ಹುಳಿಯಾರು:
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಳೆದ ಹತ್ತನ್ನೆರಡು ದಿನಗಳಿಂದ ಮೇಲಿಂದ ಮೇಲೆ ಜಡಿ ಮಳೆ ಸುರಿಯುತ್ತಿರುವ ಪರಿಣಾಮ ಹೆಸರು ಬೆಳೆ ಕೊಯ್ಲಿಗೆ ಅಡ್ಡಿಯಾಗಿದೆ.ಈ ಬಾರಿಯ ಪೂರ್ವ ಮುಂಗಾರು ರೈತರಲ್ಲಿ ಸಂತಸ ಮೂಡಿಸಿತು. ವಾಣಿಜ್ಯ ಬೆಳೆ ಹೆಸರನ್ನು ಖುಷಿಯಿಂದಲೇ ಬಿತ್ತನೆ ಮಾಡಿದರು. ಕೆಲ ಕಡೆ ಮಳೆ ಕೊರತೆ, ಹಳದಿ ಎಲೆರೋಗ ಸೇರಿದಂತೆ ವಿವಿಧ ಸಮಸ್ಯೆಗಳ ಮಧ್ಯೆ ಬೆಳೆ ತಕ್ಕಮಟ್ಟಿಗೆ ಬಂದಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ಅರ್ಲಿ ಬಿತ್ತನೆ ಮಾಡಿದ ಪರಿಣಾಮ ಈಗಾಗಲೇ ಈ ಭಾಗದಲ್ಲಿ ಕಣದ ಕೆಲಸ ಮುಗಿದಿದೆ. ಆದರೆ ಹುಳಿಯಾರು, ಕಂದಿಕೆರೆ ಹೋಬಳಿಯಲ್ಲಿ ಬಿತ್ತನೆ ಕಾರ್ಯ ಲೇಟಾದ ಪರಿಣಾಣ ಕಣದ ಕೆಲಸವೂ ಲೇಟಾಗಿದೆ.
ಕೊಯ್ಲು ಹಂತದಲ್ಲಿರುವ ಗ್ರಾಮಗಳಲ್ಲಿ ಒಂದು ವಾರದಿಂದ ಮೋಡ ಮುಚ್ಚಿದ ವಾತಾವರಣವಿದೆ. ಆಗಾಗ ಮಳೆ ಬರುತ್ತಿರುವುದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಮಳೆಯಲ್ಲಿ ಕಾಯಿ ಬಿಡಿಸಿ ಅದನ್ನು ಬೇರ್ಪಡಿಸುವುದು ದೊಡ್ಡ ಸವಾಲಾಗಿದೆ.ಇನ್ನು ಕೂಯ್ಲಾಗಿರುವ ಹೆಸರು ಗಿಡವನ್ನು ಜಡಿ ಮಳೆಯಿಂದ ಕಾಪಾಡಲು ರೈತರು ಪರದಾಡುತ್ತಿದ್ದಾರೆ. ಮಳೆ ಬಿಡುವು ಕೊಟ್ಟಾಗ ಕಣದ ಕೆಲಸ ಮಾಡುವುದು ಮಳೆ ಬಂದಾಗ ಟಾರ್ಪಲ್ ಅಡಿ ಹೆಸರು ಗಿಡ ಮುಚ್ಚಿಕ್ಕುತ್ತಿದ್ದಾರೆ.
ಹೆಸರಿನ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಜೊತೆಗೆ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ ಸಹ ಸಮೀಸಪಿಸುತ್ತಿದೆ. ಹಾಗಾಗಿ ತುರ್ತಾಗಿ ಕೊಯ್ಲು ಮಾಡಿ, ಮಾರುಕಟ್ಟೆಗೆ ಕಳಿಸಿ ನಾಲ್ಕು ಕಾಸು ಎಣಿಸಿಕೊಳ್ಳುವ ರೈತನ ಆಸೆಗೆ ಮಳೆ ಅಡ್ಡಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ