ತುಮಕೂರು

ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡ ಅತ್ತೆ ಸೊಸೆ ಇಬ್ಬರು ಸುಟ್ಟು ಕರಕಲಾದ ಘಟನೆ ತುಮಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ತುಮಕೂರಿನ ಗಂಗಸಂದ್ರ ಗ್ರಾಮದಲ್ಲಿ ಪಾರ್ವತಮ್ಮ (75) ಮತ್ತು ರಾಜೇಶ್ವರಿ (45) ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದು, ಶನಿವಾರ ಮಧ್ಯಾಹ್ನ ವೇಳೆಯಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಸಾವಿನಲ್ಲಿ ಅಂತ್ಯವಾಗಿದೆ.
ಶನಿವಾರ ಮಧ್ಯಾಹ್ನ 11.30 ವೇಳೆಯಲ್ಲಿ ಜಗಳ ಮಾಡಿಕೊಂಡ ಅತ್ತೆ ಸೊಸೆ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಸ್ವಲ್ಪ ವೇಳೆಗೆ ಮನೆಯೊಳಗಿಂದ ಕೂಗಾಟ ನರಳಾಟ ಕೇಳಿದ ಸ್ಥಳೀಯರು ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಅವರಿಬ್ಬರು ಮೃತಪಟ್ಟಿದ್ದರು. ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದು, ಈರ್ವರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್ ಪಿ ಡಾ.ಕೋನ ವಂಶಿಕೃಷ್ಣ, ಎಎಸ್ಪಿ ಉದೇಶ್, ಗ್ರಾಮಾಂತರ ಪೋಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಯ್ಯ, ಸಿಪಿಐ ರಾಮಕೃಷ್ಣಯ್ಯ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
