ಬೆಂಗಳೂರು:
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗಿಲ್ಲ.ಮೈತ್ರಿ ಹೀಗೆ ಮುಂದುವರಿದರೆ ಕಾಂಗ್ರೆಸ್ ಪಕ್ಷದ ಅಸ್ಥಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮೈತ್ರಿ ಲಾಭ – ನಷ್ಟದ ಬಗ್ಗೆ ಹೈಕಮಾಂಡ್ಗೆ ವರದಿ ನೀಡಿದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರ ಮತ್ತು ಕೆಲವು ಅತೃಪ್ತರ ಈ ಅಭಿಪ್ರಾಯದಿಂದ ಹೈಕಮಾಂಡ್ ಸಹ ಚಿಂತೆಗೊಳಗಾಗಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ನಂತರ ಕೆಪಿಸಿಸಿ ಮುಖಂಡರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಹೈಕಮಾಂಡ್ ನಿರೀಕ್ಷಿಸಿತ್ತು. ಆದರೆ ಚುನಾವಣೆ ನಂತರದ ಗುಪ್ತಚರ ಮಾಹಿತಿ ಹಾಗೂ ಸ್ಥಳೀಯ ಮುಖಂಡರ ವರದಿಗಳು ಆಶಾದಾಯಕವಾಗಿಲ್ಲವೆಂದು ತಿಳಿಸಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಮೈತ್ರಿಯ ಲಾಭ ನಷ್ಟದ ಲೆಕ್ಕಾಚಾರಗಳು ನಡೆಯತೊಡಗಿವೆ.
ಇನ್ನು ದೋಸ್ತಿ ಸರ್ಕಾರದಲ್ಲಿ ಅಧಿಕಾರ ಸಿಗದ ಕಾಂಗ್ರೆಸ್ ಹಿರಿಯ ನಾಯಕರು,ಜೆಡಿಎಸ್ ಸಹವಾಸದಿಂದ ದೂರ ಇರುವುದೇ ಒಳಿತು. ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಜೆಡಿಎಸ್ಗೆ ಹೆಚ್ವಿನ ಲಾಭವಾಗುತ್ತಿದೆಯೇ ಹೊರತು ಕಾಂಗ್ರೆಸ್ಗೆ ಅನುಕೂಲವಾಗುತ್ತಿಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟದೇ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದರೆ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಕೆ ಕುರಿತು ಕಾಂಗ್ರೆಸ್ ಪಕ್ಷ ಜಾಣ ರಾಜಕೀಯ ನಡೆ ಅನುಸರಿಸುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/1200px-Flag_of_the_Indian_National_Congress.svg_.png)