ಜಿ.ಪಂ. ಸಿಇಒ ಪರವಾಗಿ ಬೀದಿಗಿಳಿದ ಗ್ರಾಮಸ್ಥರು

ದಾವಣಗೆರೆ:

        ಜಿಲ್ಲಾ ಪಂಚಾಯತ್‍ನ ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪನವರ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಹೊರಿಸಿರುವ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ ಎಸಿಬಿಗೆ ಸುಳ್ಳು ದೂರು ನೀಡಿದ್ದಾರೆಂದು ಆರೋಪಿಸಿ ಜಗಳೂರು, ಹರಪನಹಳ್ಳಿ ತಾಲೂಕುಗಳ ವಿವಿಧ ಗ್ರಾಮಗಳ ಗ್ರಾಮಸ್ಥರು ಶುಕ್ರವಾರ ಜಿಲ್ಲಾ ಪಂಚಾಯತ್ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

          ನಗರದ ಹೊರ ವಲಯದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿ ಎದುರು ಜಮಾಯಿಸಿದ ವಿವಿಧ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಷಡಾಕ್ಷರಪ್ಪನವರ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿರುವ ಅಧ್ಯಕ್ಷೆ ಕೆ.ಆರ್.ಜಯಶೀಲಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಬರ ಪೀಡಿತ ಜಗಳೂರು ಹಾಗೂ ಹರಪನಹಳ್ಳಿ ತಾಲೂಕುಗಳ ಜನ ಹಿಂದೆ ಕೆಲಸ ಸಿಗದ ಕಾರಣಕ್ಕೆ ಅಪಾರ ಪ್ರಮಾಣದಲ್ಲಿ ಊರುಗಳನ್ನು ಬಿಟ್ಟು ಉದ್ಯೋಗ ಹರಸಿ ಬೇರೆ ರಾಜ್ಯ, ಜಿಲ್ಲೆಗಳಿಗೆ ಗುಳೆ ಹೋಗುತ್ತಿದ್ದರು. ಆದರೆ, ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕಾರಣಕ್ಕೆ ದುಡಿಯುವ ಕೈಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸಿಗುತ್ತಿರುವ ಕಾರಣ ಗುಳೆ ಹೋಗದೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ದಕ್ಷ ಅಧಿಕಾರಿಗಳ ವಿರುದ್ಧ ಅಧ್ಯಕ್ಷರು ಸುಳ್ಳು ಆರೋಪ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದಕ್ಷ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಅಶ್ವತಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಇವರು ಮಾಡಿರುವ ಶೌಚಾಲಯ ನಿರ್ಮಾಣದ ಕ್ರಾಂತಿಯಿಂದಾಗಿ ಜಿಲ್ಲೆಯ ಬಹುತೇಕ ಗ್ರಾಮಗಳು ಬಯಲು ಶೌಚ ಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ. ಈ ಕಾರಣದಿಂದ ಇಡೀ ರಾಜ್ಯದ ಜನರೇ ಇವರತ್ತ ತಿರುಗಿ ನೋಡುತ್ತಿದ್ದಾರೆ. ಇಂತಹ ಅಧಿಕಾರಿಯ ವಿರುದ್ಧ ಅಧ್ಯಕ್ಷೆ ಕೆ.ಆರ್.ಜಯಶೀಲಾ ಭ್ರಷ್ಟಾಚಾರ ಆರೋಪ ಹೊರಸಿರುವುದರ ಹಿಂದೆ ಹಾಗೂ ಎಸಿಬಿಗೆ ದೂರು ನೀಡಿರುವುದು ದುರುದ್ದೇಶದಿಂದ ಕೂಡಿದೆ ಎಂದು ಕಿಡಿಕಾರಿದರು.
ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತಿತ್ತು. ಆದರೆ, ಇವರು ಅಧಿಕಾರಿಯಾಗಿ ಬಂದಾದ ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾಮಗಾರಿಯಿಂದಾಗಿ ಇಂದು ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಕಡಿಮೆಯಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಮಿಥ್ಯ ಆರೋಪ ಮಾಡುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಯ ಬೆನ್ನಿಗೆ ನಿಲ್ಲುವುದು ಜನರ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ನಾವು ಇಂದು ಪ್ರತಿಭಟಿಸುತ್ತಿದ್ದೇವೆಯೇ ಹೊರತು ಯಾವುದೋ ಪಕ್ಷದ ಪರವಾಗಿ ಬಂದಿಲ್ಲ ಎಂದರು.

          182 ಗ್ರಾಮ ಪಂಚಾಯತ್‍ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ, 14ನೇ ಹಣಕಾಸು ಯೋಜನೆಯಡಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪ ಮಾಡಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೇ? ಯಾರೋ ಕೊಟ್ಟ ಮಾಹಿತಿಯನ್ನು ಇಟ್ಟುಕೊಂಡು, ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ತಮ್ಮ ಮೂಗಿನ ನೇರಕ್ಕೆ ಆರೋಪ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

         ಒಮ್ಮೆಯೂ ಜನರ ಸಮಸ್ಯೆ ಆಲಿಸದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಮಗೆ ಸಲ್ಲಬೇಕಾಗಿರುವುದು ಬಂದಿಲ್ಲ ಎಂಬ ಕಾರಣಕ್ಕೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಸಿಇಒ ಅಶ್ವತಿ ವಿರುದ್ಧ ಹಾಗೂ ಉಪ ಕಾರ್ಯದರ್ಶಿ ಷಡಾಕ್ಷರಪ್ಪನವರ ವಿರುದ್ಧ ಎಸಿಬಿಗೆ ನೀಡಿರುವ ದೂರನ್ನು ತಕ್ಷಣವೇ ವಾಪಾಸ್ ಪಡೆಯಬೇಕು. ಇಲ್ಲದಿದ್ದರೆ, ಅಧ್ಯಕ್ಷರ ನಿವಾಸ ಹಾಗೂ ಆಯಾ ತಾಲೂಕು ಪಂಚಾಯತ್ ಕಚೇರಿಯ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

           ಪ್ರತಿಭಟನೆಯಲ್ಲಿ ನಾಗರಾಜ ಪಲ್ಲಾಗಟ್ಟೆ, ನಾಗಪ್ಪ, ಸಿ.ಮಾರುತಿ, ಎಂ.ಚಂದ್ರಪ್ಪ, ಎಂ.ಎಚ್.ಮಾರುತಿ, ಪ್ರವೀಣ, ಜೆ.ಡಿ.ಪ್ರಕಾಶ, ಕೆ.ವಿ.ಬಸವರಾಜ, ಗೋಡೆ ಪ್ರಕಾಶ, ಎಲ್.ಎಸ್.ಕರಿಬಸಪ್ಪ, ಬಿ.ವಿ.ಸುರೇಶ, ಎಂ.ಎಚ್.ಮಾರುತಿ, ಸುಧಾ, ಜಿ.ಎಂ.ಚನ್ನಪ್ಪ, ಪಿ.ಎಂ.ಸುರೇಶ, ಗೋವಿಂದಪ್ಪ, ಎಸ್.ಟಿ.ಹನುಮಂತಪ್ಪ, ಹೇಮಣ್ಣ, ಕೆ.ವಿ.ವೀರಭದ್ರಪ್ಪ, ದೇವೇಂದ್ರಪ್ಪ, ಜಿ.ನಾಗಪ್ಪ, ರಾಜಪ್ಪ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link