ಹೊಸದುರ್ಗ
ಇತ್ತೀಚೆಗೆ ಪುರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ತಯಾರಿಯಲ್ಲಿ ಉಪವಿಭಾಗಾಧಿಕಾರಿ ವಿ.ಪ್ರಸನ್ನ ಅವರು ಬಾಡಿಗೆ ಪಾವತಿಸದಿರುವ ವಾಣಿಜ್ಯ ಮಳಿಗೆಗಳಿಗೆ ನಿರ್ದಾಕ್ಷಿಣ್ಯವಾಗಿ ಬೀಗ ಜಡಿಯಬೇಕು ಎಂದು ಇಲ್ಲಿನ ಪುರಸಭೆ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಮಿಂಚಿನ ಕಾರ್ಯಾಚರಣೆ ನಡೆಸಿ ಬಾಡಿಗೆ ಪಾವತಿಸದ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ಮಾಡಿ ನಿರ್ದಾಕ್ಷಿಣ್ಯವಾಗಿ ಬೀಗ ಜಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಿಸರ ಅಭಿಯಂತರ ತಿಮ್ಮರಾಜು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿ ಒಟ್ಟು 42 ವಾಣಿಜ್ಯ ಮಳಿಗೆಗಳಿದ್ದು, ವಾರ್ಷಿಕ ? 18 ಲಕ್ಷ ಬಾಡಿಗೆ ವಸೂಲಿಯಾಗಬೇಕಿತ್ತು. ಆದರೆ, ಡಿಸೆಂಬರ್ ಕಳೆಯುತ್ತಾ ಬಂದರೂ ಕೇವಲ ? 6.50 ಲಕ್ಷ ವಸೂಲಿಯಾಗಿದೆ. ಮೂರ್ನಾಲ್ಕು ಬಾರಿ ನೋಟಿಸ್ ಕಳುಹಿಸಿದ್ದರೂ ಯಾವುದೇ ಉತ್ತರ ಬಂದಿರುವುದಿಲ್ಲ. ಸುಮಾರು ಲಕ್ಷಾಂತರ ರೂಗಳು ಬಾಡಿಗೆ ಹಣ ಕಟ್ಟದ 6 ಅಂಗಡಿಗಳನ್ನು ಸಧ್ಯಕ್ಕೆ ಮುಚ್ಚಿಸಿದ್ದೇವೆ. ಬಾಡಿಗೆ ಕಟ್ಟಿದ ಮೇಲೆಯೇ ಬೀಗ ಕೊಡುತ್ತೇವೆ. ಅಲ್ಲಿವರೆಗೂ ಬೀಗ ಕೊಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಕೆಲವು ಮಳಿಗೆ ಮಾಲೀಕರು ಹಾಗೂ ಸಂಭಂದ ಪಟ್ಟವರು ಪುರಸಭೆಗೆ ಅವಸರದಲ್ಲಿ ಧಾವಿಸಿ ಹಣ ಕಟ್ಟಲು ಚಲನ್ ತೆಗಿಸಿ ಬ್ಯಾಂಕಿಗೆ ಜಮಾ ಮಾಡಲು ಅವಸರವಾಗಿ ತೆರಳಿದರು. ನಂತರ ಉಳಿದ ಮಳಿಗೆ ಮಾಲೀಕರು ಅಧಿಕಾರಿಗಳಿಗೆ ಸ್ವಲ್ಪ ಕಾಲಾವಕಾಶ ಕೋರುವ ದೃಶ್ಯ ಕಂಡು ಬಂದಿತು.ದಾಳಿಯಲ್ಲಿ ಅಧಿಕಾರಿಗಳಾದ ಅಜಗರ್ ಅಲಿ, ಪಾಲಯ್ಯ, ರಂಗಸ್ವಾಮಿ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
