ಚಳ್ಳಕೆರೆ
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಕೆರೆಯ ಮಣ್ಣನ್ನು ನಿಯಮ ಬಾಹಿರವಾಗಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಮಣ್ಣನ್ನು ಮೇಲೆತ್ತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಉಪಯೋಗಿಸುತ್ತಿದ್ದು, ಕೇವಲ ಕೆರೆಯ ಕಪ್ಪ ಮಣ್ಣನ್ನು ಮಾತ್ರ ತೆಗೆಯಲು ಅವಕಾಶ ನೀಡಿದ್ದು, ದುರದ್ದೇಶದಿಂದಲೇ ಕೆರೆಯ ಫಲವತ್ತಾದ ಮಣ್ಣನ್ನು ಈ ಕಂಪನಿ ಮೇಲೆತ್ತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ಧಾರೆಂದು ಗ್ರಾಮಸ್ಥರು, ಕೆರೆ ಬಳಕೆದಾರರು ಹಾಗೂ ಕೆರೆ ಸಂರಕ್ಷಣಾ ಸಮಿತಿ ಆರೋಪಿಸಿದ್ಧಾರೆ.
ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಬಳ್ಳಾರಿ ಹಿರಿಯೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುತ್ತಿದ್ದು, ರಾಷ್ಟ್ರೀಯ ಹೆದ್ಧಾರಿ-150ಎ ರಸ್ತೆಗೆ ಸಣ್ಣ ನೀರಾವರಿ ಮೂಲಕ ಹೂಳು ಮಣ್ಣನ್ನು ಮಾತ್ರ ತೆಗೆದು ರಸ್ತೆ ಅಭಿವೃದ್ಧಿಗೆ ಉಪಯೋಗಸಬಹುದಾಗಿದೆ.
ಆದರೆ, ಸದರಿ ಕಂಪನಿಯವರು ಜೆಸಿಬಿ ಸಹಾಯದಿಂದ ಕೆರೆಯಲ್ಲಿ ಆಳಾವಾದ ಗುಂಡಿಯನ್ನು ತೆಗೆದು ಅದರಿಂದ ಕೆಂಪು ಫಲವತ್ತಾದ ಮಣ್ಣು ತೆಗೆದು ರಸ್ತೆ ಕಾಮಗಾರಿಗೆ ಉಪಯೋಗಿಸುತ್ತಿದ್ದಾರೆ. ಇದರಿಂದ ಈ ಕೆರೆಯ ಮಣ್ಣಿನಿಂದ ರೈತರಿಗೆ ಅನೇಕ ರೀತಿಯ ಉಪಯೋಗಗಳಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಬಹುತೇಕ ಫಲವತ್ತಾದ ಮಣ್ಣನ್ನು ಸದರಿ ಕಂಪನಿ ದುರುಪಯೋಗ ಪಡಿಸುತ್ತಿದ್ದು, ಇದರಿಂದ ನೂರಾರು ಗ್ರಾಮಸ್ಥರ ಸಾವಿರಾರು ಎಕರೆ ಜಮೀನಿನುಗಳಿಗೆ ಫಲವತ್ತಾದ ಮಣ್ಣು ದೊರೆಯದೆ ಉತ್ತಮ ಬೆಳೆ ಪಡೆಯಲು ಅಸಾಧ್ಯವೆನ್ನಿಸುತ್ತದೆ.
ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸದರಿ ಪಂಕನಿಯವರಿಗೆ ನಿರ್ಧಿಷ್ಟ ಸೂಚನೆ ನೀಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಕೆರೆ ಸಂರಕ್ಷಣಾ ಸಮಿತಿ ಹೋರಾಟಗಾರ ಕೋಡಿಹಳ್ಳಿ ಸೋಮಶೇಖರ, ಕೆರೆ ಸಂರಕ್ಷಣಾ ಸಮಿತಿಯ ಪ್ರಕಾಶ್, ಮಂಜುನಾಥ, ಸಣ್ಣ ತಿಪ್ಪಯ್ಯ, ಶಾಂತಣ್ಣ ಮುಂತಾದವರು ಒತ್ತಾಯಿಸಿದ್ಧಾರೆ.
ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸೋಮಶೇಖರ್ ತಿಳಿಸಿದ್ಧಾರೆ. ಈಗಾಗಲೇ ಕಳೆದ ಕೆಲವಾರು ತಿಂಗಳುಗಳಿಂದ ಫಲವತ್ತಾದ ಮಣ್ಣು ದುರುಪಯೋಗವಾಗುತ್ತಿದ್ದು, ತಾಲ್ಲೂಕು ಆಡಳಿತ ಕೂಡಲೇ ಈ ಕೆರೆಯ ಮಣ್ಣು ಸಾಗಾಣಿಕೆ ತಡೆಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ತಿಂಗಳ 20ರೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ಧಾರೆ.
ತಹಶೀಲ್ದಾರ್ ಭರವಸೆ :- ತಹಶೀಲ್ದಾರ್ರವರ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಮಂಜುನಾಥ ಮಾತನಾಡಿ, ಈಗಾಗಲೇ ಲೋಕಸಭಾ ಚುನಾವಣೆಯ ಕಾರ್ಯದಲ್ಲಿ ಸಿಬ್ಬಂದಿ ವರ್ಗ ತೊಡಗಿದ್ದು, ಚುನಾವಣೆಯ ನಂತರ ಈ ಬಗ್ಗೆ ಪರಿಶೀಲನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ, ಲೋಪವೆಸಗಿದ್ದು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದ ಎಂದು ಭರವಸೆ ನೀಡಿದ್ಧಾರೆ. ತಾಲ್ಲೂಕು ಆಡಳಿತ ನೀಡಿದ ಭರವಸೆ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥರು ಹಾಗೂ ಹೋರಾಟಗಾರರು ಮನವಿ ನೀಡಿ ಹಿಂತಿರುಗಿದ್ದು, 20ರ ನಂತರ ಮುಂದಿನ ಪ್ರತಿಭಟನೆಗಳ ರೂಪುರೇಷಗಳನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
