ಗುಬ್ಬಿ
ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಕುನ್ನಾಲ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆಯಿತು.
ಕಳೆದ ಎರಡು ತಿಂಗಳಿಂದ ನೀರು ಪೂರೈಕೆಯಲ್ಲಿ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಹಬ್ಬಹರಿದಿನಗಳಂದು ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತದೆ ಎಂದ ಅಧಿಕಾರಿಗಳು, ನೀರು ಹಂಚಿಕೆಯಲ್ಲೂ ತಾರತಮ್ಯವೆಸಗಿದೆ. ಈ ಹಿನ್ನೆಲೆಯಲ್ಲಿ ದಿಢೀರ್ ಧರಣಿ ನಡೆಸಲಾಗುತ್ತಿದೆ. ಸ್ಥಳಕ್ಕೆ ಮೇಲಧಿಕಾರಿಗಳು ಬಂದು ಇತ್ಯರ್ಥ ಮಾಡುವವರೆಗೆ ಅನಿರ್ದಿಷ್ಟಾವಧಿ ಧರಣಿಗೆ ನೂರಾರು ಗ್ರಾಮಸ್ಥರು ಮುಂದಾದರು.
ಬೆಳಿಗ್ಗೆ ಕಚೇರಿ ಬಾಗಿಲು ತೆರೆದ ತಕ್ಷಣ ಖಾಲಿ ಕೊಡದೊಂದಿಗೆ ಧಾವಿಸಿದ ಮಹಿಳೆಯರು ಮತ್ತು ಮಕ್ಕಳು ಕುಡಿಯಲು ನೀರು ನೀಡುತ್ತಿಲ್ಲ. ಈಚೆಗೆ ಬಳಸಲು ನೀರು ಕೊಡುತ್ತಿಲ್ಲ. ಶೌಚಾಲಯಕ್ಕೆ ತೆರಳಲು ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿ ಬಾಗಿಲು ಮುಚ್ಚಿ ಧರಣಿ ನಿರತರಾದರು. ಕಚೇರಿ ಸಿಬ್ಬಂದಿಗಳನ್ನು ದಿಗ್ಭಂಧನಗೊಳಿಸಿದ ಪ್ರತಿಭಟನಾಕಾರರು ಕೊಳವೆಬಾವಿಗಳಲ್ಲಿ ಬರುವ ಕೊಂಚ ನೀರು ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ವರಮಹಾಲಕ್ಷ್ಮೀ ಹಬ್ಬದ ದಿನ ಬಂದ ಟ್ಯಾಂಕರ್ ಪ್ರತಿ ಮನೆಗೆ 10 ಬಿಂದಿಗೆ ನೀರು ನೀಡಿತ್ತು. ನಂತರ ಗೌರಿ ಹಬ್ಬಕ್ಕೆ ಬಂದ ಟ್ಯಾಂಕರ್ ಬೇಕಾದವರಿಗೆ ಮಾತ್ರ ನೀರು ನೀಡಿದ್ದಾರೆ. ಹಲವು ಮನೆಗೆ ನೀರಿಲ್ಲ. ಹಬ್ಬದ ದಿನ ನೀರಿಗೆ ಪರದಾಡುವಂತಾಯಿತು. ಹೀಗೆ ತಾರತಮ್ಯ ಮಾಡುವ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು. ಮೊದಲನಿಂದಲೂ ಕುನ್ನಾಲ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಬರುವ ಟ್ಯಾಂಕರ್ ನೀರು ಕೂಡಾ ಕೆಲವರಿಗೆ ಸೀಮಿತವಾಗುವುದು ಖಂಡನೀಯ ಎಂದು ಕಿಡಿಕಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ಎರಡು ತಾಸುಗಳ ನಂತರ ಸ್ಥಳಕ್ಕೆ ಧಾವಿಸಿದ ತಾಪಂ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಜಯಸಿಂಹ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ಕೂಡಲೇ ನೀರನ್ನು ಸಮರ್ಪಕವಾಗಿ ವಿತರಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಸಿಬ್ಬಂದಿಗಳೊಂದಿಗೆ ಚರ್ಚಿಸಿ ಸ್ಥಳೀಯ ಸಮಸ್ಯೆ ಆಲಿಸಿದರು. ಟ್ಯಾಂಕರ್ ಮೂಲಕ ನೀರು ಸರಬರಾಜು ತಕ್ಷಣದಿಂದ ಆರಂಭಿಸಲಾಗುವುದು. ಕೊಳವೆಬಾವಿ ಕೊರೆಸಲು ವ್ಯವಸ್ಥೆ ಮಾಡುವ ಬಗ್ಗೆ ಸೂಚಿಸಿದರು. ತುರ್ತು ಸಭೆ ಕರೆದು ಅಗತ್ಯ ಕ್ರಮವಹಿಸಲು ಎಲ್ಲಾ ಸದಸ್ಯರು ಮುಂದಾದರು.ಪ್ರತಿಭಟನೆಯಲ್ಲಿ ಅಸ್ಲಾಂಪಾಷ, ಯತಿರಾಜ್, ಸುರೇಶ್, ರೈತಸಂಘದ ಗುರುಚನ್ನಬಸಪ್ಪ, ಮಹೇಶ್, ಕಲಾವತಿ, ಮಮತಾ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
