಿಯಲ್ ಬರುವಂತೆಯೂ ಕರೆ ಕೊಟ್ಟು ಕಾಮಗಾರಿ ತಡೆ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಾಪಂ ಮಾಜಿ ಸದಸ್ಯ ಶಿವನಂಜಪ್ಪ ಅವರು ಮಾತನಾಡಿ ಬೈಪಾಸ್ ರಸ್ತೆ ಹೋಗುವ ಗ್ರಾಮದ ಜಮೀನುಗಳು ಪಿತ್ರಾರ್ಜಿತವಾದ ನೂರಾರು ವರ್ಷಗಳಿಂದ ಸಾಗುವಳಿಗೆ ಒಳಪಟ್ಟಿದ್ದಗಿದ್ದು ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿಯಾಗಿದೆ. ಅಲ್ಲದೆ ಪಿತ್ರಾರ್ಜಿತ ಜಮೀನುಗಳಾದ್ದರಿಂದ ಸಣ್ಣ, ಅತಿ ಸಣ್ಣ ರೈತಾಪಿ ಕುಟುಂಬಗಳ ಪಾಲಿಗೆ ಸರ್ವಸ್ವವಾಗಿದ್ದು, ಈ ಮಣ್ಣಿನೊಂದಿಗೆ ಜನತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳಿಗೆ ಇದೇ ಜೀವನಾಧಾರವಾಗಿದ್ದು ಈ ಜಮೀನು ಸ್ವಾದೀನ ಮಾಡಿಕೊಂಡರೆ ನೂರಾರು ರೈತರ ಹೊಟ್ಟೆಯ ಮೇಲೆ ಹೊಡೆದಂತ್ತಾಗುತ್ತದೆ. ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕ ಬಾರದು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಆರ್.ಭೋಜರಾಜ್ ಅವರು ಮಾತನಾಡಿ ಅಭಿವೃದ್ಧಿಯ ನೆಪದಲ್ಲಿ ಕೃಷಿ ಜಮೀನನ್ನು ಸ್ವಾದೀನ ಮಾಡಿಕೊಂಡು ರೈತರನ್ನು ಸರ್ಕಾರ ಒಕ್ಕಲೆಬ್ಬಿಸುತ್ತಿದೆ. ಹೀಗೆ ಫಲವತ್ತಾದ ಕೃಷಿ ಭೂಮಿಯಲ್ಲಿ ರಸ್ತೆ, ರೈಲು, ಕಾರ್ಖಾನೆ ಮಾಡಿದರೆ ಮುಂದೊಂದು ದಿನ ತುತ್ತು ಅನ್ನಕ್ಕೂ ದೇಶದ ಜನ ಪರದಾಡುವಂತ್ತಾಗುತ್ತದೆ. ಹಾಗಾಗಿ ಕೃಷಿ ಭೂಮಿ ಉಳಿಸಲು ರೈತರೊಂದಿಗೆ ಇತರೆ ಜನರೂ ಕೈ ಜೋಡಿಸುವ ಅಗತ್ಯವಿದೆಯೆಂದರಲ್ಲದೆ ಹಠಕ್ಕೆ ಬಿದ್ದು ಬೈಪಾಸ್ ನಿರ್ಮಾಣಕ್ಕೆ ಮುಂದಾದರೆ ಪ್ರಾಣ ಕೊಟ್ಟೇವು ಭೂಮಿ ಕೊಡೇವು ಎಂಬ ಘೋಷಣೆಯೊಂದಿಗೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದರು.
ಹುಳಿಯಾರು ರೈತ ಸಂಘದ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ ಅವರು ಮಾತನಾಡಿ ನಿಯೋಜಿತ ಬೈಪಾಸ್ ರಸ್ತೆಗೆ ಸ್ವಾಧೀನಕ್ಕೆ ಒಳಪಡುವ ಜಮೀನಿಗೆ ಕೇಂದ್ರ ಮೌಲ್ಯಮಾಪನ ಉಪಸಮಿತಿಯು ಒಂದು ಎಕರೆಗೆ ಖುಷ್ಕಿ ಜಮೀನಿಗೆ 1,50 ಲಕ್ಷ ರೂ, ತರಿ ಜಮೀನಿಗೆ 2.50 ಲಕ್ಷ ರೂ, ಬಾಗಾಯ್ತು ಜಮೀನಿಗೆ 5 ಲಕ್ಷ ರೂ. ನಿಗಧಿ ಮಾಡಿ 4 ರಿಂದ 20 ಲಕ್ಷ ರೂ. ಮಾತ್ರ ಪರಿಹಾರ ಕೊಡುಲು ನಿರ್ಧರಿಸಿದ್ದಾರೆ. ಆದರೆ ಮಾರುಕಟ್ಟೆ ಬೆಲೆ ಎಕರೆಗೆ 20 ರಿಂದ 30 ಲಕ್ಷ ರೂ.ಗಳಿದ್ದು ಸರ್ಕಾರದ ಪರಿಹಾರದ ಹಣ ಏನಕ್ಕೂ ಸಾಲದಾಗಿದ್ದು ಬೆಲೆಯೇ ಕಟ್ಟಲಾಗದ ಅನ್ನ ಕೊಡುವ ಜಮೀನು ಬಿಟ್ಟು ಹುಳಿಯಾರಿನಲ್ಲೇ ಹೆದ್ದಾರಿ ರಸ್ತೆ ಹಾದು ಹೋಗಲಿ ಎಂದರು.
ಗೌಡಗೆರೆ, ಕೆ.ಸಿ.ಪಾಳ್ಯ, ಕೆಂಕೆರೆ, ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ, ಹುಳಿಯಾರು, ಪೋಷಕಟ್ಟೆ, ಬಳ್ಳೆಕಟ್ಟೆ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹುಳಿಯಾರಿನ ರಾಮಗೋಪಾಸ್ ಸರ್ಕಲ್ನಿಂದ ಬಿ.ಎಚ್.ರಸ್ತೆ ಮೂಲಕ ನಾಡಕಛೇರಿಗೆ ಪ್ರತಿಭಟನಾ ಮೆರವಳಿಗೆ ಆಗಮಿಸಿ ಅಲ್ಲಿ ಉಪತಹಸೀಲ್ದಾರ್ ಎಸ.ಸೋಮೇಶ್ ಅವರಿಗೆ ಮನವಿ ಕೊಟ್ಟು ಪ್ರತಿಭಟನೆ ಕೈ ಬಿಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
