ಹರಪನಹಳ್ಳಿ:

ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರ ಸ್ಥಗಿತಗೊಂಡಿದ್ದರಿಂದ ತೂಕ ಆಗದ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ಎಡಿಬಿ ಕಾಲೇಜು ಬಳಿ ಇರುವ ರಾಗಿ ಖರೀದಿ ಕೇಂದ್ರದಲ್ಲಿ ಭಾನುವಾರ ಸಂಜೆ ಜರುಗಿತು.
ಮಾ.23 ರಿಂದ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಗೊಂಡಿತು.ಸರ್ಕಾರದ ಆದೇಶದ ಪ್ರಕಾರ ಮಾ.31 ರಂದು ಖರೀದಿಗೆ ಅಂತಿಮ ದಿನವಾಗಿತ್ತು. ಆ ಪ್ರಕಾರ 262 ರೈತರು ದಾಖಲೆಗಳೊಂದಿಗೆ ನೊಂದಣಿ ಮಾಡಿಸಿದ್ದರು. ಅದರಲ್ಲಿ ಕಳೆದ 7 ದಿನಗಳಲ್ಲಿ 210 ರೈತರ ರಾಗಿ ಖರೀದಿ ಮಾಡಲಾಗಿತ್ತು.
ಉಳಿದ 52 ರೈತರು ತಮ್ಮ ರಾಗಿಯನ್ನು ವಾಹನಗಳ ಮೂಲಕ ತೆಗೆದುಕೊಂಡು ಬಂದು ಖರೀದಿ ಕೇಂದ್ರದ ಆವರಣದಲ್ಲಿ ನಿಲ್ಲಿಸಿದ್ದರು. ಮಾ.31 ರಂದು ಭಾನುವಾರ ಬೆಳಿಗ್ಗೆ ಖರೀದಿ ಎಂದಿನಿಂದಿನಂತೆ ಆರಂಭಗೊಳ್ಳಲಿಲ್ಲ. ಕಾರಣ ಹಿಂದಿನ ಭಾನುವಾರ ರಜೆ ಮಾಡಿದ್ದರಿಂದ ಇಂದು ಹಾಗೆ ಎಂದು ಹಮಾಲರು ಬಂದಿರಲಿಲ್ಲ.
ರೈತರು ಖರೀದಿಗಾಗಿ ಕಾಯುತ್ತಾ ಕುಳಿತರು. ಅಧಿಕಾರಿಗಳು ಸಹ ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಪೊಲೀಸರು ಆಗಮಿಸಿ ಮದ್ಯಾಹ್ನ 12 ಗಂಟೆಗೆ ಹಮಾಲರನ್ನು ದೂರವಾಣಿ ಮೂಲಕ ಕರೆಯಿಸಿ ತೂಕ ಆರಂಭಿಸಿ ಖರೀದಿಗೆ ಚಾಲನೆ ನೀಡಿಸಿದರು. ಆದರೆ ಸಂಜೆ 6 ಗಂಟೆಗೆ ಕತ್ತಲಾಗಿದೆ ಎಂದು ಹಮಾಲರು ತಮ್ಮ ಕೆಲಸ ಸ್ಥಗಿತಗೊಳಿಸಿದರು.
ಆಗ ಖರೀದಿ ಕೇಂದ್ರದ ಅಧಿಕಾರಿಗಳು ಸಹ ಅಂತಿಮ ದಿನ ಮುಗಿತು, ರಾಗಿ ಖರೀದಿ ಮಾಡುವುದಿಲ್ಲ, ವಾಪಾಸು ತೆಗೆದುಕೊಂಡು ಹೋಗಿ ಎಂದು ತಿಳಿಸಿದರು. ಆಗ ಸಿಟ್ಟಿಗೆದ್ದ ರೈತರು ಪ್ರತಿಭಟನೆಗೆ ಮುಂದಾದರು. ನಮ್ಮ ರಾಗಿ ಖರೀದಿ ಮಾಡುವವರಿಗೂ ಇಲ್ಲೆ ಇರುತ್ತೇವೆ ಎಂದು ಹಠ ಹಿಡಿದರು.
ಅಂತಿಮವಾಗಿ ಅಧಿಕಾರಿಗಳು ಹಾಗೂ ರೈತರ ಮದ್ಯೆ ವಾಗ್ವಾದ ನಡೆದು ಪಂಚಾಯ್ತಿ ಆಗಿ ವ್ಯವಸ್ಥಾಪಕ ರಾಮಚಂದ್ರಪ್ಪ ಅವರು ಬಿಲ್ ಹಾಕುತ್ತೇವೆ, ಗ್ರೇಡ್ ನೋಡಿ ರಾಗಿ ಗುಣ ಮಟ್ಟ ಒಪ್ಪುವುದು ಗ್ರೇಡರ್ ಜವಾಬ್ದಾರಿ ಎಂದರು.
ಗ್ರೇಡರ್ ಕನ್ನಿಹಳ್ಳಿ ಪ್ರಭಾಕರ ಅವರು ಅಂತಿಮ ದಿನ ಮುಗಿತು, ಕೇಂದ್ರ ಮುಂದುವರೆಸಲು ಸರ್ಕಾರದ ಹೊಸ ಆದೇಶ ತನ್ನಿ ಹಾಗಾದರೆ ಗ್ರೇಡ ನೋಡುತ್ತೇನೆ ಎಂದರು. ಹೀಗೆ ಮಾತಿನ ಚಕಮಿಕಿ, ವಾಗ್ವಾದ ಮುಂದುವರೆದು ಅಂತಿಮವಾಗಿ ರಾತ್ರಿ 7.30ಕ್ಕೆ ಹಮಾಲರು ಕೆಲಸ ಮಾಡುವುದಿಲ್ಲ, ವೇಬ್ರಿಡ್ಜ ಗೆ ಹೋಗಿ ತೂಕ ಮಾಡಿಸಿಕೊಂಡು ಬನ್ನಿ, ಬಿಲ್ ಹಾಕುತ್ತೇನೆ, ಎಂದು ವ್ಯವಸ್ಥಾಪಕ ರಾಮಚಂದ್ರಪ್ಪ ಹೇಳಿದರು.
ಗ್ರೇಡರ್ ಪ್ರಭಾಕರ ಅವರು ಬಿಲ್ ಆದರೆ ನಾಳೆ ಬೆಳಿಗ್ಗೆ ಗ್ರೇಡ ನೋಡುತ್ತೇನೆ, ಗುಣ ಮಟ್ಟ ಕಳಪೆ ಇದ್ದರೆ ಬೇರೆ ರಾಗಿ ತರಬೇಕು ಎಂಬ ಷರತ್ತಿನ ಮೇಲೆ ಒಪ್ಪಿದರು. ಒಟ್ಟಿನಲ್ಲಿ ಇನ್ನೂ ಏ.1 ರಂದು ಬೆಳಿಗ್ಗೆ ಈಗ ನೊಂದಣಿ ಯಾಗಿರುವ ರೈತರ ಪೂರ್ಣ ರಾಗಿ ಖರೀದಿ ಆಗುತ್ತದೆಯೇ ಎಂದು ಸ್ಪಷ್ಚ ಚಿತ್ರಣ ಗೊತ್ತಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
