ದಾವಣಗೆರೆ:
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡುತ್ತಿರುವ ಹಾಗೂ ಪ್ರೌಢಶಾಲೆಗಳ ಅಪೂರ್ಣ ಮಾಹಿತಿ ಶಿಫಾರಸು ಮಾಡುತ್ತಿರುವ ಹೊನ್ನಾಳಿಯ ಕ್ಷೇತ್ರ ಶಿಕ್ಷಣಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಆಗ್ರಹಿಸಿ ಜೂನ್ 10 ರಂದು ಬಿಇಒ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಹೆಣ್ಣು ಭ್ರೂಣಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತ ಚನ್ನೇಶ್ ಎಂ. ಜಕ್ಕಾಳಿ ಎಚ್ಚರಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳ್ಳಿ ಬಿಇಒ ಜಿ.ಇ.ರಾಜೀವ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡುತ್ತಿದ್ದಾರೆ. ಅಲ್ಲದೇ, ಖಾಸಗಿ ಅನುದಾನಿತ ಹಾಗೂ ಅನುದಾನಿತ ಶಾಲೆಗಳು ಹೊಂದಿರುವ ಮಕ್ಕಳ ಸಂಖ್ಯೆಯ ಬಗ್ಗೆ ಆ ಶಾಲೆಗಳು ನೀಡುವ ಅಪೂರ್ಣ ಮಾಹಿತಿಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಈ ಬಗ್ಗೆ ಡಿಡಿಪಿಐ ಅವರಿಗೆ ದೂರು ಸಲ್ಲಿಸಿದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
2018ರ ಮಾರ್ಚ್ 1ರಿಂದ 2019ರ ಮಾರ್ಚ್ 12ರ ವರೆಗೆ ಹೊನ್ನಾಳ್ಳಿ ಬಿಇಒ ರಾಜೀವ್ ಅವರು ಶಿಕ್ಷಣ ಇಲಾಖೆಯ ನಿಯಮಾವಳಿಯನ್ನು ಗಾಳಿಗೆ ತೂರಿ, ಕಾನೂನು ಬಾಹೀರವಾಗಿ ನಡೆಸಿರುವ ಅವ್ಯವಹಾರದ ಬಗ್ಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ದಾಖಲತೆ ಸಮೇತ ಮನವರಿಕೆ ಮಾಡಿಕೊಟ್ಟು, ಸ್ಥಳ ಪರಿಶೀಲನೆ ನಡೆಸುವಂತೆ ಸಹ ಮನವಿ ಮಾಡಲಾಗಿದೆ. ಆದರೂ ಅವರು ಇನ್ನೂ ತಾಲೂಕಿಗೆ ಭೇಟಿ ನೀಡಿಲ್ಲ ಪರಿಶೀಲನೆ ನಡೆಸಿಲ್ಲ ಎಂದು ದೂರಿದರು.
2019-20ನೇ ಸಾಲಿನ ಶೈಕ್ಷಣಿಕ ವರ್ಷದ ಆಂಭದಲ್ಲಿ ಖಾಸಗಿ ಶಾಲೆಗಳ ನವೀಕರಣಕ್ಕೂ ಸಹ ಬಿಇಒ ಅವರು ನಿಯವಮನ್ನು ಗಾಳಿಗೆ ತೂರುತ್ತಿದ್ದಾರೆ. ಅಲ್ಲದೇ, ಖಾಸಗಿ ಶಾಲೆಗಳಲ್ಲಿ ಪದವಿ ಪಡೆದು ಪಾಠ ಮಾಡುತ್ತಿರುವ ಶಿಕ್ಷಕರಿಗೆ ಅತ್ಯಲ್ಪ ಸಂಭಾವನೆ ನೀಡುವ ಮೂಲಕ ವೈಟ್ಕಾಲರ್ ಜೀತ ಮಾಡಿಸುತ್ತಿವೆ. ಈ ವಿಷಯ ತಿಳಿದರೂ ಹೊನ್ನಾಳಿ ಬಿಇಒ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ಆಪಾದಿಸಿದರು.
ಹೊನ್ನಾಳಿ ತಾಲೂಕಿನ ಶಾಲೆಯೊಂದರಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕ್ಷಕನ ವಿರುದ್ಧವೂ ಕ್ರಮ ಕೈಗೊಳ್ಳದ ಬಿಇಒ ರಾಜೀವ್ ಆ ಶಿಕ್ಷಕನನ್ನು ಬೇರೆಡೆಗೆ ನಿಯೋಜನೆ ಗೊಳಿಸಿರುವುದು ಎಷ್ಟರ ಮಟ್ಟಿಗೆ. ಇಷ್ಟೆಲ್ಲಾ ತಪ್ಪು ಮಾಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಡಿಡಿಪಿಐ ಪರಮೇಶ್ವರಪ್ಪ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಅವರ ರಕ್ಷಣೆಗೆ ನಿಂತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೊನ್ನಾಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾಗೂ ತಪ್ಪಿತಸ್ಥ ಬಿಇಒ ರಾಜೀವ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಜೂನ್ 10 ರಂದು ಬಿಇಒ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸುರೇಶ್, ಮಂಜು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
