ಹಿರಿಯೂರು
ತಾಲೂಕಿನ ರಂಗೇನಹಳ್ಳಿ ಗ್ರಾಮಪಂಚಾಯಿತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು ಅ.2 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷೆ ಯಶೋಧಮ್ಮ ಹಾಗೂ ಪಿಡಿಒ ಸೌಮ್ಯ ಕೆ ಎಸ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಪ್ರಶಸ್ತಿ ಹಾಗೂ ಪುರಸ್ಕಾರದ ಮೊತ್ತ 5 ಲಕ್ಷ ರೂ ಚೆಕ್ ನ್ನು ಸ್ವೀಕರಿಸಿದರು.
ರಂಗೇನಹಳ್ಳಿ ಗ್ರಾಮಪಂಚಾಯತಿಯು 2017-18 ನೇ ಸಾಲಿನ ವಿವಿಧ ಯೋಜನೆಗಳ ಪ್ರಗತಿ ಮತ್ತು ಸ್ಥಳೀಯ ಸಂಪನ್ಮೂಲಗಳ ಕ್ರೋಢಿಕರಣದ ಆಧಾರದ ಮೇಲೆ ಈ ಪ್ರಶಸ್ತಿ ಸಂದಿದ್ದು ಧರ್ಮಪುರ ಹೋಬಳಿಯಲ್ಲಿರುವ ಈ ಪಂಚಾಯತಿ ಅಭಿವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ.ಪ್ರಸ್ತುತ ಪಂಚಾಯಿತಿಯು 6 ಗ್ರಾಮಗಳು 14 ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿವರ್ಗದವರ ಸಹಕಾರದಿಂದ ಈ ಪ್ರಶಸ್ತಿ ದೊರೆತಿದೆ ಎಂದು ಪಿಡಿಒ ರವರು ಹೇಳಿದರು.
ಕಳೆದ ವರ್ಷದಲ್ಲಿ ರಂಗೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಮುಖ ಯೋಜನೆಗಳಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 40 ಲಕ್ಷಗಳಷ್ಟು ಕಾಮಗಾರಿ ನಿರ್ವಹಿಸಿದ್ದು ಸಮುದಾಯ ಮತ್ತು ಕೃಷಿ ಆಧಾರಿತ ಕಾಮಗಾರಿಗಳು ,ಕುಡಿಯುವ ನೀರಿನ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. 14 ನೇ ಹಣಕಾಸು ಯೋಜನೆಯಡಿ 24 ಲಕ್ಷ ಕ್ರಿಯಾಯೋಜನೆ ತಯಾರಿಸಿದ್ದು ಶೇಕಡಾ 50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದು ಈಗ ಶೇಕಡಾ 90 ಕ್ಕಿಂತ ಹೆಚ್ಚು ಕಾಮಗಾರಿಗಳು ಪ್ರಗತಿಯಲ್ಲಿವೆ.ಶೌಚಾಲಯ ಪ್ರಗತಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ದಾಖಾಲಾತಿಗಳು ಪೂರ್ಣಗೊಂಡಿದ್ದು ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ.
ಜೊತೆಗೆ ಗ್ರಾಮಪಂಚಾಯತಿಯ ಸ್ಥಳೀಯ ಸಂಪನ್ಮೂಲ ಕ್ರೋಢಿಕರಣದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 2017-18 ನೇ ಸಾಲಿನಲ್ಲಿ 1.60 ಲಕ್ಷದಷ್ಟು ವಸೂಲಾತಿ ಮಾಡಲಾಗಿದ್ದು ಕೆರೆಗಳಲ್ಲಿ ಮೀನುಸಾಕಾಣಿಕೆ ,ಗ್ರಾ.ಪಂ ಒತ್ತುವರಿ ಆಸ್ತಿಗಳ ತೆರವು ಮಾಡುವುದರ ಮೂಲಕ ಮಾದರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








