ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ ಮಳೆರಾಯ.!

ದಾವಣಗೆರೆ :

    ಭಾನುವಾರ ಸಂಜೆ ಮೂರು ಘಂಟೆಗಳ ಕಾಲ ಎಡಬಿಡದೇ ಸುಧೀರ್ಘ ಧಾರಕಾರವಾಗಿ ಸುರಿದ ಮಳೆಯು, ಸೋಮವಾರ ದೇವನಗರಿಯ ಜನರಿಗೆ ನೂರಾರು ಸಂಕಷ್ಟಗಳಿಗೆ ತಳ್ಳಿದೆ

   ವೈಜ್ಞಾನಿಕವಾಗಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಹಳೇ ದಾವಣಗೆರೆ ಭಾಗದ ಜನರಂತು ನರಕಯಾತನೆ ಅನುಭವಿಸುವಂತೆ ಮಾಡಿದರೆ, ಹೊಸ ಭಾಗದ ಕೆಲ ಬಡಾವಣೆಗಳ ರಸ್ತೆಯಲ್ಲಿ ಚರಂಡಿ ನೀರು ನಿಂತಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು.ನಿನ್ನೆ ಸುರಿದ ಮಳೆಯು ಜಾಲಿ ನಗರ, ಬೂದಾಳ್ ರಸ್ತೆ, ಎಸ್‍ಪಿಎಸ್ ನಗರ, ಲೀಲಮ್ಮ ತೋಟ, ಶಿವ ನಗರ, ಬಾಷಾ ನಗರ, ಅಹ್ಮದ್ ನಗರ, ಬೀಡಿ ಲೇ ಔಟ್, ಮಂಡಿಪೇಟೆ, ಜಾಮರಾಜ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿ, ಜನರು ಮಮ್ಮಲ ಮರಗುವಂತೆ ಮಾಡಿಬಿಟ್ಟಿತ್ತು.

   ಇನ್ನೂ ಹೊಸ ದಾವಣಗೆರೆ ಭಾಗದಲ್ಲಿರುವ ಬರುವ ವಿನೋಬ ನಗರ, ಯಲ್ಲಮ್ಮ ನಗರ, ಪಿ.ಜೆ. ಬಡಾವಣೆಯ ತಗ್ಗು ಪ್ರದೇಶ, ಕೆಟಿಜೆ ನಗರ, ಭಗತ್‍ಸಿಂಗ್ ನಗರ, ನಿಟ್ಟುವಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು.

    ಇನ್ನೂ ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಳೆಯ ನೀರು ರಸ್ತೆಯಲ್ಲಿ ನಿಂತಿತ್ತು. ಆಂಜನೇಯ ಬಡಾವಣೆ, ತರಳಬಾಳು ನಗರ, ಸ್ವಾಮೀ ವಿವೇಕಾನಂದ ಬಡಾವಣೆ, ಸಿದ್ದವೀರಪ್ಪ ಬಡಾವಣೆಗಳಲ್ಲೂ ರಸ್ತೆಗಳಲ್ಲಿ ನೀರು ನಿಂತಿತ್ತು. ಇದಕ್ಕೆ ಮಹಾನಗರ ಪಾಲಿಕೆ ಚರಂಡಿ ನಿರ್ಮಿಸದೇ ಇರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದರು.

    ಈ ಬಡಾವಣೆಗಳಲ್ಲಿ ಮನೆ ಕಟ್ಟಿಕೊಳ್ಳುವವರು ಮಣ್ಣು, ಕಲ್ಲು ಇನ್ನಿತರೇ ಸಾಮಾಗ್ರಿಗಳು ಚರಂಡಿ ಮೇಲೆ ಹಾಕುವುದರಿಂದ ಚರಂಡಿಯ ನೀರು ಹರಿಯಲು ಅಸಾಧ್ಯವಾಗಿದೆ. ಇಂಥ ಸಮಸ್ಯೆ ಬಗ್ಗೆ ಅಲ್ಲಿನ ನಾಗರಿಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹೇಳಿದ್ದರೂ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲು ಹಿಂದೂ-ಮುಂದೂ ನೋಡುತ್ತಿದ್ದಾರ ಎಂಬ ಆರೋಪ ನಾಗರಿಕರಲ್ಲಿದೆ.

43 ಮನೆಗಳಿಗೆ ಹಾನಿ:

     ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮೂರು ಕಚ್ಚಾ ಮನೆಗಳು ತೀವ್ರ ಹಾನಿ ಮತ್ತು 42 ಕಚ್ಚಾ ಮನೆಗಳು ಭಾಗಶ: ಹಾನಿಯಾಗಿವೆ. ಇದರಿಂದ ಅಂದಾಜು ಏಳು ಲಕ್ಷದಷ್ಟು ನಷ್ಟ ಸಂಭವಿಸಿರುತ್ತದೆ. ವಾರ್ಡ್ 1 ರಿಂದ 45 ವರೆಗೆ ಕೆಲವೊಂದು ಭಾಗದಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಚರಂಡಿಯಲ್ಲಿ ಹೂಳು ತುಂಬಿದೆ.

ರಸ್ತೆಗೆ ಬಂದ ಕಸ:

     ಜಾಲಿ ನಗರ, ಬೂದಾಳ್ ರಸ್ತೆ, ಎಸ್‍ಪಿಎಸ್ ನಗರ, ಬೀಡಿ ಲೇ ಔಟ್, ಇನ್ನೂ ವಿನೋಬ ನಗರ, ಎಲ್ಲಮ್ಮ ನಗರ, ಕೆಟಿಜೆ ನಗರ, ಭಗತ್‍ಸಿಂಗ್ ನಗರ, ನಿಟ್ಟುವಳ್ಳಿ ಭಾಗದಲ್ಲಿ ಅಲ್ಲಲ್ಲಿ ಹಾಕಲಾಗಿದ್ದ ಕಸ ರಸ್ತೆ ತುಂಬ ಹರಡಿ ವಾಹನ ಸಂಚಾರರು ಬಿದ್ದ ಘಟನೆಗಳು ನಡೆದಿದೆ. ಮೊದಲೇ ಹಂದಿಗಳ ಹಾವಳಿ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮಳೆಯಿಂದ ಬಂದ ಕಸ ರಸ್ತೆಯಲ್ಲಿ ಹರಡಿದ್ದವು. ಮಕ್ಕಳು, ವಾಹನ ಸವಾರರು ಇಂಥ ಜಾಗದಲ್ಲಿ ಜೀವವನ್ನು ಕೈಯಲ್ಲಿಯೇ ಹಿಡಿದುಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆಸರು ಗದ್ದೆಯಾದ ನಿಲ್ದಾಣ:

    ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ ನೀರು ತುಂಬಿದ್ದರಿಂದ ಸೋಮವಾರ ಇಡೀ ನಿಲ್ದಾಣವು ಕೆಸರು ಗದ್ದೆಯಾಗಿ ಮಾರ್ಪಟ್ಟಿತ್ತು. ನಿಲ್ಲಾಣದಲ್ಲಿ ಮೊಳಕಾಲು ವರೆಗೆ ಕೆಸರು ಇತ್ತು. ಹೀಗಾಗಿ ಪ್ರಯಾಣಿಕರು ನಡೆಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಈ ಬಸ್‍ನಿಲ್ದಾಣ ತಗ್ಗು ಪ್ರದೇಶದಲ್ಲಿ ಇರುವುದರಿಂದ ಭಗತ್‍ಸಿಂಗ್ ನಗರ, ಕೆಟಿಜೆ ನಗರದ ನೀರು ಹರಿದು ಬರುತ್ತದೆ. ಇದರಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನೀರುಮಯವಾಗುತ್ತದೆ. ಇದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಾಗರಿಕರ ಆರೋಪ

ಜಲಾವೃತ:

    ಧಾರಾಕಾರ ಮಳೆಗೆ ಅಕ್ಷರಶ ನಲುಗಿರುವುದು ಎಸ್‍ಜೆಎಂ ಮತ್ತು ಎಸ್.ಎಂ. ಕೃಷ್ಣನಗರದ ನಿವಾಸಿಗಳು ಈ ಭಾಗದಲ್ಲಿ ಶೇ.80ರಷ್ಟು ಮನೆಗಳು ಜಲಾವೃತಗೊಂಡಿದ್ದವು. ಮಳೆಯ ನೀರು ಮನೆಗೆ ಹರಿದಿದ್ದರಿಂದ ಯಾರೋಬ್ಬರೂ ನಿದ್ರೆ ಮಾಡದೇ ಮನೆಯಲ್ಲಿದ್ದ ನೀರನ್ನು ಹೊರಹಾಕುವುದೇ ಕೆಲಸ ಮಾಡಿಕೊಂಡಿದ್ದರು. ಇನ್ನೂ ಜೋರಾಗಿ ಮಳೆ ಬಂದರೆ ಏನು ಗತಿ ಎಂದು ಆತಂಕದಲ್ಲೇ ಇದ್ದರು.

ಸಂಚಾರಕ್ಕೆ ಕ್ರಮ:

      ದಾವಣಗೆರೆ ನಗರದಲ್ಲಿ ಬಿದ್ದ ಭಾರಿ ಮಳೆಯಿಂದ ಕೆಲವೊಂದು ಕಡೆ ನೀರು ನುಗ್ಗಿದ್ದು, ಚರಂಡಿಗಳನ್ನು ಸ್ಚಚ್ಛಗೊಳಿಸಿ ನೀರು ಹರಿಯುವಂತೆ ಮಾಡಲಾಗಿದೆ ಹಾಗೂ ಕೆಲವೊಂದು ಕಡೆ ನಿಂತ ನೀರನ್ನು ಮಹಾನಗರ ಪಾಲಿಕೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರದಿಂದ ನೀರನ್ನು ತೆಗೆಸಿ ರಸ್ತೆ ಸಂಚಾರ ಸುಗಮವಾಗಿ ನಡೆಯುವಂತೆ ಕ್ರಮವಹಿಸಲಾಗಿದೆ.

     ಛಲವಾದಿ ಕೇರಿಯಲ್ಲಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ಮಳೆಯ ನೀರು ಉಕ್ಕಿ ಹರಿದಿದೆ. ತಗ್ಗು ಪ್ರದೇಶದಲ್ಲಿರುವ ನೆರಕೆ ಗುಡಿಸಲು ಸಂಪೂರ್ಣ ನೀರಿನಲ್ಲಿ ಅವೃತ್ತವಾಗಿದೆ. ಮನೆಯೊಡತಿ ಕೆ.ಎಸ್. ಸುಮಾ ಮಾತ್ರ ಕೆಸರಿನಂತಿದ್ದ ತನ್ನ ಮನೆಯನ್ನು ಸ್ವಚ್ಛ ಮಾಡುತ್ತಲೇ ಮಳೆಗೆ ಶಾಪ ಹಾಕುತ್ತಿದ್ದರು. ತುಂಡಾಗಿದ್ದ ಕಂಬ ಸುಮಾರ ಅವರ ಪಕ್ಕದಲ್ಲಿದ್ದ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಆ ಕಂಬಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಹಾಕಿರಲಿಲ್ಲ. ಆಗಲೇ ಆ ವಿದ್ಯುತ್ ಕಂಬ ತುಂಡಾಗಿತ್ತು. ಒಂದು ವೇಳೆ ಅದರಲ್ಲಿ ವಿದ್ಯುತ್ ಇದ್ದಿದ್ದರೇ ಆಗುತ್ತಿದ್ದ ಅನಾಹುತ ಉಹಿಸಲು ಅಸಾಧ್ಯವಾಗಿತ್ತು.

ಪರ್ಯಾಯ ವ್ಯವಸ್ಥೆ :

     ಜಾಲಿ ನಗರದ ಮೊದಲನೇ ಮೇನ್ ಮೊದಲನೇ ಕ್ರಾಸ್‍ನಲ್ಲಿನ ಬಹುಪಾಲು ಮನೆಗಳಲ್ಲಿ ನೀರು ತುಂಬಿತ್ತು. ಎಲ್ಲರ ಮನೆಯಲ್ಲಿ ನೀರು ನುಗ್ಗಿದ್ದರಿಂದ ನಾವುಗಳು ಮನೆಯಲ್ಲಿ ಮಲಗಲು ಅಸಾಧ್ಯವಾಗಿತ್ತು. ಹೀಗಾಗಿ, ನಮ್ಮ ರಸ್ತೆಯಲ್ಲಿನ ಮಹಡಿ ಮನೆಗಳಲ್ಲಿ ಮಲುಗುವ ಪರಿಸ್ಥಿತಿ ಉಂಟಾಗಿತ್ತು. ಪಾಲಿಕೆ ಅಧಿಕಾರಿಗಳು ಮನೆ ಬಂದಾಗ ಮಾತ್ರ ಬರುತ್ತಾರೆ. ಆದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ವಿರೂಪಾಕ್ಷ ಸುಂಕಪುರ್, ಸುಮಿತ್ರಮ್ಮ ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link