ನಗರದಲ್ಲಿ ಮಾಜಿ ಸಂಸದ ಎಸ್.ಪಿ.ಎಂ. ನೇತೃತ್ವ ಧರಣಿ

ತುಮಕೂರು
     ಉತ್ಪಾದನಾ ವೆಚ್ಚದಲ್ಲಿ ಸತತ ಏರಿಕೆ, ಮಳೆಯಿಲ್ಲದೆ ನಿರಂತರ ಬರ, ಅಂತರ್ಜಲ ಕೊರತೆಯ ಸಮಸ್ಯೆಗಳ ನಡುವೆ ತೆಂಗುಬೆಳೆಗಾರರು ತತ್ತರಿಸುತ್ತಿದ್ದು, ತೆಂಗುಬೆಳೆಗಾರರನ್ನು ಹಾಗೂ ತೆಂಗು ಬೆಳೆಯನ್ನು ಸಂರಕ್ಷಿಸಲು ಕ್ವಿಂಟಾಲ್ ಕೊಬರಿಗೆ ತಕ್ಷಣದಿಂದಲೇ ಕನಿಷ್ಟ 20,000 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ತುಮಕೂರಿನ ಮಾಜಿ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಆಗ್ರಹಿಸಿದರು. 
     ಅವರು ಸೋಮವಾರ ಮಧ್ಯಾಹ್ನ ತುಮಕೂರು ನಗರದ ಟೌನ್‍ಹಾಲ್ ವೃತ್ತದಲ್ಲಿ ಕ್ವಿಂಟಾಲ್ ಕೊಬರಿಗೆ 20,000 ರೂ. ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ತಾವು ನಡೆಸಿದ ಧರಣಿ ಸತ್ಯಾಗ್ರಹದ ವೇದಿಕೆಯಲ್ಲೇ ಪತ್ರಕರ್ತರೊಡನೆ ಮಾತನಾಡುತ್ತ ಈ ಒತ್ತಾಯವನ್ನು ಮಾಡಿದರು. 
    ಇಡೀ ದೇಶದಲ್ಲಿ ತೆಂಗು ಬೆಳೆಯುವಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದೆ. ಅದೇ ರೀತಿ ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯು ಅಗ್ರಸ್ಥಾನದಲ್ಲಿದೆ. 1 ಲಕ್ಷ 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಲಕ್ಷಾಂತರ ರೈತರು ತೆಂಗು ಬೆಳೆಯನ್ನು ಆಶ್ರಯಿಸಿದ್ದಾರೆ. ಸತತವಾದ ಬರ ಮತ್ತು ಅಂತರ್ಜಲದ ಕೊರತೆಯಿಂದ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೊಬರಿಯ ಬೆಲೆ 1000 ರೂ.ಗಳಷ್ಟು ಇಳಿಮುಖವಾಗಿದ್ದು, 9 ರಿಂದ 10 ಸಾವಿರ ರೂ. ನಡುವೆ ಬಂದು ನಿಂತಿದೆ. ಇದು ರೈತರನ್ನು ಆತಂಕಕ್ಕೆ ತಳ್ಳಿದೆ.
     ಕೇಂದ್ರದ ಬೆಲೆ ನಿಗದಿ ಸಮಿತಿಯೇ ಒಂದು ಕ್ವಿಂಟಾಲ್ ಕೊಬರಿ ಉತ್ಪಾದನೆಗೆ 11,334 ರೂ. ಆಗುವುದೆಂದು ಲೆಕ್ಕ ಹಾಕಿದೆ. ಹೀಗಿರುವಾಗ ಈಗಿನ ದರ ಅದಕ್ಕಿಂತಲೂ ಕುಸಿದಿದೆ. ರೈತರಿಗೆ ದಿಕ್ಕುಕಾಣದಂತಾಗಿದೆ ಎಂದು ಅವರು ಈಗಿನ ಸ್ಥಿತಿಗತಿಗಳತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದರು.  
ಜಿ.ಐ. ಟ್ಯಾಗ್ ಅವಶ್ಯಕ
    ರೈತರ ಹಿತದೃಷ್ಟಿಯಿಂದ ತೆಂಗಿನ ಸಿಹಿ ನೀರಾ ತೆಗೆಯಲು ಪ್ರೋತ್ಸಾಹಿಸಬೇಕು. ಎಳನೀರಿನ ಬಳಕೆಗೂ ಉತ್ತೇಜಿಸಬೇಕು. ಇದಲ್ಲದೆ ರೈತನ ಉತ್ಪನ್ನಗಳ ಖರೀದಿಯನ್ನು ಆನ್‍ಲೈನ್ ಮಾರ್ಕೆಟಿಂಗ್ ಮೂಲಕ ಆಗುವಂತೆ ಮಾಡಬೇಕು. ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಬೇಕು. ಇವೆಲ್ಲವುಗಳ ಜೊತೆಗೆ ತಿಪಟೂರು ಕೊಬರಿಗೆ ಜಿ.ಐ. ಟ್ಯಾಗ್ ಮಾಡಬೇಕು. ಇದರಿಂದ ತಿಪಟೂರು ಕೊಬರಿಗೆ ವಿಶ್ವಮಾನ್ಯತೆ ದೊರೆತು, ರೈತರಿಗೆ ಒಳ್ಳೆಯ ಬೆಲೆ ಸಿಗುವ ಸಾಧ್ಯತೆಗಳಿವೆ ಎಂಬ ಬೇಡಿಕೆಗಳನ್ನು ಮುಂದಿಟ್ಟರು. 
   ಇವೆಲ್ಲ ಕಾರಣಗಳಿಂದ ಪ್ರಸ್ತುತ ಕೊಬರಿಗೆ ಕ್ವಿಂಟಾಲಿಗೆ 20,000 ರೂ. ಬೆಂಬಲಬೆಲೆ ಘೋಷಿಸಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರವನ್ನು ಸಲ್ಲಿಸಲಾಗುತ್ತಿದೆ. ಕರ್ನಾಟಕದ ಸಂಸತ್ ಸದಸ್ಯರುಗಳೂ ಸಂಸತ್ತಿನಲ್ಲಿ ಈ ವಿಷಯವಾಗಿ ದನಿಯೆತ್ತಬೇಕು.
    ಬೆಂಬಲ ಬೆಲೆಯೊಂದಿಗೆ ತೆಂಗಿನ ಎಲ್ಲ ಉಪ ಉತ್ಪನ್ನಗಳಿಗೆ ಸೂಕ್ತ ಪ್ರೋತ್ಸಾಹ ಒದಗಿಸಬೇಕು ಎಂದು ಒತ್ತಾಯಿಸಿದ ಮುದ್ದಹನುಮೇಗೌಡ, ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. 
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಹ ಧರಣಿಯಲ್ಲಿ ಭಾಗವಹಿಸಿದ್ದು, ಪತ್ರಕರ್ತರೊಡನೆ ಅವರೂ ಮಾತನಾಡುತ್ತ, ಈ ಧರಣಿಯು ಯಾವುದೇ ಪಕ್ಷ ವಿರುದ್ಧ ಅಲ್ಲ; ಬದಲಾಗಿ ರೈತರ ಪರವಾದ ಸಾಂಕೇತಿಕ ಹೋರಾಟವಷ್ಟೇ. ತೆಂಗು ಬೆಳೆಗಾರರ ಸಂಕಷ್ಟವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರ್ಥಮಾಡಿಕೊಂಡು, ರೈತರ ಬೆಂಬಲಕ್ಕೆ ಬರುತ್ತವೆಂದು ನಾವು ನಿರೀಕ್ಷಿಸಿದ್ದೇವೆ.
    ಎಲ್ಲ ಪಕ್ಷಗಳವರೂ ಈ ಸಮಸ್ಯೆ ಬಗ್ಗೆ ಅರ್ಥಮಾಡಿಕೊಂಡಿದ್ದು, ರೈತರಿಗೆ ಒಳ್ಳೆಯದಾಗಬೇಕೆಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಗಳು ಸ್ಪಂದಿಸದಿದ್ದರೆ, ರೈತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. 
ಈ ಧರಣಿಯಲ್ಲಿ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್, ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಶ್ರೀ ಚೈತನ್ಯ ಸಿದ್ಧರಾಮ ಸ್ವಾಮೀಜಿ, ಮುಖಂಡರುಗಳಾದ ಮಾಜಿ ಜಿ.ಪಂ.ಸದಸ್ಯ ಚಿಕ್ಕವೆಂಕಟಯ್ಯ, ಟಿ.ಎಸ್.ನಿರಂಜನ್, ಕಲ್ಲಹಳ್ಳಿ ದೇವರಾಜ್, ಪಾಲಿಕೆ ಸದಸ್ಯ ಸೈಯದ್ ನಯಾಜ್, ಮಾಜಿ ನಗರಸಭಾ ಸದಸ್ಯ ಮೆಹಬೂಬ್ ಪಾಷ, ತು.ಬಿ.ಮಲ್ಲೇಶ್, ಜಿ.ಆರ್.ರವಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link