ಬೆಂಗಳೂರು
ಮರ್ಯಾದಾ ಪುರುಷ ಪುರುಷೋತ್ತಮ ಶ್ರೀರಾಮನ ಜನ್ಮದಿನವಾದ ಶನಿವಾರ ನಗರ ಸೇರಿದಂತೆ ರಾಜ್ಯಾದ್ಯಾಂತ ಶ್ರೀರಾಮನವಮಿ ಸಂಭ್ರಮ ಶ್ರೀರಾಮನ ದೇವಾಲಯವು ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು ದೇವರ ಪೂಜೆ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸುಂಬರಿ, ರಸಾಯನ ವಿತರಿಸಲಾಯಿತು
ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ರಾಮನವಮಿಯ ಪ್ರಯುಕ್ತ ಶ್ರೀರಾಮ ತಾರಕ ಹವನ, ಭಜನೆ, ರಾಮಾಯಣ ಪಾರಾಯಣ, ಶ್ರೀರಾಮಪಟ್ಟಾಭಿಷೇಕ ಕುರಿತ ಪ್ರವಚನಗಳು ನಡೆದಿವೆ. ದೇವರ ನಾಮ, ಭಕ್ತಿ ಗೀತೆಗಳು, ಹರಿದಾಸರ ಕೀರ್ತನೆಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದು ಶ್ರೀರಾಮ ಭಕ್ತರು ರಾಮದೇವರ ಸ್ಮರಣೆಯಲ್ಲಿ ಮಿಂದೆದ್ದಿದ್ದಾರೆ.
ಸಂಜೆ ಶ್ರೀರಾಮದೇವರ ಕುರಿತು ವಿಶೇಷ ಸಂಗೀತ ಕಚೇರಿಗಳನ್ನು ಆಡಳಿತ ಮಂಡಳಿಗಳು ಆಯೋಜಿಸಿವೆ. ಚಾಮರಾಜಪೇಟೆ, ಶ್ರೀರಾಮ ಸೇವಾ ಮಂಡಳಿಯು 81ನೇ ಶ್ರೀರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವವನ್ನು ಆಯೋಜಿಸಿದೆ.
ರಾಜಾಜಿನಗರದ ರಾಮದೇವರ ದೇವಾಲಯ ಸಂಪಂಗಿ ರಾಮನಗರದ ಕೋದಂಡರಾಮ ದೇವಾಲಯ, ಗಿರಿನಗರ, ಕತ್ರಿಗುಪ್ಪೆಯಲ್ಲಿರುವ ಶ್ರೀಕಲ್ಯಾಣ ರಾಮಚಂದ್ರಸ್ವಾಮಿ ದೇವಸ್ಥಾನ, ಜಯನಗರದಲ್ಲಿರುವ ಶ್ರೀರಾಮ ಮಂಡಳಿಯ 51ನೇ ವರ್ಷದ ಶ್ರೀರಾಮೋತ್ಸವ ದೇವಾಲಯಗಳಲ್ಲೂ ರಾಮದೇವರ ಸ್ಮರಣೆ ನಡೆದಿದೆ.
ಹೆಚ್.ಎಂ.ಟಿ ಬಡಾವಣೆ ಆರ್ಟಿ ನಗರದಲ್ಲಿರುವ ಶ್ರೀ ಶಿರಡಿ ಸಾಯಿಮಂದಿರದಲ್ಲಿ 14ನೇ ವಾರ್ಷಿಕೋತ್ಸವ ಮತ್ತು ಸಾಯಿಬಾಬಾ ಅವರ ಜನ್ಮದಿನದ ಪ್ರಯುಕ್ತ ಇಂದು ಬೆಳಿಗ್ಗೆ ಅಭಿಷೇಕ ಕಾರ್ಯಕ್ರಮ, ಮಹಾಮಂಗಳಾರತಿ, ಗಣಹೋಮ, ರಾಮತಾರಕ ಹೋಮ, ದತ್ತಾತ್ರೇಯ ಹೋಮ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ 6 ಗಂಟೆಗೆ ಕೆ.ಎಂ. ಕುಸುಮ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ನಗರದ ರಸ್ತೆಗಳಲ್ಲಿ ಶ್ರೀರಾಮ ಭಕ್ತರು ದಾರಿಹೋಕರಿಗೆ ಮಜ್ಜಿಗೆ, ಪಾನಕ, ಕೋಸುಂಬರಿ, ರಸಾಯನ ವಿತರಿಸಿ ಪುನೀತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
