ವಿದ್ಯುತ್ ಇಲಾಖೆಗೆ ಕೆಲಸ ಕೊಟ್ಟ ಅರಣ್ಯ ಇಲಾಖೆ

ತಿಪಟೂರು

    ಸರ್ಕಾರದ ಕೆಲಸಗಳು ಅಧಿಕಾರಿಗಳಿಗೆ ಆಹಾರವಾದರೆ, ಗುತ್ತಿಗೆದಾರರಿಗೆ ಮೃಷ್ಟಾನ್ನ ಭೋಜನವಾಗಿರುತ್ತದೆ ಎಂಬುದನ್ನು ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ನೆಟ್ಟಿರುವ ಗಿಡಗಳನ್ನು ನೋಡಿದರೆ ತಿಳಿಯುತ್ತದೆ.

    ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಮತ್ತು ಶಿವರ ಗ್ರಾಮದ ರಸ್ತೆ ಬದಿಯಲ್ಲಿ ಗಿಡ ನೆಡಲು ಗೆ ಈ ಬಾರಿ ಲಕ್ಷಾಂತರ ರೂಪಾಯಿಯನ್ನು ಗುತ್ತಿಗೆಗೆ ವ್ಯಯಿಸಲಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಾದರೆ ಗಿಡಗಳಿಗೆ ನೀರುಣಿಸಲು ಸಹ ಹೆಚ್ಚು ಹಣ ವ್ಯಯವಾಗುತ್ತದೆ. ಆದರೆ ಈ ಸಸಿಗಳನ್ನು ಎಲ್ಲಿ ನೆಡುತ್ತಿದ್ದಾರೆ ಹಾಗೂ ಯಾವ ಸಸಿಗಳನ್ನು ನೆಡುತ್ತಿದ್ದಾರೆಂಬುದನ್ನು ವೀಕ್ಷಿಸದ ಸಾಮಾಜಿಕ ಅರಣ್ಯಾಧಿಕಾರಿಗಳ ಕರ್ತವ್ಯ ನಿಷ್ಠೆಯ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ಜಗತ್ತೇ ಅರಣ್ಯವನ್ನು ರಕ್ಷಿಸದಿದ್ದರೆ ಉಳಿಗಾಲವಿಲ್ಲವೆಂದು ಹೋರಾಡುತ್ತಿರುವಾಗ, ನಮ್ಮ ಅಧಿಕಾರಿ ಮತ್ತು ಗುತ್ತಿಗೆದಾರರು ತಮಗೆ ಹಣವಾದರೆ ಸಾಕು ಎಂಬಂತೆ ಬೇಕಾಬಿಟ್ಟಿ ಮರಗಳನ್ನು ನೆಟ್ಟಿರುವುದು ಯಾವ ನ್ಯಾಯ?

    ಇನ್ನು ಹೀಗೆ ನೆಟ್ಟಿರುವ ಮರಗಳಲ್ಲಿ ಬೃಹತ್ ಮರಗಳಾದ ನೇರಳೆ, ಬೇವು ಸಹ ಸೇರಿವೆ. ಇವುಗಳು ಬೆಳೆದರೆ ಹೇಳದೆ, ಕೇಳದೆ ವಿದ್ಯುತ್ ಇಲಾಖೆಯವರು ಕಡಿಯುವುದರಲ್ಲಿ ಅನುಮಾನವೆ ಇಲ್ಲವೆಂದು ಕರ್ನಾಟಕ ಕ್ರಾಂತಿರಂಗÀದ ತಾಲ್ಲೂಕು ಅಧ್ಯಕ್ಷ ಧನಂಜಯಗೌಡ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಅರಣ್ಯಾಧಿಕಾರಿಗಳನ್ನು ಕೇಳಿದರೆ ನಾವು ಗಿಡ ನೆಡಲು ಗುತ್ತಿಗೆದಾರರಿಗೆ ನೀಡಿದ್ದೆವು. ಅವರು ತಪ್ಪು ಮಾಡಿದ್ದಾರೆ, ಸರಿಪಡಿಸಲಾಗುವುದೆಂದು ಉತ್ತರಿಸುತ್ತಾರೆ. ಅಂದರೆ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ಮೇಲೆ ಸರ್ಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ಇರುವುದಿಲ್ಲವೆ? ಅಥವಾ ಗುತ್ತಿಗೆ ನೀಡುವಾಗ ನೀಡುವ ಕಮಿಷನ್‍ಗೆ ತಲೆ ಬಾಗಿದ್ದಾರೆಯೆ ಎಂದು ಅವರು ಪ್ರಶ್ನಿಸಿದರು.

   ಈ ಬಗ್ಗೆ ಸಾಮಾಜಿಕ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆಯಲು ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುವುದಿಲ್ಲ. ಸರ್ಕಾರ ಹಣ ಖರ್ಚು ಮಾಡಿ ಅರಣ್ಯ ಬೆಳೆಸಲು ಹೋದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಹಣದ ಜೊತೆಗೆ ಮರಗಳು ನಾಶವಾದರೆ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವುದು ಸತ್ಯವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link