ರಸ್ತೆ ಡಾಂಬರೀಕರಣಕ್ಕೆ ಶಾಸಕರಿಂದ ಚಾಲನೆ

ಚಿತ್ರದುರ್ಗ: 

           ನಗರದ 35 ವಾರ್ಡ್‍ಗಳಲ್ಲಿಯೂ ಯಾವ ಪಕ್ಷದ ಸದಸ್ಯರಾಗಲಿ, ಪಕ್ಷೇತರರಾಗಿ ಗೆದ್ದವರಾಗಲಿ ಯಾವುದೇ ತಾರತಮ್ಯವಿಲ್ಲದೆ ನಗರಸಭೆಯ ಅನುದಾನ ಬಂದ ಮೇಲೆ ಸಮಾನವಾಗಿ ಹಂಚಿಕೆ ಮಾಡಿ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

            ನಗರದ ಐದನೇ ವಾರ್ಡ್ ಧರ್ಮಶಾಲಾ ರಸ್ತೆಯಲ್ಲಿ ಭಾನುವಾರ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡುತ್ತ ಚುನಾವಣೆಯಲ್ಲಿ ಮಾತ್ರ ಪಕ್ಷದಿಂದ ಸ್ಪರ್ಧಿಸುವುದು ಅನಿವಾರ್ಯ ಗೆದ್ದ ಮೇಲೆ ಮತ ನೀಡಿದವರು, ನೀಡದವರು ಎಲ್ಲಾ ಜಾತಿ ವರ್ಗದವರು ನಮ್ಮವರೆ ಎಂದು ತಿಳಿದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡಿ ಎಂದು ನಗರಸಭೆ ನೂತನ ಸದಸ್ಯರುಗಳಿಗೆ ಕರೆ ನೀಡಿದರು.

              ಐದನೇ ವಾರ್ಡ್‍ನಲ್ಲಿ ರಸ್ತೆ, ಚರಂಡಿ, ಡೆಕ್ ಸೇರಿದಂತೆ ಐದು ಕೋಟಿ ರೂ.ಗಳ ಕೆಲಸ ನಡೆಯುತ್ತಿದೆ. ಕಳೆದ ಆರು ತಿಂಗಳ ಹಿಂದೆಯೇ ಕೋಮಲ ನರ್ಸಿಂಗ್ ಹೋಂ ಎದುರು ರಸ್ತೆಯನ್ನು ಅಗೆಯಲಾಗಿತ್ತು. ಕಾರಣಾಂತರಗಳಿಂದ ತಡವಾಯಿತು. ಮನೆಯವರು ಅಕ್ಕಪಕ್ಕದಲ್ಲಿ ನೀರಿನ ಟ್ಯಾಂಕ್‍ಗಳನ್ನು ಕಟ್ಟಿಕೊಂಡಿದ್ದರು. ದೊಡ್ಡ ದೊಡ್ಡ ಚರಂಡಿಗಳಿದ್ದುದರಿಂದ ಆರಂಭದಲ್ಲಿ ಕೆಲವರು ರಸ್ತೆ ಅಗಲೀಕರಣಕ್ಕೆ ಒಪ್ಪಲಿಲ್ಲ.

            ನಿಧಾನವಾಗಿ ಮನವೊಲಿಸಿ ಕೆಲಸ ಆರಂಭಿಸಲು ತಡವಾಯಿತು. ನಗರದಲ್ಲಿ ಯು.ಜಿ.ಡಿ.ಲೈನ್‍ಗಾಗಿ ರಸ್ತೆ ಅಗೆದಿದ್ದರಿಂದ ಸ್ವಲ್ಪ ಲೇಟಾಗಿ ರಸ್ತೆ ಅಭಿವೃದ್ದಿ ಕೆಲಸ ನಡೆಯುತ್ತಿದೆ. ಮುಂದೆ ಗ್ಯಾಸ್ ಪೈಪ್ ಲೈನ್ ಆರಂಭವಾಗುವಾಗಲೂ ರಸ್ತೆ ಅಗೆಯಬೇಕಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ಅಮೃತಸಿಟಿ ಯೋಜನೆಯಡಿ ಚಿತ್ರದುರ್ಗಕ್ಕೆ 140 ಕೋಟಿ ರೂ.ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ 112 ಕೋಟಿ ರೂ.ಕುಡಿಯುವ ನೀರು ಯೋಜನೆಗೆ ಬಳಸಲಾಗುತ್ತಿದೆ. ದೇಶದ ಎಲ್ಲಾ ನಗರ ಹಾಗೂ ಹಳ್ಳಿಗಳಿಗೆ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಪೂರೈಸಬೇಕೆಂಬುದು ಮೋದಿರವರ ಆಸೆ.

            ವಾರದಲ್ಲಿ ಮೂರ್ನಾಲ್ಕು ದಿನ ಬೆಳಿಗ್ಗೆ ಎರಡು ಗಂಟೆ ನಿಮ್ಮ ನಿಮ್ಮ ವಾರ್ಡ್‍ಗಳಲ್ಲಿ ಸಂಚರಿಸಿ ಜನರ ಕಷ್ಟ ಸುಖಗಳನ್ನು ಕೇಳಿ ಪರಿಹರಿಸುವ ಕೆಲಸ ಮಾಡಿ ಎಂದು ನೂತನ ಸದಸ್ಯರಿಗೆ ಕಿವಿಮಾತು ಹೇಳಿದ ಶಾಸಕರು ಚಳ್ಳಕೆರೆ ಟೋಲ್‍ಗೇಟ್‍ನಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ ಹತ್ತೊಂಬತ್ತು ಕೋಟಿ ರೂ.ಗಳು ಬೇಕು. ಪ್ರವಾಸಿಮಂದಿರದಿಂದ ಕನಕವೃತ್ತದವರೆಗೆ ರಸ್ತೆ ಅಗಲೀಕರಣಗೊಳಿಸಲು ಇನ್ನು 22 ಕೋಟಿ ರೂ.ಗಳು ಬೇಕಾಗುತ್ತದೆ. ಕೆಲವು ಕಡೆ ಬೇರೆ ದಾರಿಯಿಲ್ಲದೆ ಕಟ್ಟಡಗಳನ್ನು ಒಡೆಯಬೇಕಾಗುತ್ತದೆ. ನಗರದ ಅಭಿವೃದ್ದಿ ದೃಷ್ಟಿಯಿಂದ ಸಾರ್ವಜನಿಕರು ವ್ಯಾಪಾರ ವಹಿವಾಟುದಾರರು ಕೈಜೋಡಿಸುವಂತೆ ಮನವಿ ಮಾಡಿದರು.

             ನಗರಸಭೆ ಸದಸ್ಯ ಹರೀಶ್, ಮಾಜಿ ಸದಸ್ಯ ಖಾದರ್‍ಖಾನ್, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಡಿ.ಜಿ. ಪ್ರಾಣೇಶ್‍ರಾವ್. ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಟಿ.ಕೆ.ಚಂದ್ರಶೇಖರ್, ವಸಂತಕುಮಾರ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.ಬಿಜೆಪಿ.ವಕ್ತಾರ ನಾಗರಾಜ್‍ಬೇದ್ರೆ ಸೇರಿದಂತೆ ಐದನೆ ವಾರ್ಡ್‍ನ ಅನೇಕ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link