ಹಿರಿಯೂರು :
ಹುಟ್ಟಿನಿಂದ ಕೃಷಿಕರಾಗಿರುವವರೂ ಕೂಡ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸಂಕಷ್ಟಗಳು, ಮಳೆಯ ಅಭಾವ, ಬೆಲೆ ಕುಸಿತ ಇದಕ್ಕೆ ಕಾರಣವಿರಬಹುದು ಎಂದು ಚಿತ್ರದುರ್ಗ ಮುರುಘಾಮoದ ಶಿವಮೂರ್ತಿ ಮುರುಘಾಶರಣರು ಹೇಳಿದರು.
ತಾಲ್ಲೂಕಿನ ಬಬ್ಬೂರು ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರನ್ನು ಮರಳಿ ಕೃಷಿಯತ್ತ ಬರುವಂತೆ ಮಾಡಲು ಕೃಷಿಯನ್ನು ಲಾಭದಾಯಕ ಮಾಡಬೇಕು. ಬಯಲುಸೀಮೆಯ ಜಿಲ್ಲೆಗಳಿಗೆ ಪೂರಕವಾದ ತಳಿಗಳ ಸಂಶೋಧನೆ ನಡೆಯಬೇಕು. ಕಡಿಮೆ ಮಳೆಯಲ್ಲೂ ಬೆಳೆ ತೆಗೆಯುವಂತಾಗಬೇಕು .ಜತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಗುರುತಿಸಬೇಕು. ಹೊಸ ಹೊಸ ಆವಿಷ್ಕಾರಗಳೊಂದಿಗೆ ರೈತರ ಬದುಕು ಹಸನುಗೊಳಿಸುವ ಕೆಲಸವನ್ನು ಕೃಷಿ ಮತ್ತು ತೋಟಗಾರಿಕೆ ಪದವೀಧರರು ಮಾಡಬೇಕು ಎಂದು ಶರಣರು ಸಲಹೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ನಾಯಕ್ ಮಾತನಾಡಿ, ರಾಜ್ಯದ ಮಧ್ಯಭಾಗದಲ್ಲಿರುವ ಈ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯಮಟ್ಟದ ಕಿರಿಯ ಸಂಶೋಧನಾ ಫೆಲೋಷಿಪ್ ಪರೀಕ್ಷೆಯಲ್ಲಿ ಉನ್ನತಸ್ಥಾನ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದರು.
ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್.ಗೌಡ, ವಿದ್ಯಾರ್ಥಿಗಳ ಕಲ್ಯಾಣ ನಿರ್ದೇಶಕ ಡಾ.ಪಿ.ನಟರಾಜ್, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಡಾ.ಎಚ್.ನಾರಾಯಣಸ್ವಾಮಿ ಮಾತನಾಡಿದರು. ಡಾ.ಸುರೇಶ್ ಏಕಬೋಟೆ ಕಾಲೇಜಿನ ವಾರ್ಷಿಕ ವರದಿ, ವಿದ್ಯಾರ್ಥಿ ನಿಲಯ ಪಾಲಕ ಡಾ.ಅಮರೇಶ್ ಕುಮಾರ್ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದ ಪಾಲಕಿ ಧನಲಕ್ಷ್ಮೀ ನಿಲಯಗಳ ವಾರ್ಷಿಕ ವರದಿ ಮಂಡಿಸಿದರು. ಶಿವಮೂರ್ತಿ ಶರಣರು ‘ಹೊಂಬಾಳೆ’ ಹೆಸರಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದರು.ಡಾ.ಅಶೋಕ್ ಸ್ವಾಗತಿಸಿದರು. ಡಾ.ರವೀಶ್ ವಂದಿಸಿದರು.ಪೂಜಾ ಮತ್ತು ಸಚಿನ್ ಕಾರ್ಯಕ್ರಮ ನಿರೂಪಿಸಿದರು.