ತುಮಕೂರು

ದಿಢೀರನೆ ಸುರಿದ ಭಾರಿ ಮಳೆಯ ಪರಿಣಾಮ ಮನೆಯೊಂದಕ್ಕೆ ಕೆಸರು ಮಿಶ್ರಿತ ಮಳೆ ನೀರು ನುಗ್ಗಿ ಮನೆಯವರು ಸಂಕಷ್ಟಕ್ಕೀಡಾದ ಘಟನೆ ನಡೆದಿದೆ.ತುಮಕೂರು ನಗರದ ಶಿರಾಗೇಟ್ ಬಳಿ ಇರುವ ಅಮಾನಿಕೆರೆಯ ದೊಡ್ಡಕೋಡಿ (ಕೋಡಿಹಳ್ಳ) ಬಳಿ ಈ ಪ್ರಸಂಗ ಅ.1 ರಂದು ರಾತ್ರಿ ಜರುಗಿದೆ.
ಮಳೆ ಸುರಿಯ ತೊಡಗಿದಂತೆ ಇತ್ತ ಮನೆಯೊಳಕ್ಕೆ ಕೆಸರು ನೀರು ನುಗ್ಗಿದೆ. ಸುಮಾರು 2 ಅಡಿಗಳಷ್ಟು ಕೆಸರು ನೀರು ಮನೆಯ ಅಡುಗೆ ಮನೆ ಸೇರಿ ಇಡೀ ಮನೆಯ ತುಂಬ ತುಂಬಿಕೊಂಡಿದ್ದರಿಂದ ಆ ಮನೆಯವರು ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ. ಹಾಸಿಗೆಗಳು ಸೇರಿ ಅನೇಕ ವಸ್ತುಗಳು ಕೆಸರಿನಿಂದ ಹಾನಿಗೊಂಡವು.
ಕಳೆದ ಒಂದು ತಿಂಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲೂ ಇದೇ ರೀತಿ ಆಗಿದ್ದು, ಇದೀಗ ಎರಡನೇ ಬಾರಿ ಈ ಘಟನೆ ನಡೆದಿದ್ದು, ಆ ಮನೆಯವರನ್ನು ಕಂಗಾಲಾಗಿಸಿದೆ. ಅಮಾನಿಕೆರೆಯ ಏರಿಯ ಬಳಿ ಸ್ಮಾರ್ಟ್ಸಿಟಿ ವತಿಯ ಕಾಮಗಾರಿ ನಡೆಯುತ್ತಿದ್ದು, ಆ ಕಾಮಗಾರಿಯನ್ನು ಆರಂಭಿಸಿದ ಬಳಿಕ ಈ ಸಮಸ್ಯೆ ಎದುರಾಗತೊಡಗಿದೆ ಎಂದು ಮನೆಯವರು ದೂರುತ್ತಿದ್ದಾರೆ. ಇದಕ್ಕೆ ಮೊದಲು ಇಂತಹ ಸಮಸ್ಯೆಯೇ ಇರಲಿಲ್ಲ. ಆದರೆ ಕೆರೆ ಏರಿ ಬಳಿ ಕಾಮಗಾರಿ ಆರಂಭಿಸಿದ ಬಳಿಕ ಇಲ್ಲಿ ನೀರು ನುಗ್ಗುತ್ತಿದೆ. ಅಲ್ಲಿ ಹೋಗಿ ವಿಚಾರಿಸಿದಾಗ ಇದು ಸ್ಮಾರ್ಟ್ಸಿಟಿ ಕಾಮಗಾರಿ ಎಂದು ಹೇಳಿದ್ದಾರೆ. ಯಾರೂ ಸಹ ಪರಿಶೀಲಿಸುವವರು ಇಲ್ಲವೇ ಎಂದು ಆ ಮನೆಯವರು ಪ್ರಶ್ನಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
