ಹುಳಿಯಾರು
ಹುಳಿಯಾರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಒಂದಾದ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ ಸಿಸ್ಟನ್ ಬಳಿ ಸ್ವಚ್ಚತೆ ಕಾಪಾಡುವಂತೆ ಹುಳಿಯಾರು ಪಪಂ ಮುಖ್ಯಾಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ ಕುಮಾರ್ ರಸ್ತೆಗೆ ಹೊಂದಿಕೊಂಡಿರುವ ದುರ್ಗಮ್ಮನಗುಡಿ ಬೀದಿನ ನಿವಾಸಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಎಸ್ಟಿಡಿ ಶಂಕರಣ್ಣ ಅವರ ಅಂಗಡಿ ಎದುರಿಗೆ ಸಿಸ್ಟನ್ ಇಡಲಾಗಿದೆ. ಆದರೆ ನಲ್ಲಿಯಲ್ಲಿ ಲೀಕೇಜ್ ಆಗುವ ನೀರು ಸೇರಿದಂತೆ ಸಾರ್ವಜನಿಕರು ನೀರು ಹಿಡಿಯುವಾಗ ಹರಿಯುವ, ಕೈಕಾಲು ತೊಳೆದಾಗ ಹರಿಯುವ ವ್ಯರ್ಥ ನೀರು ಹೋಗಲು ಹಿಂಗುಗುಂಡಿ ನಿರ್ಮಿಸಬೇಕಿತ್ತು. ಆದರೆ ಹಿಂಗುಗುಂಡಿ ನಿರ್ಮಿಸುವುದಿರಲಿ ವ್ಯರ್ಥ ನೀರು ಚರಂಡಿಗೆ ಹೋಗುವಂತೆ ಸಹ ಮಾಡದೆ ಪಪಂ ನಿರ್ಲಕ್ಷ್ಯಿಸಿದೆ.
ಪರಿಣಾಮ ಸಿಸ್ಟನ್ ಬಳಿ ನೀರು ನಿಲ್ಲುವ ಜೊತೆಗೆ ಕೆಲವರು ಅಲ್ಲಿಯೇ ತ್ಯಾಜ್ಯ ಮತ್ತು ಕಸ ಹಾಕುತ್ತಿರುವುದರಿಂದ ಈ ಪ್ರದೇಶ ಅನೈರ್ಮಲ್ಯ ತಾಣವಾಗಿ ಮಾರ್ಪಟ್ಟಿದೆ. ಹಂದಿಗಳು ಮತ್ತು ಸೊಳ್ಳೆಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಹಾಗಾಗಿ ನೀರು ಹಿಡಿಯಲು ಬರುವ ಸಾರ್ವಜನಿಕರಿಗೆ ದುರ್ವಾಸನೆ, ಸೊಳ್ಳೆಗಳ ಕಿರಿಕಿರಿ ಅನುಭವಿಸುವ ಕರ್ಮ ನಿರ್ಮಾಣವಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತ್ತಾಗಿದೆ. ಪಕ್ಕದಲ್ಲಿ ಶಾಲೆಯಿದ್ದು ವಿದ್ಯಾರ್ಥಿಗಳು ದುರ್ವಾಸನೆ, ಸೊಳ್ಳೆಗಳ ಕಾಟ ಸಹಿಸಿಕೊಳ್ಳಬೇಕಿದೆ
ಇಲ್ಲಿನ ನಿವಾಸಿಗಳು ಮೊದಲು ನಿತ್ಯ ಇಲ್ಲಿ ನೀರು ಹಿಡಿಯುತ್ತಿದ್ದರು. ಆದರೆ ಈ ಅನೈರ್ಮಲ್ಯ ಕಂಡು ತೀರಾ ಹಾಹಾಕಾರ ಇದ್ದಾಗಷ್ಟೆ ನೀರು ಹಿಡಿಯಲು ಬರುತ್ತಿದ್ದಾರೆ. ಇನ್ನು ಈ ಪಾದಚಾರಿಗಳು ಇತ್ತ ತಿರುಗಿಯೂ ಸಹ ನೋಡದಂತೆ ಓಡಾಡುತ್ತಿದ್ದಾರೆ. ಶಾಲಾ ಮಕ್ಕಳು ಹಮದಿ, ಸೊಳ್ಳೆಗಳಿಗೆ ಹೆದರಿ ಇತ್ತ ತಲೆಯಾಕದಂತ್ತಾಗಿದೆ. ಒಟ್ಟಾರೆ ಲಕ್ಷಾಂತರ ರೂ. ವೆಚ್ಚ ಮಾಡಿ ಸಿಸ್ಟನ್ ನಿರ್ಮಿಸಿದ್ದರೂ ನೈರ್ಮಲ್ಯ ಕಾಪಾಡದ ಕಾರಣ ಸಾರ್ವಜನಿಕರ ಉಪಯೋಗ ಅಷ್ಟಕಷ್ಟೆ ಎನ್ನುವಂತ್ತಾಗಿದೆ.
ಈ ರಸ್ತೆಯಲ್ಲಿ ಪಪಂ ಅಧಿಕಾರಿಗಳು, ಸದಸ್ಯರುಗಳು ಸೇರಿದಂತೆ ಊರಿನ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರಾದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇನ್ನಾದರೂ ಪಪಂ ಮುಖ್ಯಾಧಿಕಾರಿಗಳು ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
