ಬೆಂಗಳೂರು
ಸೌಹಾರ್ದ ಮಾತುಕತೆ ರಾಜಿ ಸಂಧಾನಗಳ ಮೂಲಕ ತಮ್ಮಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವನ್ನು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಅವರು ಪ್ರತಿಪಾದಿಸಿದ್ದಾರೆ.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಕೈಗಾರಿಕೆ ಮತ್ತು ಕಾರ್ಮಿಕರ ಒಕ್ಕೂಟ ವತಿಯಿಂದ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಸಮಸ್ಯೆಗಳ ಇತ್ಯರ್ಥಕ್ಕೆ ಕೈಗಾರಿಕೆಗಳ ಆಡಳಿತ ಮಂಡಳಿ ಹಾಗೂ ಕಾರ್ಮಿಕ ವರ್ಗ ಹೆಚ್ಚು ಆದ್ಯತೆ ನೀಡಬೇಕೆಂದು ಹೇಳಿದರು.
ಸರ್ಕಾರವು ಕೈಗಾರಿಕೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರಿಗೆ ಹಲವು ಹಕ್ಕುಗಳನ್ನು ನೀಡಿದೆ. ಹಕ್ಕುಗಳ ವಂಚನೆಗೆ ಕಾನೂನು ಹೋರಾಟದ ಅವಕಾಶ ಕಲ್ಪಿಸಲಾಗಿದೆ. ಆದರೆ, ಮಾತುಕತೆ ಮೂಲಕ ಆಡಳಿತ ಮಂಡಳಿ ಹಾಗೂ ಕಾರ್ಮಿಕ ವರ್ಗ ನ್ಯಾಯಸಮ್ಮತವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಮಿಕರು ಮತ್ತು ಕೈಗಾರಿಕಾ ಆಡಳಿತ ಮಂಡಳಿಯ ಸಹಕಾರದಿಂದ ಇಬ್ಬರಿಗೂ ಹೆಚ್ಚು ಲಾಭವಾಗಲಿದೆ. ಕಾರ್ಮಿಕರು ಹಾಗೂ ಆಡಳಿತ ಮಂಡಳಿ ಬೆಳವಣಿಗೆಯಿಂದ ಕೈಗಾರಿಕೆಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಕೈಗಾರಿಕೆಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಇದಕ್ಕೆಲ್ಲಾ ಸಹಮತ ಬಹುಮುಖ್ಯ ಎಂದರು.
ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಕಾರ್ಮಿಕರು ತಮ್ಮ ಮಕ್ಕಳನ್ನು ಕಾರ್ಮಿಕರನ್ನಾಗಿ ಸುವ ಆಲೋಚನೆ ಕೈಬಿಟ್ಟು ಕೈಗಾರಿಕೆಗಳ ಮಾಲೀಕರನ್ನಾಗಿಸುವ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂವಿಧಾನಬದ್ಧವಾಗಿ ಕಾರ್ಮಿಕರಿಗೆ ಅನೇಕ ಹಕ್ಕುಗಳನ್ನು ನೀಡಲಾಗಿದೆ. ಬಹುಮುಖ್ಯವಾಗಿ ಸಂವಿಧಾನದ 4ನೇ ಪರಿಚ್ಛೇಧದಲ್ಲಿರುವ ರಾಜನಿರ್ದೇಶಕ ತತ್ವಗಳ ಮೂಲಕ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸೂಚಿಸಲಾಗಿದೆ.ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಇದ್ದ ಕಾರ್ಮಿಕರ ಪರಿಸ್ಥಿತಿಗೂ, ಇಂದಿನ ಕಾರ್ಮಿಕರ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಕೈಗಾರಿಕೆಗಳ ವಿವಾದ ಇತ್ಯರ್ಥಕ್ಕಾಗಿ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯಕ್ಕೆ ಪರಮಾಧಿಕಾರ ನೀಡಲಾಗಿದೆ. ನ್ಯಾಯಾಲಯಗಳ ಕಾರ್ಯಚಟುವಟಿಕೆಗಳು ಸಂಪೂರ್ಣ ಸ್ವತಂತ್ರವಾಗಿರುವುದರಿಂದ ಕಾರ್ಮಿಕರು ತಮ್ಮ ನ್ಯಾಯಸಮ್ಮತ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದ ಅವರು, ಪ್ರಸ್ತುತ ದಿನಗಳಲ್ಲಿ ಅವರು ಶ್ರೀಮಂತರಿಗೆ, ಬುದ್ಧಿವಂತರಿಗೆ, ವಿಚಾರವಂತರಿಗೆ ನ್ಯಾಯಾಲಯಗಳ ಅವಶ್ಯಕತೆ ಬೀಳುವುದಿಲ್ಲ. ಕೆಳವರ್ಗದ ಹಾಗೂ ಕಾರ್ಮಿಕ ವರ್ಗದ ಜನತೆ ನ್ಯಾಯಪಡೆದು ಕೊಳ್ಳಲು ನ್ಯಾಯಾಲಯಗಳ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಕೇಂದ್ರ ಸರ್ಕಾರದ ಜಾಗತಿಕರಣ, ಖಾಸಗಿಕರಣ, ಉದ್ಧಾರಿಕರಣ, ಸಾರ್ವಜನಿಕರಿಗೆ ಮಾರಕವಾಗಿದೆ. ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಖಾಸಗಿ ಬಂಡವಾಳಗಾರರ ಪಾಲಾಗುತ್ತಿವೆ. ಕಾರ್ಮಿಕರ ರಕ್ಷಣೆಗಾಗಿ ಇದ್ದ 44 ಕಾಯ್ದೆಗಳನ್ನು ಕೇವಲ 4 ಕಾಯ್ದೆಗಳನ್ನಾಗಿ ಮಾಡುವ ಮೂಲಕ ಕಾರ್ಮಿಕರ ಹಕ್ಕನ್ನು ಧಮನ ಮಾಡಲಾಗುತ್ತಿದೆ. ವಿಶ್ವ ವಾಣಿಜ್ಯ ಸಂಸ್ಥೆ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ದೇಶದ ಕಾರ್ಮಿಕ ಕಾನೂನುಗಳಿಗೆ ಕುತ್ತು ಬಂದಿದೆ ಎಂದು ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎ. ಗಂಗಣ್ಣ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
