ರಸಗೊಬ್ಬರ ಅಭಾವ ನಿವಾರಿಸಲು ಒತ್ತಾಯ

ತುಮಕೂರು

    ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕೃಷಿ ಇಲಾಖೆಯ ಅಧಿಕಾರಿಗಳು ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳ ಜೊತೆ ಸೇರಿ ಕೃತಕ ಆಭಾವವನ್ನು ಸೃಷ್ಟಿಸಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಯೂರಿಯಾ ರಸಗೊಬ್ಬವನ್ನು ಸಿಗದಂತೆ ಮಾಡಿದ್ದಾರೆ. ಕಾಳಸಂತೆಕೋರರು ತಮಗೆ ಇಷ್ಟ ಬಂದ ದರಕ್ಕೆ ಗೊಬ್ಬರ ಮಾರಾಟ ಮಾಡಿ, ಅದರ ಜೊತೆಗೆ, ರೈತರಿಗೆ ಅಗತ್ಯವಿಲ್ಲದ 19 ಆಲ್ ಎಂಬ ಮತ್ತೊಂದು ಗೊಬ್ಬರವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಪಟೇಲ್ ಆಪಾದಿಸಿದರು.

    19 ಆಲ್ ಗೊಬ್ಬರ ಕೊಳ್ಳಬೇಕಾಗಿರುವುದರಿಂದ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ 150 ರಿಂದ 200 ರೂ ಹೆಚ್ಚಿಗೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದರು.ರೈತರಿಗೆ ಈಗ ಅಗತ್ಯವಾಗಿ ರಾಗಿ ಸೇರಿದಂತೆ ಇತರೆ ಬೆಳೆಗಳಿಗೆ ಯೂರಿಯಾ ಅಗತ್ಯವಿದೆ. ಆದರೆ ಅಧಿಕಾರಿಗಳು ಯೂರಿಯಾ ಗೊಬ್ಬರ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ನೀಡಬೇಕಾದ ಗೊಬ್ಬರವನ್ನು ಖಾಸಗಿ ಅಂಗಡಿಗಳಿಗೆ ನೀಡಿ, ಕೃತಕ ಅಭಾವ ಸೃಷ್ಟಿಸಿದಾರೆ. ಇನ್ನೂ ಮೂರನ್ನಾಲ್ಕು ದಿನಗಳು ಕಳೆದರೆ ರೈತರಿಗೆ ಗೊಬ್ಬರದ ಅಗತ್ಯವೇ ಬರುವುದಿಲ್ಲ.

    ಅಧಿಕಾರಿಗಳು ಮತ್ತು ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ದುಪ್ಪಟ್ಟು ಬೆಲೆ ಪಡೆಯುತ್ತಿರುವ ಅಂಗಡಿಗಳ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಆನಂದ ಪಟೇಲ್ ಎಚ್ಚರಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಸುಲೋಚನ ಅವರು, ಜಿಲ್ಲೆಗೆ ಈ ಹಿಂದಿನ ಸಾಲಿನ ಬೇಡಿಕೆಯಂತೆ ಅಂದಾಜು 25 ಸಾವಿರ ಮೆಟ್ರಿಕ್ ಟನ್ ಯೂರಿಯ ಅಗತ್ಯವಿತ್ತು. ಆದರೆ ಈ ಸಾಲಿನಲ್ಲಿ ಸಮೃದ್ಧ ಮಳೆಯಾಗಿರುವ ಕಾರಣ 30 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದೆ. ಆದರೆ ಸರಬರಾಜು ಆಗಿರುವುದು 25,344 ಮೆಟ್ರಿಕ್ ಟನ್ ಮಾತ್ರ. ಇನ್ನೂ 5000 ಮೆ.ಟನ್ ಅಗತ್ಯವಿದೆ ಎಂದರು.

    ಇಲಾಖೆಯಿಂದ ಈಗಾಗಲೇ ಎಲ್ಲಾ ರಸಗೊಬ್ಬರ ಕಾರ್ಖಾನೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ರವಾನೆಯಾಗುವ ನಿರೀಕ್ಷೆ ಇದೆ. ಅಂಗಡಿಗಳಲ್ಲಿ ಹೆಚ್ಚಿನ ದರ ವಿಧಿಸುವ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

   ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿವಿಧ ತಾಲೂಕುಗಳ ಅಧ್ಯಕ್ಷರಾದ ಸಿದ್ದರಾಜು ಕೊಡ್ಲಹಳ್ಳಿ, ಲೋಕೇಶ್ ಬಂಡಿಮನೆ, ಅನಿಲ್‍ಕುಮಾರ್, ಕೀರ್ತಿ ಹಳೆ ಸಂಪಿಗೆ, ಚಿಕ್ಕದ್ಯಾವಣ್ಣ, ಲಕ್ಷ್ಮಣಗೌಡ, ರುದ್ರೇಶ್‍ಗೌಡ, ವೆಂಕಟೇಶಗೌಡ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link