ಹೇಮಾವತಿಗಾಗಿ ಧಿಢೀರ್ ಪ್ರತಿಭಟನೆ

ಕುಣಿಗಲ್

     ಜಿಲ್ಲಾಡಳಿತ ನೀಡಿದ ಭರವಸೆಯಂತೆ ತಾಲ್ಲೂಕಿನ ಕಡೆಗೆ ಹರಿಯುತಿದ್ದ ಹೇಮಾವತಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜಿಲ್ಲಾಡಳಿತದ ವಿರುದ್ದ ಆಕ್ರೋಶಗೊಂಡ ಶಾಸಕ ಡಾ.ರಂಗನಾಥ್ ತಮ್ಮ ಪಕ್ಷದ ಜನಪ್ರತಿನಿಧಿಗಳು ಹಾಗೂ ಬೆಂಬಲಿಗರೊಂದಿಗೆ ತಾಲ್ಲೂಕಿನ ಕುರಡಿಹಳ್ಳಿ ಬಳಿ ಶನಿವಾರ ತುಮಕೂರು-ಮದ್ದೂರು ರಾಜ್ಯ ರಸ್ತೆಯನ್ನು ತಡೆ ಮಾಡಿ ದಿಢೀರ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ ಘಟನೆ ನಡೆಯಿತು.

     ಜಿಲ್ಲಾ ಆಡಳಿತದ ತೀರ್ಮಾನದಂತೆ 15 ದಿನಗಳ ಕಾಲ ಕುಣಿಗಲ್ ಕೆರೆಗೆ ನೀರು ಹರಿಸಬೇಕಾಗಿತ್ತು. ಆದರೆ ಶುಕ್ರವಾರ ಗುಬ್ಬಿ ತಾಲ್ಲೂಕಿನ ರೈತರು ಮಾವಿನಹಳ್ಳಿ ಬಳಿ ಗೇಟ್ ತೆರೆದು ನೀರು ಹರಿಸಿಕೊಂಡರು ಅಲ್ಲದೆ ಶನಿವಾರ ತುರುವೇಕೆರೆ ಎಂ.ಟಿ.ಕೃಷ್ಣಪ್ಪ 24ನೇ ಗೇಟ್ ಬಳಿ ಗೇಟ್ ತೆರೆದು ನೀರು ಹರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ ಶಾಸಕರು ಇದರಿಂದ ನಮ್ಮ ಭಾಗದ ಕುಣಿಗಲ್‍ಗೆ ಬರುತ್ತಿದ್ದ 250 ಕ್ಯೂಸೆಕ್ಸ್ ನೀರು ಬರೀ 150ಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

     ಸಂಜೆ 4.20 ರಿಂದ ಸಂಜೆ 6ಗಂಟೆಯವರೆಗೆ ರಸ್ತೆ ತಡೆ ಮಾಡಿದ್ದು ಸರಿಸುಮಾರು ಒಂದೂವರೆ ಗಂಟೆಗಳಕಾಲ ಪ್ರತಿಭಟನೆ ನಡೆಸಿದ್ದರಿಂದ ತುಮಕೂರು – ಮದ್ದೂರು – ಮೈಸೂರು ಮಾರ್ಗದ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿತ್ತು. ಎರಡೂ ಕಡೆಗಳಲ್ಲಿ ಸುಮಾರು ಒಂದು ಕಿ.ಮೀ ದೂರದವರೆಗೆ ವಾಹನಗಳು ಸರತಿ ಸಾಲಿನೋಪಾದಿಯಲ್ಲಿ ನಿಂತಿದ್ದರಿಂದ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಏನಾಗಿದೆ ಎಂಬುದು ತಿಳಿಯದೆ ಪರದಾಡುವಂತಾಗಿತ್ತು.

ಅಧಿಕಾರಿಗಳ ಮನವೊಲಿಕೆಗೆ ಮಣಿಯದ ಶಾಸಕರು

    ತಹಸೀಲ್ದಾರ್ ವಿ.ಆರ್.ವಿಶ್ವನಾಥ್, ಡಿವೈಎಸ್‍ಪಿ ರಾಮಲಿಂಗೇಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಶಾಸಕ ಡಾ.ರಂಗನಾಥ್ ಅವರ ಮನವೊಲಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗೆ ಒಪ್ಪಿಗೆ ನೀಡುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ತಹಸೀಲ್ದಾರ್ ವಿಶ್ವನಾಥ್ ಮೂರು ಬಾರಿ ಡಿಸಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಲು ಪ್ರಯತ್ನಿಸಿದರೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲು ಶಾಸಕ ಡಾ.ರಂಗನಾಥ್ ನಿರಾಕರಿಸಿದರು.

ಹೇಮಾವತಿ ಲಿಂಕ್ ಕೆನಾಲ್ ತಡೆದರೆ ರಾ.ಹೆ.75ನ್ನು ತಡೆಯುವ ಎಚ್ಚರಿಕೆ

     ಮೇಲ್ಭಾಗದ ತಾಲ್ಲೂಕಿನ ರೈತರು ಹಾಗೂ ರಾಜಕಾರಣಿಗಳು ನಮಗೆ ಬರುವ ನೀರನ್ನು ಬಿಟ್ಟುಕೊಂಡು ಅಡ್ಡಿ ಮಾಡುವ ಕಾರಣ ನಮಗೆ ಲಿಂಕ್ ಕೆನಾಲ್ ಯೋಜನೆಯನ್ನು ಮಂಜೂರಾತಿ ಮಾಡಿಸಿಕೊಳ್ಳಲಾಗಿದೆ. ಆದರೆ ಈಗಿನ ಸರ್ಕಾರದ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಲಿಂಕ್ ಕೆನಾಲ್ ಯೋಜನೆ ರದ್ದು ಮಾಡುವುದಾಗಿ ಹೇಳಿದ್ದಾರೆ ಎಂದು ಕಿಡಿಕಾರಿದ ಶಾಸಕ ಇದರಿಂದ ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಇಂತಹ ಯೋಜನೆಯನ್ನು ರದ್ದು ಮಾಡಲು ಬಿಡುವುದಿಲ್ಲ ಇದಕ್ಕಾಗಿ ಹೋರಾಟಗಳು ನಿರಂತರವಾಗಿ ನಡೆಯಲಿವೆ. ಜೊತೆಗೆ ಬೆಂಗಳೂರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಕೈಬಿಟ್ಟ ಶಾಸಕರು

     ಸಂಜೆಯ ವೇಳೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಈ ತಿಂಗಳ 30ರವರೆಗೂ ಕುಣಿಗಲ್‍ಗೆ ನೀರು ಹರಿಯಲಿದೆ. ಜೊತೆಗೆ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡದೇ ನೀರು ಹರಿಸುವುದಾಗಿ ದೂರವಾಣಿ ಮೂಲಕ ಭರವಸೆ ನೀಡಿದ ನಂತರ ಶಾಸಕ ರಂಗನಾಥ್ ಪ್ರತಿಭಟನೆಯನ್ನು ಕೈಬಿಟ್ಟರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರುಗಳು ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link