ಕುಣಿಗಲ್
ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಕಸಬಾ ಹೋಬಳಿ ತರಿಕೆರೆ ದಾಖಲೆ, ವಾಜರಪಾಳ್ಯ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ವಾಜರಪಾಳ್ಯ ಗ್ರಾಮದ ಜನರು ಕೆಲ ದಿನಗಳಿಂದಲೇ ಸಂಬಂಧ ಪಟ್ಟವರಿಗೆ ದೂರಿದರೂ ಪ್ರಯೋಜನವಾಗದಿದ್ದಾಗ ಬುಧವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ಎಚ್ಚರಿಕೆ ನೀಡಿದರು.
ಕಲ್ಲುಗಣಿಗಾರಿಕೆಗೆ ಅನುಕೂಲವಾಗಲೆಂದು ಕೃಷಿ ಜಮೀನಿನಲ್ಲಿ ವಾಜರಪಾಳ್ಯ ಗ್ರಾಮದ ಸಮೀಪದ ಕಲ್ಲುಗಣಿಗಾರಿಕೆಯಿಂದ ಸಾಗಲು ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಮುಖಂಡರಾದ ಸುರೇಶ್, ಹೊನ್ನಯ್ಯ ಮತ್ತು ಗ್ರಾಮಸ್ಥರು ಕ್ರಷರ್ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದರು.
ಗ್ರಾಮದ ಮುಖಂಡ ಹೊನ್ನಯ್ಯ ಗ್ರಾಮದ ಸಮೀಪ ಬಿ.ಎ.ಐ, ಬಾಲಾಜಿ, ಮಾದವರೆಡ್ಡಿ, ವಿ.ಪಿ.ಎಸ್, ಮಾತಾ ಮೈನಿಂಗ್ ಕ್ರಷರ್ ಹಲವು ದಿನಗಳಿಂದ ನಡೆಯುತ್ತಿದೆ. ಆದರೆ ಇತ್ತೀಚಿಗೆ ಕ್ರಷರ್ ಮಾಲೀಕರು ಅಕ್ಕಪಕ್ಕದ ಕೃಷಿ ಜಮೀನುಗಳನ್ನು ಬಾಡಿಗೆ ಪಡೆದು ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ.
ಇದರಿಂದ ಜಮೀನುಗಳಲ್ಲಿ ಬೆಳೆಯುವ ಅಡಿಕೆ, ತೆಂಗು, ಬಾಳೆ ಹಾಗೂ ಇತರೆ ಕೃಷಿ ಬೆಳಿಗೆ ಮಾರಕವಾಗಿ ಬೆಳೆಗಳು ರೈತರ ಕೈಗೆ ಸಿಗದೆ ನಾಶವಾಗುತ್ತಿವೆ, ರೈತರು ಸಾಲ ಸೂಲ ಮಾಡಿ ಬಡ್ಡಿಗೆ ಹಣತಂದು ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಂದ ಬರುವ ಧೂಳು ಹಾಗೂ ವಾಹನಗಳ ಶಬ್ದದಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
ಕಲ್ಲುಗಣಿಗಾರಿಕೆಗೆ ಸ್ಪೋಟಿಸುವ ಶಬ್ದದಿಂದಾಗಿ ಮನೆಗಳು ಬಿರುಕು ಬಿಟ್ಟು ವಾಸಕ್ಕೆ ತೊಂದರೆಯಾಗುತ್ತಿದೆ. ಬಾರಿ ವಾಹನಗಳ ಸಂಚಾರದಿಂದಾಗಿ ಮಹಿಳೆಯರು, ವೃದ್ದರು ಹಾಗೂ ಮಕ್ಕಳು ರಸ್ತೆಯಲ್ಲಿ ತಿರುಗಾಡಲು ತೀವ್ರ ತೊಂದರೆ ಉಂಟಾಗಿದೆ. ಹಾಗಾಗಿ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸರು ಈ ಸಂಬಂಧಪಟ್ಟ ಕ್ರಷರ್ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಹಾಗೂ ಪೊಲೀಸ್ ಠಾಣೆಗೆ ಪ್ರತ್ಯೇಕವಾಗಿ ದೂರು ನೀಡಿದರು.ಪ್ರತಿಭಟನೆಯಲ್ಲಿ ಗೌರಮ್ಮ, ರಾಮಣ್ಣ, ಲೋಕೇಶ್, ನಾಗರಾಜು, ವಾಸು, ಮೂರ್ತಿ, ಶ್ರೀನಿವಾಸ್ಚಾರ್, ಟಿ.ಶೋಭ, ಗಂಗನರಸಯ್ಯ, ನರಸಿಂಹಮೂರ್ತಿ, ಶಾರದಮ್ಮ, ರತ್ನಮ್ಮ, ರಮಾದೇವಿ, ಭಾಗ್ಯಮ್ಮ, ಹರೀಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
